ಜ್ಯೋತಿಷ್ಯ ಪ್ರಕಾರ ಸಮಯ ನೋಡಿಕೊಂಡು ನಿಖಿಲ್ ಹೆಸರು ಪ್ರಕಟಿಸಿದ ಪುಟ್ಟರಾಜು!

Public TV
1 Min Read

ಮಂಡ್ಯ: ವಾಸ್ತು, ಜೋತಿಷ್ಯಗಳಲ್ಲಿ ಹೆಚ್ಚು ನಂಬಿಕೆ ಇಟ್ಟಿರುವ ದೇವೇಗೌಡ ಕುಟುಂಬದವರು ಇಂದು ಶುಭ ಲಗ್ನವನ್ನು ನೋಡಿಕೊಂಡು ನಿಖಿಲ್ ಮಂಡ್ಯದ ಅಧಿಕೃತ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ.

ನಿಖಿಲ್ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲು ಸಿಲ್ವರ್ ಜ್ಯುಬಿಲಿ ಪಾರ್ಕಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಾಧಾರಣವಾಗಿ ವೇದಿಕೆಯ ಮೇಲೆ ಅಭ್ಯರ್ಥಿ ಇರುವಾಗಲೇ ನಾಯಕರು ಹೆಸರನ್ನು ಘೋಷಿಸುತ್ತಾರೆ. ಆದರೆ ಮಂಡ್ಯ ಸಮಾವೇಶ ಆರಂಭಕ್ಕೂ ಮೊದಲೇ ಸಚಿವ ಪುಟ್ಟರಾಜು ಅವರು ನಿಖಿಲ್ ಹೆಸರನ್ನು ಪ್ರಕಟಿಸಿದ್ದರು. ಸಿ.ಎಸ್ ಪುಟ್ಟರಾಜು ಅವರು ನಿಖಿಲ್ ವೇದಿಕೆಗೆ ಆಗಮಿಸುವ ಮುನ್ನವೇ ಅಂದರೆ ಮಧ್ಯಾಹ್ನ 12 ಗಂಟೆಯ ಒಳಗಡೆ ಹೆಸರನ್ನು ಘೋಷಿಸಿದ್ದರು.

ಹೆಸರು ಘೋಷಣೆ ಮಾಡಿದ ನಂತರ ಮಧ್ಯಾಹ್ನ 12:01ಕ್ಕೆ ನಿಖಿಲ್ ವೇದಿಕೆ ಮೇಲೆ ಬಂದಿದ್ದಾರೆ. ರಾಜಕೀಯವಾಗಿ ಏರಬೇಕು, ಬೆಳಯಬೇಕು ಎನ್ನುವ ಉದ್ದೇಶದಿಂದ 12 ಗಂಟೆಗೆ ಅಭಿಜಿತ್ ಲಗ್ನದಲ್ಲಿ ರೇವಣ್ಣ ಸೂಚನೆ ಮೇರೆಗೆ ಪುಟ್ಟರಾಜು ನಿಖಿಲ್ ಹೆಸರನ್ನು ಘೋಷಿಸಿದ್ದಾರೆ ಎನ್ನಲಾಗುತ್ತದೆ.

ಈ ಬಗ್ಗೆ ಆಧ್ಯಾತ್ಮಕ ಚಿಂತಕ ಕಮಾಲಕರ ಭಟ್ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, “ಇಂದು ಫಾಲ್ಗುಣ ಮಾಸ, ಶುಕ್ಲ ಪಕ್ಷದ ಅಷ್ಟಮಿಯ ಶುಭತಿಥಿ. ಒಬ್ಬ ವ್ಯಕ್ತಿ ರಾಜಕೀಯದಲ್ಲಿ ಪ್ರವೇಶಿಸಿ ಬೆಳೆಯಬೇಕೆಂದರೆ ಅವರು ಅದಕ್ಕೆಂದೇ ನಿರ್ಧಾರಗಳನ್ನು ತೆಗೆದುಕೊಂಡಿರುತ್ತಾರೆ. ಅವರು ತೆಗೆದುಕೊಂಡ ನಿರ್ಧಾರಗಳಂತೆ ಈ ಸಮಯ ಈ ದಿನದಲ್ಲಿ ವಿಶೇಷ ಆಗಿರುವುದರಿಂದ ನಿಖಿಲ್ ಅವರಿಗೆ ಅನುಕೂಲ ಆಗಿರುವುದರಿಂದ ಆ ಲಗ್ನದ ಆಧಾರವನ್ನು ಅವಲೋಕನ ಮಾಡಿ ಈ ಸಮಯ ನಿಗದಿಪಡಿಸಿದ್ದಾರೆ. ನಿಖಿಲ್ ಅವರ ಕುಟುಂಬ ಜ್ಯೋತಿಷಿಗಳ ಮಾಹಿತಿ ಪಡೆದು ಈ ತೀರ್ಮಾನ ತೆಗೆದುಕೊಂಡಿರಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *