ನಮ್ಮವರೇ ನನ್ಗೆ ಮುಳುವು ಅಂದ್ರಾ ಯಡಿಯೂರಪ್ಪ!

Public TV
2 Min Read

ಬೆಂಗಳೂರು: ಸಿಎಂ ಯಡಿಯೂರಪ್ಪರಿಗೆ ಈಗ ಅವರ ಆಪ್ತರೇ ತಲೆನೋವು ಆಗಿದ್ದಾರಂತೆ. ಆದರಲ್ಲೂ ಲಿಂಗಾಯತ ಸಮುದಾಯದ ಆಪ್ತ ಶಾಸಕರೇ ಕಿರಿಕಿರಿ ಮಾಡುತ್ತಿದ್ದಾರಂತೆ. ನಮ್ಮವರೇ ನಮಗೆ ಮುಳುವಾಗ್ತಾರೆ ಅಂತಾ ಸಿಎಂ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂತ್ರಿಗಿರಿಗೆ ಆಪ್ತರು ಟವೆಲ್ ಹಾಕಿರೋದು ಯಡಿಯೂರಪ್ಪನವರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.

“ಕಷ್ಟಪಟ್ಟು ಮುಖ್ಯಮಂತ್ರಿ ಆಗಿದ್ದೀನಿ ನಾನು, ನನ್ ಸಿಎಂ ಕುರ್ಚಿಗೆ ನಮ್ಮವರೇ ಮುಳುವಾಗ್ತಾರಾ ಅನ್ನೋ ಭಯ ಇದೆ. ಕೆಲವು ಆಪ್ತರೇ ನನ್ನ ಇಕ್ಕಟ್ಟಿನಲ್ಲಿ ಸಿಲುಕಿಸಿ ಬಿಡ್ತಾರಾ ಅನ್ನೋ ಆತಂಕ ನನಗೆ” ಹೀಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಆಪ್ತ ಬಳಗದ ಬಗ್ಗೆಯೇ ಅಸಮಾಧಾನ ಹೊರ ಹಾಕಿದ್ದಾರಂತೆ. ಅಷ್ಟೇ ಅಲ್ಲ ಕೊಟ್ಟ ಮಾತಿನಂತೆ ಗೆದ್ದವರಿಗೆ ಸಚಿವ ಸ್ಥಾನವನ್ನು ಕೊಡಲೇಬೇಕು, ಕೊಡುತ್ತೇವೆ. ನಮಗೆ ಬೆಂಬಲ ಕೊಟ್ಟು ರಾಜೀನಾಮೆ ಕೊಟ್ಟವರ ಜಾತಿ ಸಮೀಕರಣ ಸಾಧ್ಯ ಇಲ್ಲ. ಆದರೆ ನನ್ನ ಆಪ್ತರು ಎನ್ನಿಸಿಕೊಂಡವರೇ ಸಚಿವ ಸ್ಥಾನ ಬೇಕು ಅಂತಾ ಬೀದಿಯಲ್ಲಿ ನಿಂತರೆ ಹೇಗೆ ಅಂತಾ ಗರಂ ಆಗಿ ಆಪ್ತ ವಲಯದ ಪಡಸಾಲೆಯಲ್ಲೇ ಅಸಮಾಧಾನ ಹೊರಹಾಕಿರೋದು ದೊಡ್ಡ ಚರ್ಚೆಯಾಗುತ್ತಿದೆ.

ಅಷ್ಟಕ್ಕೂ ಯಡಿಯೂರಪ್ಪ ಅಸಮಾಧಾನಕ್ಕೆ ಕಾರಣವಾಗಿದ್ದು ಲಿಂಗಾಯತ ಸಮುದಾಯದ ಆಪ್ತರು. ಈಗಾಗಲೇ ಲಿಂಗಾಯತ ಸಮುದಾಯದ ಸಚಿವರ ಸಂಖ್ಯೆ ಹೆಚ್ಚಿದೆ. ಹೀಗಿದ್ದಾಗಲೂ ಮತ್ತಷ್ಟು ಲಿಂಗಾಯತ ಶಾಸಕರೇ, ಆದರಲ್ಲೂ ಯಡಿಯೂರಪ್ಪ ಆಪ್ತರೇ ಸಚಿವ ಸ್ಥಾನಕ್ಕೆ ಕ್ಯೂ ನಿಂತಿರೋದು ಯಡಿಯೂರಪ್ಪ ಅಸಮಾಧಾನಕ್ಕೆ ಮೂಲ ಕಾರಣ ಅಂತೆ. ಜಾತಿ ಸಮೀಕರಣವನ್ನೇ ಬ್ಯಾಲೆನ್ಸ್ ಮಾಡೋದು ಕಷ್ಟ ಸಾಧ್ಯವಾಗಿದ್ದು, ಹಿಂದುಳಿದ ವರ್ಗ ಜಾತಿಗಳಿಗೆ ನ್ಯಾಯ ಹೇಗೆ ಒದಗಿಸಬೇಕು ಅನ್ನೋದೇ ಯಡಿಯೂರಪ್ಪಗೆ ಮುಂದಿರುವ ದೊಡ್ಡ ಸವಾಲು.

* ಯಡಿಯೂರಪ್ಪ ಅಸಮಾಧಾನಕ್ಕೆ ಕಾರಣಗಳೇನು..?
1. ಈಗಾಗಲೇ ನನ್ನ ಸಂಪುಟದಲ್ಲಿ 7 ಜನರು ಲಿಂಗಾಯತ ಸಚಿವರಿದ್ದಾರೆ.
2. ಮಹೇಶ್ ಕುಮಟಹಳ್ಳಿ, ಬಿ.ಸಿ.ಪಾಟೀಲ್ ಲಿಂಗಾಯತ ಕೋಟಾಕ್ಕೆ ಸೇರಿದರೆ 9ಕ್ಕೆ ಏರುತ್ತೆ.
3. ಹೈಕಮಾಂಡ್ ಒಪ್ಪಿಸಿ ಉಮೇಶ್ ಕತ್ತಿ ಅವರಿಗೆ ಸ್ಥಾನ ಕೊಟ್ಟರೂ ಲಿಂಗಾಯತ ಸಂಖ್ಯೆ 10ಕ್ಕೆ ಏರಿಬಿಡುತ್ತದೆ.
4. ಒಟ್ಟಾರೆಯಾಗಿ ಸರ್ಕಾರದಲ್ಲಿ ನನ್ನನ್ನೂ ಸೇರಿದಂತೆ ಲಿಂಗಾಯತ ಸಂಖ್ಯೆ 11ಕ್ಕೆ ಏರುತ್ತೆ.
5. ಕರ್ನಾಟಕ ಇತಿಹಾಸದಲ್ಲಿ ಒಂದು ಜಾತಿಗೆ ಹೆಚ್ಚು ಪ್ರಾತಿನಿಧ್ಯ ಕೊಟ್ಟ ದಾಖಲೆಯಾಗುತ್ತದೆ.
6. ಈ ನಡುವೆ ಇನ್ನೂ ಮೂರು ಜನ ಕ್ಯೂನಲ್ಲಿ ನಿಂತು ನನಗೂ ಬೇಕು ಅಂತಿದ್ದಾರೆ.
7. ಇದನ್ನ ನಾನು ಹೇಗೆ ಬ್ಯಾಲೆನ್ಸ್ ಮಾಡಲಿ, ನಮ್ಮವರೇ ನಮಗೆ ಮುಳುವಾದ್ರೆ ಕಷ್ಟ.

* ಕ್ಯಾಬಿನೆಟ್‍ಗೆ ಕ್ಯೂನಲ್ಲಿರುವ ಬಿಎಸ್‍ವೈ ಆಪ್ತರು!
1. ಉಮೇಶ್ ಕತ್ತಿ- ಲಿಂಗಾಯತ
2. ರೇಣುಕಾಚಾರ್ಯ- ಲಿಂಗಾಯತ
3. ಮುರುಗೇಶ್ ನಿರಾಣಿ- ಲಿಂಗಾಯತ
4. ಬಸವನಗೌಡ ಪಾಟೀಲ್ ಯತ್ನಾಳ್- ಲಿಂಗಾಯತ

* ಹಾಲಿ ಕ್ಯಾಬಿನೆಟ್ ಜಾತಿ ಸಮೀಕರಣ!
1. ಲಿಂಗಾಯತ ಸಮುದಾಯ ಸಚಿವರು- 7
2. ಒಕ್ಕಲಿಗ ಸಮುದಾಯ ಸಚಿವರು- 3
3. ಎಸ್‍ಸಿ ಸಮುದಾಯ ಸಚಿವರು- 3
4. ಬ್ರಾಹ್ಮಣ ಸಮುದಾಯ ಸಚಿವರು-1
5. ಎಸ್‍ಟಿ ಸಮುದಾಯ ಸಚಿವರು-1
6. ಕುರುಬ ಸಮುದಾಯ ಸಚಿವರು-1
7. ಹಿಂದುಳಿದ ವರ್ಗ ಸಚಿವರು- 1

Share This Article
Leave a Comment

Leave a Reply

Your email address will not be published. Required fields are marked *