ಕಾರಿನ ಮೇಲೆ ಲಾರಿ ಪಲ್ಟಿ – ಎಳನೀರು ಕುಡಿಯುತ್ತಿದ್ದ ಚಾಲಕ, ಇಬ್ಬರು ಮಕ್ಕಳ ದುರ್ಮರಣ

Public TV
1 Min Read

ಚಾಮರಾಜನಗರ: ಕಾರಿನ ಮೇಲೆ ಲಾರಿಯೊಂದು ಪಲ್ಟಿ ಹೊಡೆದ ಪರಿಣಾಮ ಕಾರು ಚಾಲಕ ಸೇರಿದಂತೆ ಇಬ್ಬರು ಮಕ್ಕಳು ಮೃತಪಟ್ಟು, ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಜಿಲ್ಲೆಯ ಸೋಮವಾರಪೇಟೆಯಲ್ಲಿ ನಡೆದಿದೆ.

ಚಾಮರಾಜನಗರದ 209 ರಾಷ್ಟ್ರೀಯ ಹೆದ್ದಾರಿಯಲ್ಲಿ ಅವಘಡ ಸಂಭವಿಸಿದೆ. ಮೃತರನ್ನು ಸಿದ್ದರಾಮ, ಮಕ್ಕಳಾದ ಸಂಕೇತ್ ಕುಮಾರ್ ಮತ್ತು ಲಕ್ಷ್ಮೀಕಾಂತ್ ಎಂದು ಗುರುತಿಸಲಾಗಿದೆ.

ವಿಜಯಪುರ ಜಿಲ್ಲೆಯ ಹಿಂಡಿ ತಾಲೂಕಿನ ಕುಳ್ಳುರುಗಿಯ ಮೂಲದವರು ತಮಿಳುನಾಡಿನ ಪ್ರವಾಸ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದರು. ಈ ವೇಳೆ ಚಾಮರಾಜನಗರದ ಸೋಮವಾರಪೇಟೆ ಬಳಿ ಕಾರು ನಿಲ್ಲಿಸಿ ಎಳನೀರು ಕುಡಿಯುತ್ತಿದ್ದರು.

ಇದೇ ಸಂದರ್ಭದಲ್ಲಿ ಜೋಳ ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ತಮಿಳುನಾಡಿನತ್ತ ಸಂಚರಿಸುತ್ತಿತ್ತು. ವೇಗವಾಗಿ ಬಂದ ಲಾರಿ ಕಾರಿನ ಮೇಲೆ ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ ಕಾರಿನಲ್ಲಿ ಕೂತಿದ್ದ ಕಾರು ಚಾಲಕ ಮತ್ತು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾರಿನಲ್ಲಿ ಕುಳಿತಿದ್ದ ಇನ್ನುಳಿದ ಮೂರು ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಾರಿ ವೇಗವಾಗಿ ಬಂದಿದ್ದೆ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಸದ್ಯ ಚಾಮರಾಜನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *