ಹಾವುಗಳು ಕಾಣಿಸಿದರೆ ಗಾಬರಿಗೊಳ್ಳದಿರಿ, ಬಡಿದು ಕೊಲ್ಲದಿರಿ – ಉರಗ ರಕ್ಷಣೆಗೆ ಬಿಬಿಎಂಪಿ ಸಹಾಯವಾಣಿ ಬಿಡುಗಡೆ

Public TV
2 Min Read

ಬೆಂಗಳೂರು: ಬೇಸಿಗೆ (Summer Season) ಬಂತೆಂದರೆ ಬಿಸಿಲಿನ ತಾಪದಿಂದ ಪಾರಾಗಲು ತಣ್ಣನೆಯ ವಾತಾವರಣ ಅರಸಿ ಜನವಸತಿ ಪ್ರದೇಶಗಳತ್ತ ಹಾವುಗಳು (Snakes) ಬರುವುದು ಸಹಜ. ತಂಪು ವಾತಾವರಣ ಹರಸುತ್ತಾ ದೇಹವನ್ನು ಸಮತೋಲನದಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸುತ್ತವೆ. ಆದ್ದರಿಂದಲೇ ಬೇಸಿಗೆ ಸಮಯದಲ್ಲಿ ಸಂದುಗಳನ್ನ ಹುಡುಕುತ್ತವೆ ಇದೇ ವೇಳೆ ಮನೆಗಳಿಗೂ ಬರಬಹುದು. ಇದರಿಂದ ಆತಂಕಗೊಳ್ಳುವ ಕೆಲವರು ಹಾವುಗಳನ್ನು ಹೊಡೆದು ಕೊಲ್ಲುತ್ತಾರೆ, ಇನ್ನೂ ಕೆಲವರು ಉರಗ ರಕ್ಷಕರಿಗೆ ತಿಳಿಸಿ ರಕ್ಷಣೆ ಮಾಡುತ್ತಾರೆ.

ಇದೀಗ‌ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯೂ ಹಾವುಗಳ ರಕ್ಷಣೆಗೆ ಮುಂದಾಗಿದೆ. ಮನೆಯ ಸುತ್ತಮುತ್ತ ಹಾವುಗಳು ಕಂಡರೆ ಅವುಗಳನ್ನು ರಕ್ಷಿಸಲು ಕೂಡಲೇ ಮಾಹಿತಿ ನೀಡುವಂತೆ ಸಹಾಯವಾಣಿ ಬಿಡುಗಡೆ ಮಾಡಿದೆ. ಈ ಕುರಿತು ಡಿಐಪಿಆರ್‌ ಕರ್ನಾಟಕ ಎಕ್ಸ್‌ ಖಾತೆಯಲ್ಲಿ ಮಾಹಿತಿಯನ್ನೂ ಹಂಚಿಕೊಂಡಿದೆ.

ಮೇ ತಿಂಗಳು ಉರಗಗಳ ಸಂತಾನೋತ್ಪತ್ತಿ ಸಮಯ. ಮುಖ್ಯವಾಗಿ ಸರ್ಪಗಳ ಮೊಟ್ಟೆಗಳು ಒಡೆದು ಮರಿಗಳು ಹೊರಬರುವ ಕಾಲವಾಗಿದೆ. ಈ ಸಮಯದಲ್ಲಿ ಹೆಚ್ಚು ಹಾವುಗಳು ಕಾಣಸಿಗುತ್ತದೆ. ಗಾಬರಿಗೊಳ್ಳದಿರಿ ಹಾಗೂ ಅದನ್ನು ಬಡಿದು ಕೊಲ್ಲದಿರಿ. ಹಾವುಗಳ ರಕ್ಷಣೆಗಾಗಿ ಬಿಬಿಎಂಪಿ ಸಹಾಯವಾಣಿ (BBMP Helpline) 9902794711 ಗೆ ಕರೆ ಮಾಡಿ ಎಂದು ತಿಳಿಸಿದೆ.

ಹಾವುಗಳನ್ನು ಹಿಡಿಯುವುದು, ಕೊಲ್ಲುವುದು ಶಿಕ್ಷಾರ್ಹ ಅಪರಾಧ ಏಕೆ?
1972ರ ವನ್ಯಜೀವಿ ಸಂರಕ್ಷಣೆ ಕಾಯ್ದೆ ಅನ್ವಯ ಹಾವುಗಳನ್ನು ಕೊಲ್ಲುವುದು, ಸ್ಥಳಾಂತರ ಮಾಡುವುದು, ಓಡಿಸುವುದು, ಸೆರೆ ಹಿಡಿಯುವುದು, ಬಲೆಗೆ ಬೀಳಿಸುವುದು, ದೇಹದ ಅಂಗಗಳನ್ನು ತೆಗೆಯುವುದು, ಮೊಟ್ಟೆಯ ಗೂಡು ನಾಶ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದನ್ನೂ ಓದಿ: ಸ್ಟೆಪ್‌ಲ್ಯಾಡರ್ ಎಡವಟ್ಟು- ವಿಮಾನದಿಂದ ಇಳಿಯಲು ಯತ್ನಿಸಿ ಕೆಳಗೆ ಬಿದ್ದ ಸಿಬ್ಬಂದಿ ವೀಡಿಯೋ ವೈರಲ್‌

ಪ್ರಮಾಣೀಕೃತ ಪರವಾನಗಿ ಪಡೆದ ಪರಿಣಿತರು, ಉರಗ ತಜ್ಞರು ಮಾತ್ರ ಹಾವು ಹಿಡಿಯಲು ಅರ್ಹರು. ನಿರ್ವಹಣೆ ಗೊತ್ತಿಲ್ಲದವರು ಹಿಡಿಯುವುದರಿಂದ ಅಪಾಯ ಉಂಟಾಗುವ ಸಾಧ್ಯತೆಯೇ ಹೆಚ್ಚು. ಮನುಷ್ಯ-ಹಾವುಗಳ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆ ಅರಿವು ಕಾರ‍್ಯಕ್ರಮ ಜಾರಿಗೆ ತಂದಿದೆ. ಇದನ್ನೂ ಓದಿ: ಉಚಿತ ಪಡಿತರ ಜನರ ತೆರಿಗೆ ಹಣದಿಂದ ನೀಡಲಾಗುತ್ತಿದೆ, ದಯೆ ರೂಪದಲ್ಲಿ ಬಿಂಬಿಸುವ ಅಗತ್ಯವಿಲ್ಲ: ಮಾಯಾವತಿ ಟೀಕೆ

Share This Article