ಕರು ಸತ್ತಿದ್ದಕೆ ಪ್ರಾಯಶ್ಚಿತ್ತವಾಗಿ ಭಿಕ್ಷೆ ಬೇಡುವಂತೆ ಮಹಿಳೆಗೆ ಆದೇಶ!

Public TV
1 Min Read

ಭೋಪಾಲ್: ಆಕಸ್ಮಿಕವಾಗಿ ಕರುವಿನ ಸಾವಿಗೆ ಕಾರಣವಾಗಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಒಂದು ವಾರ ಭಿಕ್ಷೆ ಬೇಡುವಂತೆ 55 ವರ್ಷದ ಮಹಿಳೆಗೆ ಆದೇಶ ನೀಡಿದ ಘಟನೆ ಮಧ್ಯಪ್ರದೇಶದಲ್ಲಿ ಭಿಂಡ್‍ನಲ್ಲಿ ನಡೆದಿದೆ.

ಭಿಕ್ಷೆ ಬೇಡಿ ಬಂದ ಹಣದಲ್ಲಿ ಮಹಿಳೆ ಗಂಗಾ ನದಿಗೆ ಹೋಗಿ ಪ್ರಾಯಶ್ಚಿತ್ತದ ಭಾಗವಾಗಿ ಅಲ್ಲಿ ಮುಳುಗೇಳಬೇಕು ಎಂದು ಇಲ್ಲಿನ ಗ್ರಾಮ ಪಂಚಾಯತ್ ಹೇಳಿದೆ. ಆಗಸ್ಟ್ 31ರಂದು ಇಲ್ಲಿನ ಮಟಾಡಿನ್ ಗ್ರಾಮದ ನಿವಾಸಿ ಕಮಲೇಶ್, ತಾಯಿ ಹಸುವಿನಿಂದ ಕರುವನ್ನ ದೂರಕ್ಕೆ ಎಳೆಯುತ್ತಿದ್ದರು. ಈ ವೇಳೆ ಹಗ್ಗ ಕರುವಿನ ಕತ್ತಿಗೆ ಸುಲುಕಿಕೊಂಡು ಸಾವನ್ನಪ್ಪಿತ್ತು.

ನಂತರ ಸ್ಥಳೀಯ ಪಂಚಾಯತ್ ಮಹಿಳೆಗೆ ಹತ್ತಿರದ ಗ್ರಾಮಗಳಲ್ಲಿ ಒಂದು ವಾರ ಭಿಕ್ಷೆ ಬೇಡಬೇಕು. ಇಲ್ಲವಾದಲ್ಲಿ ಜೀವನಪೂರ್ತಿ ಬಹಿಷ್ಕಾರ ಅನುಭವಿಸಬೇಕಾಗುತ್ತದೆ ಎಂದು ಹೇಳಿತ್ತು. ಮಹಿಳೆಯನ್ನ 7 ದಿನಗಳವರೆಗೆ ಬಹಿಷ್ಕರಿಸಲಾಗಿತ್ತು. ಆಕೆಗೆ ಗ್ರಾಮದೊಳಗೆ ಪ್ರವೇಶವನ್ನೂ ನಿರಾಕರಿಸಲಾಗಿತ್ತು ಎಂದು ಮಹಿಳೆಯ ಮಗ ಅನಿಲ್ ಶ್ರೀವಾಸ್ ಹೇಳಿದ್ದಾರೆ.

ಹೆದರಿಕೆಯಿಂದ ಯಾರೂ ಕೂಡ ಇದರ ವಿರುದ್ಧ ಪ್ರಶ್ನೆ ಎತ್ತಲಿಲ್ಲ. ನನ್ನ ತಾಯಿ ಹತ್ತಿರದ ಗ್ರಾಮದಲ್ಲಿನ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಪ್ರತಿದಿನ ಭಿಕ್ಷೆ ಬೇಡಿದ್ರು. ನಂತರ ಅವರಿಗೆ ಅನಾರೋಗ್ಯವಾಗಿ ಆಸ್ಪತ್ರೆಯಲ್ಲಿ ದಾಖಲಿಸುವಂತಾಯ್ತು. ನಿನ್ನೆಯಷ್ಟೇ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಅನಿಲ್ ಹೇಳಿದ್ದಾರೆ.

ಆದ್ರೆ ಪಂಚಾಯತ್ ಮುಖ್ಯಸ್ಥರು ಈ ರೀತಿಯ ಯಾವುದೇ ಆದೇಶ ನೀಡಿಲ್ಲವೆಂದು ಹೇಳಿದ್ದಾರೆ. ಸ್ವತಃ ಮಹಿಳಯೇ ಪಂಚಾಯ್ತಿ ಕರೆದು ಪ್ರಾಯಶ್ಚಿತ್ತ ಮಾಡಿಕೊಳ್ಳಲು ನಿರ್ಧರಿಸಿರುವುದಾಗಿ ಹೇಳಿದ್ರು ಎಂದು ಪಂಚಾಯತ್ ಮುಖ್ಯಸ್ಥ ಶಂಭು ಶ್ರೀನಿವಾಸ್ ಹೇಳಿದ್ದಾರೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಯಾರಾದ್ರೂ ದೂರು ಕೊಟ್ಟರೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *