ಅಧಿವೇಶನಕ್ಕೆ ಮಿನಿಸ್ಟರ್ ಆಗಿ ಎಂಟ್ರಿ ಕೊಡ್ತೀನಿ: ಮಹೇಶ್ ಕುಮಟಳ್ಳಿ ವಿಶ್ವಾಸ

Public TV
2 Min Read

ಬೆಂಗಳೂರು: ಕೊನೆಗೂ ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ. ಈ ಬೆನ್ನಲ್ಲೇ ಸಚಿವ ಸ್ಥಾನದ ಆಕಾಂಕ್ಷಿ ಶಾಸಕರಲ್ಲಿ ಎದೆ ಬಡಿತ ಹೆಚ್ಚಾಗಿದೆ. ನಿನ್ನೆ ಬೆಳಗಾವಿಯಲ್ಲಿ ಎಲ್ಲ ಗೆದ್ದವರನ್ನೂ ಸಚಿವರಾಗಿ ಮಾಡ್ತೀವಿ ಅಂದಿದ್ದ ಯಡಿಯೂರಪ್ಪ ಹೇಳಿಕೆಯಿಂದ ಮಿತ್ರಮಂಡಳಿ ತಂಡ ಸಚಿವರಾಗುವ ಕನಸು ಕಾಣಲಾರಂಭಿಸಿದೆ. ಬೆಂಗಳೂರಿನಲ್ಲಿ ಇಂದು ಮಾತಾಡಿದ ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ನಾನು ಸಚಿವನಾಗಿ ಬಜೆಟ್ ಅಧಿವೇಶನಕ್ಕೆ ಎಂಟ್ರಿ ಕೊಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಾಸಕರ ಭವನದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಮಾತಾಡಿದ ಮಹೇಶ್ ಕುಮಟಳ್ಳಿ, ಸಚಿವನಾಗಲು ನನಗೇನೂ ಗಡಿಬಿಡಿ ಇಲ್ಲ. ಆದ್ರೆ ನನ್ನನ್ನು ಸಚಿವನಾಗಿ ಮಾಡಿದರೆ ಅದಕ್ಕೆ ತಕ್ಕಂತೆ ಸಂತೋಷದಿಂದ ಕೆಲಸ ಮಾಡುತ್ತೇನೆ. ಯಾವ ಖಾತೆ ಕೊಟ್ಟರೂ ನನ್ನ ಸಾಮಥ್ರ್ಯ ಮೀರಿ ಕೆಲಸ ಮಾಡ್ತೇನೆ. ಮುಂಬರುವ ಬಜೆಟ್ ಅಧಿವೇಶನಕ್ಕೆ ಸಚಿವನಾಗಿಯೇ ಎಂಟ್ರಿ ಕೊಡ್ತೇನೆ ಅಂದ್ರು. ಇನ್ನು ಒಂದೊಮ್ಮೆ ಸಚಿವ ಸ್ಥಾನ ಸಿಗದಿದ್ರೆ ಶಾಸಕನಾಗಿ ಕೆಲಸ ಮಾಡ್ತೇನೆ. ಸಂಪುಟ ವಿಸ್ತರಣೆ ವಿಳಂಬಕ್ಕೆ ನಾವು ಯಾರೂ ಸಿಎಂ ಮೇಲೆ ಮುನಿಸಿಕೊಂಡಿಲ್ಲ. ವರಿಷ್ಠರ ನಿರ್ಧಾರಕ್ಕೆ ಬದ್ಧ, ಇದರಲ್ಲಿ ಮುನಿಸಿಕೊಳ್ಳುವ ಪ್ರಶ್ನೆ ಇಲ್ಲ ಎಂದು ಇದೇ ವೇಳೆ ಕುಮಟಳ್ಳಿ ಹೇಳಿದರು. ಇದನ್ನೂ ಓದಿ: ನನ್ಗೆ ಮಂತ್ರಿಗಿರಿ ಸಿಗದಿದ್ರೆ ಆಕಾಶವೇನು ಬೀಳಲ್ಲ: ಹೆಚ್.ವಿಶ್ವನಾಥ್

ರಮೇಶ್ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಮಹೇಶ್ ಕುಮಟಳ್ಳಿ ಒತ್ತಾಯಿಸಿದ್ರು. ಬೆಳಗಾವಿಗೆ ಮತ್ತೊಂದು ಡಿಸಿಎಂ ಸ್ಥಾನ ಕೊಟ್ರೆ ಒಳ್ಳೆಯದು. ರಮೇಶ್ ಜಾರಕಿಹೊಳಿಯವರಿಗೆ ಡಿಸಿಎಂ ಕೊಡಬೇಕು ಅನ್ನೋದು ನಮ್ಮ ಆಗ್ರಹವೂ ಇದೆ. ಈಗಾಗಲೇ ಸವದಿಯವರು ಬೆಳಗಾವಿಯಿಂದ ಡಿಸಿಎಂ ಆಗಿದ್ದಾರೆ. ಸವದಿ ಜೊತೆ ರಮೇಶ್ ಜಾರಕಿಹೊಳಿಯವರಿಗೂ ಡಿಸಿಎಂ ಸ್ಥಾನ ಕೊಟ್ಟರೆ ಅದೊಂದು ಐತಿಹಾಸಿಕ ಆಗಲಿದೆ. ಒಂದೇ ಜಿಲ್ಲೆಯಿಂದ ಇಬ್ಬರು ಡಿಸಿಎಂ ಆಗಿ ಕೆಲಸ ಮಾಡೋದು ಇತಿಹಾಸ ಎಂದು ಮಹೇಶ್ ಕುಮಟಳ್ಳಿ ಹೇಳಿದರು. ಚುನಾವಣೆಯಲ್ಲಿ ನಮಗೆ ಜನ ಆಶೀರ್ವಾದ ಮಾಡಿ ಶಾಸಕರಾಗಿ ಮಾಡಿದ್ರು. ಹಿರಿಯರಾದ ವಿಶ್ವನಾಥ್ ಅವರಿಗೆ ಜನಾದೇಶ ಸಿಗಲಿಲ್ಲ. ವಿಶ್ವನಾಥ್ ಅವರಿಗೂ ಬಿಜೆಪಿ ವರಿಷ್ಠರು ಸೂಕ್ತ ಸ್ಥಾನ ಕೊಡುವ ಭರವಸೆ ಇದೆ. ವಿಶ್ವನಾಥ್ ಅವರನ್ನೂ ನಮ್ಮ ಜೊತೆಗೆ ಸಚಿವರಾಗಿ ಮಾಡಲಿ ಎಂಬ ಆಸೆ ಇದೆ ಎಂದು ಇದೇ ವೇಳೆ ವಿಶ್ವನಾಥ್ ಅವರಿಗೂ ಸಚಿವ ಸ್ಥಾನಕ್ಕೆ ಪರೋಕ್ಷವಾಗಿ ಮಹೇಶ್ ಕುಮಟಳ್ಳಿ ಒತ್ತಾಯಿಸಿದರು. ಇದನ್ನೂ ಓದಿ: ದೆಹಲಿ ಭೇಟಿಗೂ ಮುನ್ನ ಬಿಎಸ್‍ವೈಗೆ ಶಾಕ್-ಇಂದು ಹೈಕಮಾಂಡ್ ಭೇಟಿ ಅನುಮಾನ

Share This Article
Leave a Comment

Leave a Reply

Your email address will not be published. Required fields are marked *