ಪರಿಕ್ಕರ್ ಪ್ರಕರಣವನ್ನು ಉಲ್ಲೇಖಿಸಿ ಕಾನೂನು ಮೊರೆಹೋಗಲು ಸಿದ್ಧವಾದ ಕಾಂಗ್ರೆಸ್- ಜೆಡಿಎಸ್

Public TV
1 Min Read

ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆಗೆ ರಾಜ್ಯಪಾಲ ವಾಜುಬಾಯ್ ವಾಲಾ ಅವರು ಅನುಮತಿ ನೀಡದೇ ಇದ್ದರೆ ಕಾನೂನಿನ ಮೊರೆ ಹೋಗುವುಕ್ಕೆ ಕಾಂಗ್ರೆಸ್-ಜೆಡಿಎಸ್ ಸಿದ್ಧತೆ ನಡೆಸಿವೆ.

ಗೋವಾ ಸರ್ಕಾರ ರಚನೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪುನ್ನು ಕಾಂಗ್ರೆಸ್-ಜೆಡಿಎಸ್ ಉಲ್ಲೇಖಿಸಿದೆ. ಮಣಿಪುರ, ಮೇಘಾಲಯ ರಾಜ್ಯಗಳಲ್ಲಿ ಬಹುಮತ ಇಲ್ಲದಿದ್ದರೂ ಬಿಜೆಪಿ ಮೈತ್ರಿ ಸರ್ಕಾರ ರಚನೆಗೆ ಅವಕಾಶ ನೀಡಲಾಗಿತ್ತು. ಹೀಗಾಗಿ, ನಮಗೂ ಮೈತ್ರಿ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಏನಿದು ಗೋವಾ ಪ್ರಕರಣ?
2017ರಲ್ಲಿ ನಡೆದ ಗೋವಾ ರಾಜ್ಯದ ವಿಧಾನ ಸಭೆ ಚುನಾವಣೆಯಲ್ಲಿ 40 ಕ್ಷೇತ್ರದಲ್ಲಿ 13 ರಲ್ಲಿ ಮಾತ್ರ ಬಿಜೆಪಿ ಜಯಗಳಿಸಿತ್ತು. ಕಾಂಗ್ರೆಸ್ 17 ಕ್ಷೇತ್ರದಲ್ಲಿ ಸ್ಥಾನಪಡೆದಿತ್ತು. ಎಂಎಜಿ, ಜಿಎಫ್‍ಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ಕ್ರಮವಾಗಿ 4,3 ಮತ್ತು 4 ಕ್ಷೇತ್ರದಲ್ಲಿ ಜಯಗಳಿಸಿದ್ದವು. ಅತಂತ್ರ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎನ್ನುವುದನ್ನು ಮೊದಲೇ ಗ್ರಹಿಸಿದ್ದ ಬಿಜೆಪಿ ಈ ಪಕ್ಷಗಳ ಜೊತೆ ಮಾತುಕತೆ ನಡೆಸಿ ಮೈತ್ರಿ ಸರ್ಕಾರ ಸ್ಥಾಪನೆಗೆ ರಾಜ್ಯಪಾಲರಲ್ಲಿ ಅನುಮತಿ ಕೇಳಿತ್ತು. ರಾಜ್ಯಪಾಲರು ಪರಿಕ್ಕರ್ ಅವರಿಗೆ ಬಹುಮತ ಸಾಬೀತು ಪಡಿಸಲು ಅನುಮತಿ ನೀಡಿದ್ದರು.

ಈ ಬೆಳವಣಿಗೆಯನ್ನು ಪ್ರಶ್ನಿಸಿ ಕಾಂಗ್ರೆಸ್ ರಾಜ್ಯಪಾಲರ ಆದೇಶಕ್ಕೆ ತಡೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ವಿಚಾರಣೆ ವೇಳೆ ಸುಪ್ರೀಂಕೋರ್ಟ್ ರಾಜ್ಯಪಾಲರ ಆದೇಶಕ್ಕೆ ತಡೆ ನೀಡದೇ ಸದನದಲ್ಲಿ ಬಹುಮತ ಸಾಬೀತು ಪಡಿಸಬೇಕೆಂದು ಪರಿಕ್ಕರ್ ಅವರಿಗೆ ಆದೇಶ ನೀಡಿತ್ತು.

ಈಗ ಈ ಪ್ರಕರಣವನ್ನು ಉಲ್ಲೇಖಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಬಹುಮತ ಸಾಬೀತು ಪಡಿಸಲು ಅನುಮತಿಯನ್ನು ಕೇಳಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *