ಊಟ ಮುಗಿಸಿ ಕಾಲೇಜು ಕಡೆ ಹೋಗುವಾಗ ಸ್ಕೂಟಿಗೆ ಕಾರ್ ಡಿಕ್ಕಿ- ವ್ಯಕ್ತಿ ಸಾವು

Public TV
1 Min Read

ರಾಮನಗರ: ಸ್ಕೂಟಿಗೆ ಇನ್ನೋವಾ ಕಾರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಓರ್ವ ಸಾವನ್ನಪ್ಪಿದ್ದು ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯ ಚನ್ನಪಟ್ಟಣದ ಮುದುಗೆರೆ ಸಮೀಪದಲ್ಲಿ ನಡೆದಿದೆ.

ಬೆಂಗಳೂರಿನ ಜಯನಗರ ನಿವಾಸಿ ಮಂಜುನಾಥ್ ಮೃತ ದುರ್ದೈವಿ. ಚನ್ನಪಟ್ಟಣ ತಾಲೂಕಿನ ಸಂಪೂರ್ಣ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪೇಂಟಿಂಗ್ ಕೆಲಸ ಮಾಡ್ತಿದ್ದ ಮಂಜುನಾಥ್ ಊಟಕ್ಕೆಂದು ಮುದುಗೆರೆ ಗೇಟ್‍ಗೆ ತನ್ನ ಸ್ನೇಹಿತನ ಜೊತೆ ಬಂದಿದ್ದರು.

ಊಟ ಮುಗಿಸಿ ಮತ್ತೆ ಕಾಲೇಜು ಕಡೆಗೆ ತೆರಳಲು ರಸ್ತೆ ದಾಟಲು ಮುಂದಾದ ವೇಳೆ ವೇಗವಾಗಿ ಬಂದ ಇನ್ನೋವಾ ಕಾರ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮತ್ತೋರ್ವನಿಗೆ ಗಂಭೀರ ಗಾಯಗಳಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಅಲ್ಲದೆ ಡಿಕ್ಕಿ ಹೊಡೆದ ನಂತರ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರ್ ಪಲ್ಟಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಸದ್ಯ ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆ ಸಂಬಂಧ ಚನ್ನಪಟ್ಟಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *