ಅಡ್ವಾನ್ಸ್ ಹಣ ವಾಪಸ್ ಕೊಡದ ಆರೋಪದಲ್ಲಿ ನಟಿ ರಚಿತಾ ರಾಮ್ ವಿರುದ್ಧ ಫಿಲ್ಮ್ ಚೇಂಬರ್ನಲ್ಲಿ ಮತ್ತೊಂದು ದೂರು ದಾಖಲಾಗಿದೆ.
‘ಉಪ್ಪಿ ರುಪ್ಪಿ’ ಸಿನಿಮಾಗಾಗಿ ಗುಳಿಕೆನ್ನೆ ಚೆಲುವೆ ರಚಿತಾ ರಾಮ್ಗೆ ಅಡ್ವಾನ್ಸ್ ನೀಡಲಾಗಿತ್ತು. ಈಗ ಹಣ ವಾಪಸ್ ಕೊಡದೇ ನಿರ್ಮಾಪಕಿಯನ್ನು ಸತಾಯಿಸುತ್ತಿದ್ದಾರೆಂದು ದೂರಲಾಗಿದೆ.
8 ವರ್ಷಗಳ ಹಿಂದೆ ಉಪ್ಪಿ ಮತ್ತು ರಚಿತಾ ನಟನೆಯಲ್ಲಿ ಸಿನಿಮಾ ಮೂಡಿಬರಬೇಕಿತ್ತು. ‘ಉಪ್ಪಿ ರುಪ್ಪಿ’ ಸಿನಿಮಾದಲ್ಲಿ ಉಪೇಂದ್ರ ಜೊತೆ ನಟಿಸಲು ನಟಿ ಒಪ್ಪಿಕೊಂಡಿದ್ದರು. ಈ ಸಿನಿಮಾವನ್ನು ವಿಜಯಲಕ್ಷ್ಮಿ ಅರಸ್ ನಿರ್ಮಾಣ ಮತ್ತು ಕೆ.ಮಾದೇಶ್ ನಿರ್ದೇಶನ ಮಾಡುವುದಿತ್ತು.
23 ಲಕ್ಷ ಸಂಭಾವನೆಗೆ ನಟಿ ಕಮಿಟ್ ಆಗಿದ್ದರು. ಮುಂಗಡವಾಗಿ 13 ಲಕ್ಷ ಅಡ್ವಾನ್ಸ್ ರೂಪದಲ್ಲಿ ಹಣ ಪಡೆದಿದ್ದರು. 2017 ರಲ್ಲಿ ಬ್ಯಾಂಕಾಕ್ನಲ್ಲಿ ಶೂಟಿಂಗ್ಗೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಬರುವುದಾಗಿ ಒಪ್ಪಿಕೊಂಡು ರಚಿತಾ ರಾಮ್ಗೆ ಟಿಕೆಟ್ ಬುಕ್ ಮಾಡಿದ್ದರು. ಆದರೆ, ಬಂದಿರಲಿಲ್ಲ. 15 ದಿನಗಳ ಕಾಲ ಈಗ ಬರ್ತೀನಿ, ಆಗ ಬರ್ತೀನಿ ಅಂತಾ ಸತಾಯಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಸೂಟ್ ರೂಮ್ ಬುಕ್ ಮಾಡಿಕೊಂಡು 15 ದಿನ ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್ ಕಾದಿದ್ದರು. ಬಂದ ಜಾಗಕ್ಕೆ ಸುಂಕವಿಲ್ಲ ಎಂದು ಹೀರೊ ಪೋರ್ಷನ್ ಶೂಟ್ ಮಾಡಿಕೊಂಡು ಚಿತ್ರತಂಡ ವಾಪಸ್ ಆಗಿತ್ತು. ರಚಿತಾ ರಾಮ್ನಿಂದ ನಿರ್ಮಾಪಕಿ ಒಂದೂವರೆ ಕೋಟಿ ಕಳೆದುಕೊಂಡರು ಎನ್ನಲಾಗಿದೆ. ಒಂದು ದಿನ ಮಾತ್ರ ಮೈಸೂರಿನಲ್ಲಿ ನಡೆದ ಸಿನಿಮಾ ಶೂಟಿಂಗ್ನಲ್ಲಿ ನಟಿ ಭಾಗಿಯಾಗಿದ್ದರು. ನಟಿ ಕಾರಣದಿಂದ ಸಿನಿಮಾ ಅರ್ಧಕ್ಕೆ ನಿಂತು ಹೋಯಿತು.
35 ಪರ್ಸೆಂಟ್ ಮಾತ್ರ ಕಂಪ್ಲೀಟ್ ಆಗಿ ಸಿನಿಮಾ ನಿಂತು ಹೋಯಿತು. ಹಣವೂ ಇಲ್ಲ ಸಿನಿಮಾನೂ ಕಂಪ್ಲೀಟ್ ಇಲ್ಲ ಎನ್ನುವಂತಾಯಿತು. ಅವತ್ತಿನಿಂದ ಸಂಪರ್ಕಕ್ಕೆ ಸಿಗದೇ ನಟಿ ಸತಾಯಿಸುತ್ತಿದ್ದರು. ಕೊನೆಯದಾಗಿ ಫಿಲ್ಮ್ ಚೇಂಬರ್ಗೆ ನಿರ್ಮಾಪಕಿ ದೂರು ಕೊಟ್ಟಿದ್ದಾರೆ.