ಪ್ರವಾಸಕ್ಕೆಂದು ಕಾರು ಬುಕ್ ಮಾಡಿ ಕ್ಷಣಾರ್ಧದಲ್ಲೇ ಕಳವುಗೈದ!

Public TV
1 Min Read

– 22 ಲಕ್ಷ ಮೌಲ್ಯದ ಕಾರ್ ಕಳ್ಳತನ

ಬೆಂಗಳೂರು: ಪ್ರವಾಸಕ್ಕೆ ಎಂದು ಕಾರು ಬುಕ್ ಮಾಡಿ ಕಾರನ್ನ ಕಳ್ಳತನ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅರುಣ್ ಕುಮಾರ್ ಎಂಬವರು ಕಾರನ್ನ ಕಳೆದುಕೊಂಡಿರುವ ಚಾಲಕ. 22 ಲಕ್ಷ ಮೌಲ್ಯದ ಕ್ರಿಸ್ಟ್ ಕಾರನ್ನ ಆರೋಪಿ ಕಳ್ಳತನ ಮಾಡಿದ್ದಾನೆ.

ಜಸ್ಟ್ ಡಯಲ್ ಮೂಲಕ ಸೌಮ್ಯ ಟೂರ್ಸ್ ಅಂಡ್ ಟ್ರಾವೆಲ್ಸ್ ಅನ್ನು ಆರೋಪಿ ಸಂಪರ್ಕಿಸಿದ್ದು ಕಾರನ್ನ ಬುಕ್ ಮಾಡಿದ್ದಾನೆ. ಟ್ರಾವೆಲ್ಸ್ ಅವರು ಬೆಂಗಳೂರಿನಿಂದ ಕಾರು ಬುಕ್ ಆಗಿದೆ ಮೈಸೂರಿಗೆ ಹೋಗುವಂತೆ ಹೇಳಿದ್ದರು. ಚಾಲಕ ಅರುಣ್ ಕುಮಾರ್ ಕಾನಿಷ್ಕಾ ಹೋಟೆಲ್‍ಗೆ ಹೋಗಿ ಪ್ರಯಾಣಿಕನನ್ನ ಪಿಕ್‍ಅಪ್ ಮಾಡಿದ್ದಾನೆ. ಈ ವೇಳೆ ಕಾರು ಹತ್ತಿದ್ದ ಪ್ರಯಾಣಿಕ ಚಾಲಕ ಅರುಣ್ ಕುಮಾರ್ ನನ್ನು ನಾಯಂಡಹಳ್ಳಿ ಮೆಟ್ರೋ ಸ್ಟೇಷನ್ ಬಳಿಗೆ ತೆರಳುವಂತೆ ಹೇಳಿದ್ದಾನೆ.

ಮೆಟ್ರೋ ಸ್ಟೇಷನ್ ಬಳಿಯ ಮಿಸ್ ಚಿಫ್ ಹೋಟೆಲ್‍ನ ರೂಮ್ ನಂ 105ರಲ್ಲಿ ನನ್ನ ಸ್ನೇಹಿತ ಇದ್ದಾನೆ. ಆತ ಬಳಿ ಹಣ ಕಲೆಕ್ಟ್ ಮಾಡಿಕೊಳ್ಳಬೇಕು. ಹೀಗಾಗಿ ಮೆಟ್ರೋ ಸ್ಟೇಷನ್ ಕಡೆ ಹೋಗು ಎಂದು ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಆರೋಪಿ ಪ್ರಯಾಣಿಕ ಚಾಲಕ ಅರುಣ್ ಕುಮಾರ್ ಗೆ ಹೋಟೆಲ್ ಒಳಗೆ ಹೋಗಿ 10 ಸಾವಿರ ಹಣ ಕೊಡುತ್ತಾರೆ ತೆಗೆದುಕೊಂಡು ಬಾ ಎಂದು ಕಳಿಸಿದ್ದಾನೆ. ಹೋಗುವ ಮೊದಲು ಎಸಿ ಆನ್ ಮಾಡಿ ಹೋಗುವಂತೆ ಹೇಳಿದ್ದನು.

ಚಾಲಕ ಎಸಿ ಆನ್ ಮಾಡಿ, ಕೀ ಕಾರಿನಲ್ಲೆ ಬಿಟ್ಟು ಹಣ ತೆಗೆದುಕೊಂಡು ಬರಲು ಹೋದಾಗ ಕಾರ್ ಸಮೇತ ಆರೋಪಿ ಎಸ್ಕೇಪ್ ಆಗಿದ್ದಾನೆ. ವಾಪಸ್ ಚಾಲಕ ಅರುಣ್ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಸದ್ಯಕ್ಕೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗೆ ಪೊಲೀಸರು ಬಲೆ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *