ಜೈಶಂಕರ್‌ ಸುದ್ದಿಗೋಷ್ಠಿ ಪ್ರಸಾರ – ಕೆನಡಾದಲ್ಲಿ ಆಸ್ಟ್ರೇಲಿಯಾ ಟುಡೇ ಬ್ಯಾನ್‌

Public TV
1 Min Read

ನವದೆಹಲಿ: ಆಸ್ಟ್ರೇಲಿಯಾದಲ್ಲಿ ಭಾರತ-ಕೆನಡಾ (India-Canada) ರಾಜತಾಂತ್ರಿಕ ಬಿಕ್ಕಟ್ಟಿನ ಬಗ್ಗೆ ಹೇಳಿಕೆ ನೀಡಿದ ವಿದೇಶಾಂಗ ಸಚಿವ ಜೈಶಂಕರ್‌(S Jaishankar) ಅವರ ಸುದ್ದಿಗೋಷ್ಠಿಯನ್ನು ಪ್ರಸಾರ ಮಾಡಿದ್ದಕ್ಕೆ ಅಸ್ಟ್ರೇಲಿಯಾ ಟುಡೇಯನ್ನು (Australia Today) ಕೆನಡಾ ನಿಷೇಧಿಸಿದೆ.

ಸಿಡ್ನಿಯಲ್ಲಿ ಜೈಶಂಕರ್ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರಗಳ ಖಾತೆಯ ಸಚಿವೆ ಪೆನ್ನಿ ವಾಂಗ್ ಅವರ ಜಂಟಿ ಮಾಧ್ಯಮಗೋಷ್ಠಿಯನ್ನು ಆಸ್ಟ್ರೇಲಿಯಾ ಟುಡೇ ಪ್ರಸಾರ ಮಾಡಿತ್ತು. ಮಾಧ್ಯಮಗೋಷ್ಠಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ಜಸ್ಟಿನ್‌ ಟ್ರುಡೋ ನೇತೃತ್ವದ ಕೆನಡಾ ಸರ್ಕಾರ ಆಸ್ಟ್ರೇಲಿಯಾ ಟುಡೇಯನ್ನು ನಿಷೇಧಿಸಿದೆ.


ಈ ವಿಚಾರದ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಪ್ರತಿಕ್ರಿಯಿಸಿ, ಆಸ್ಟ್ರೇಲಿಯಾ ಟುಡೇಯನ್ನು ನಿಷೇಧಿಸಿದ ಕೆನಡಾ (Canada) ನಿರ್ಧಾರ ಆಶ್ಚರ್ಯ ತಂದಿದೆ. ವಾಕ್‌ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಕೆನಡಾದ ಬೂಟಾಟಿಕೆಯನ್ನು ಇದು ತೋರಿಸುತ್ತದೆ ಎಂದು ಕಿಡಿಕಾರಿದರು.

ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳು ಮತ್ತು ವೆಬ್‌ಸೈಟ್‌ ಅನ್ನು ನಿರ್ಬಂಧಿಸಲಾಗಿದೆ. ಕೆನಡಾದ ವೀಕ್ಷಕರಿಗೆ ಈ ವೆಬ್‌ಸೈಟ್‌ ಲಭ್ಯವಿಲ್ಲ ಎನ್ನುವುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಜೈಶಂಕರ್‌ ಸುದ್ದಿಗೋಷ್ಠಿ ನಡೆಸಿದ ಕೆಲ ಗಂಟೆಯಲ್ಲಿ ಕೆನಡಾ ಈ ನಿರ್ಧಾರ ಕೈಗೊಂಡಿದೆ ಎಂದು ದೂರಿದರು.

ಎಸ್‌ ಜೈಶಂಕರ್‌ ಅವರು ಸುದ್ದಿಗೋಷ್ಠಿಯಲ್ಲಿ, ಯಾವುದೇ ನಿರ್ದಿಷ್ಟ ಪುರಾವೆಗಳಿಲ್ಲದೆ ನಮ್ಮ ಮೇಲೆ ಕೆನಡಾ ಆರೋಪಗಳನ್ನು ಮಾಡುತ್ತಿದೆ. ಭಾರತೀಯ ರಾಜತಾಂತ್ರಿಕರ ಮೇಲೆ ಕೆನಡಾ ಕಣ್ಗಾವಲು ಇರಿಸಿದೆ. ಕೆನಡಾದಲ್ಲಿ ಭಾರತ ವಿರೋಧಿ ವ್ಯಕ್ತಿಗಳಿಗೆ ರಾಜಕೀಯವಾಗಿ ಆಶ್ರಯ ನೀಡಲಾಗಿದೆ ಎಂದು ವಾಗ್ದಾಳಿ ನಡೆಸಿದ್ದರು.

 

Share This Article