ಕ್ಯಾಮೆರಾ ಎಳೆದಾಡಿ ಬಾಬಾನ ರೌಡಿ ಬೆಂಬಲಿಗರಿಂದ ಪತ್ರಕರ್ತರ ಮೇಲೆ ಅಟ್ಯಾಕ್: ವಿಡಿಯೋ ನೋಡಿ

Public TV
1 Min Read

ಚಂಡೀಗಢ: ಅತ್ಯಾಚಾರ ಆರೋಪಿ ಬಾಬಾ ಗುರ್ಮಿತ್ ರಾಮ್ ರಹೀಂ ಸಿಂಗ್ ಗೆ ಸಿಬಿಐ ಕೋರ್ಟ್ ಸೋಮವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.

ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆಗಳಿರುವುದರಿಂದ ಬಾಬಾ ಭಕ್ತರಲ್ಲಿ ಇದೀಗ ಆತಂಕ ಮಡುಗಟ್ಟಿದೆ. ಈ ನಡುವೆ ಸಿರ್ಸಾದಲ್ಲಿರುವ ಮುಖ್ಯ ಆಶ್ರಮದಿಂದ ಬಾಬಾ ಭಕ್ತರನ್ನು ಹೊರಗೆ ಕಳಿಸಲು ಸೇನೆ ಹರಸಾಹಸ ಪಡುತ್ತಿದೆ. ಆದ್ರೆ, 30 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಬಾಬಾ ಭಕ್ತರು ಆಶ್ರಮದಿಂದ ಹೊರಬರಲು ನಿರಾಕರಿಸುತ್ತಿದ್ದಾರೆ. ಸದ್ಯ ಆಶ್ರಮವನ್ನು ಸೇನೆ ಸುತ್ತುವರೆದಿದೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ ಆಗಿದೆ.

ಬಾಬಾ ಗುರ್ಮಿತ್ ರಾಮ್ ರಹೀಂ ಸಿಂಗ್ ಬಂಧನದ ಬಳಿಕ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಒಂದು ದಿನ ಶಾಂತವಾಗಿದ್ದಂತೆ ಕಂಡುಬಂದಿದ್ದ ಪರಿಸ್ಥಿತಿ ಶಿಕ್ಷೆ ಪ್ರಮಾಣ ಪ್ರಕಟ ಮಾಡುವ ಕೆಲವೇ ಗಂಟೆಗಳಿಗೆ ಮೊದಲು ಮತ್ತೆ ಹಿಂಸೆ ಭುಗಿಲೆದ್ದಿದೆ. ದೇರಾ ಸಾಚಾ ಸೌದ(ಡಿಎಸ್‍ಎಸ್) ಮುಖ್ಯ ಆಶ್ರಮ ಇರುವ ಸಿರ್ಸಾದಲ್ಲಿ ಮಾಧ್ಯಮಗಳನ್ನು ಗುರಿಯಾಗಿಸಿಕೊಂಡು ಬಾಬಾನ ಗೂಂಡಾ ಬೆಂಬಲಿಗರು ಕಲ್ಲು ತೂರಾಟ ನಡೆಸಿದ್ದಾರೆ.

ಆಶ್ರಮದ ಆವರಣಕ್ಕೆ ಮಾಧ್ಯಮದವರು ತಮ್ಮ ಕಾರಿನಲ್ಲಿ ಚಲಿಸುತ್ತಿದ್ದಂತೆಯೇ ಬಾಬಾ ಅನುಯಾಯಿಗಳು ಕಾರನ್ನು ಚೇಸ್ ಮಾಡಿದ್ದಾರೆ. ಅಲ್ಲದೇ ಪತ್ರಕರ್ತರ ಮೇಲೆ ದಾಳಿ ನಡೆಸಿದ್ದಾರೆ. ಇದರಿಂದ ಕ್ಯಾಮೆರಾಕ್ಕೆ ಹಾನಿಯಾಗಿದ್ದು, ಕಾರಿನ ಗಾಜು ಪುಡಿಪುಡಿಯಾಗಿದೆ. ಅಲ್ಲದೇ ವರದಿಗಾರರ ಕೈಗೆ ಹಾಗೂ ಕಾಲಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಳೆ ಅತ್ಯಾಚಾರಿ ಬಾಬಾಗೆ ಶಿಕ್ಷೆ ಪ್ರಕಟವಾಗ್ತಿದ್ದು, ಕೋರ್ಟ್ ಪ್ರಕ್ರಿಯೆ ಎಲ್ಲವೂ ರೋಹ್ತಕ್ ಜೈಲಿಗೆ ಸ್ಥಳಾಂತರವಾಗುತ್ತಿದೆ. ಸಿಬಿಐ ಸ್ಪೆಷಲ್ ಕೋರ್ಟ್ ಜಡ್ಜ್ ಜಗದೀಪ್ ಸಿಂಗ್‍ಗೆ ಎಸ್‍ಎಂಜಿ ಭಕ್ತರಿಂದ ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಮಾಣವನ್ನು ಕಾರಾಗೃದಲ್ಲೇ ಪ್ರಕಟಿಸಲಿದ್ದಾರೆ. ಹೀಗಾಗಿ ಜೈಲು ಬಿಗಿ ಭದ್ರತೆ ಕೋಟೆಯಂತಾಗಿದೆ. ಅಲ್ಲದೇ ನ್ಯಾಯಾಧೀಶರಿಗೂ ಕೂಡ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಕೆಲ ರೌಡಿ ಭಕ್ತರನ್ನು ಪೊಲೀಸರು ತಮ್ಮ ವಶದಲ್ಲಿರಿಸಿಕೊಂಡಿದ್ದಾರೆ. ಇಷ್ಟಾದ್ರೂ ಕೆಲ ಪುಂಡ ಭಕ್ತರು ಒಂದೆಡೆ ಸೇರಿ ನಾಳೆಗೆ ವ್ಯವಸ್ಥಿತ ಸಂಚು ರೂಪಿಸುತ್ತಿದ್ದಾರೆ ಎನ್ನಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *