ಜಾರಕಿಹೊಳಿ ವಿರುದ್ಧ ಸಹೋದರನೇ ಅಸ್ತ್ರ

Public TV
1 Min Read

ಬೆಳಗಾವಿ: ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಅನರ್ಹಗೊಳ್ಳುತ್ತಿದ್ದಂತೆಯೇ ರಮೇಶ್ ಆಪ್ತರು ಹಾಗೂ ಬೆಂಬಲಿಗರು ಆತಂಕಗೊಳಗಾಗಿದ್ದಾರೆ. ಇತ್ತ ರಮೇಶ್ ಅವರ ಮನೆಯಲ್ಲೂ ಮೌನ ಆವರಿಸಿದ್ದು, ಯಾವೊಬ್ಬ ಆಪ್ತರು ಹಾಗೂ ಬೆಂಬಲಿಗರು ಮನೆಯ ಬಳಿ ಸುಳಿಯಲೇ ಇಲ್ಲ.

ಬಂಡಾಯದ ಬಾವುಟ ಹಾರಿಸಿ ರೆಬೆಲ್ ನಾಯಕನಾಗಿದ್ದ ರಮೇಶ್ ಜಾರಕಿಹೊಳಿ, ತಾವು ಅಂದುಕೊಂಡಂತೆ ಸಮ್ಮಿಶ್ರ ಸರ್ಕಾರ ಬೀಳಿಸುವಲ್ಲಿ ಯಶಸ್ವಿಯಾಗಿದ್ದರು. ಇದೇ ಖುಷಿಯಲ್ಲಿದ್ದ ರಮೇಶ್ ಜಾರಕಿಹೊಳಿಯನ್ನು ಸ್ಪೀಕರ್ ರಮೇಶ್ ಕುಮಾರ್ ಶಾಸಕ ಸ್ಥಾನದಿಂದ ಅನರ್ಹ ಮಾಡಿ ಬಿಗ್ ಶಾಕ್ ಕೊಟ್ಟಿದ್ದರು. ಇದು ಕ್ಷೇತ್ರದ ಕಾರ್ಯಕರ್ತರು ಹಾಗೂ ಬೆಂಬಲಿಗರಲ್ಲಿ ಆತಂಕ ಮೂಡಿಸಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ರಮೇಶ್ ಜಾರಕಿಹೊಳಿ ಕ್ಷೇತ್ರವಾಗಿತ್ತು. ಸತತ 5 ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಗೋಕಾಕ್ ಜನ ಇದ್ದಾರೆ ಎಂದು ಇಡೀ ರಾಜ್ಯಕ್ಕೆ ತೋರಿಸಿದ್ದರು. ಆದರೆ ಈಗ ರಮೇಶ್ ಅನರ್ಹರಾಗಿರುವುದರಿಂದ ಚುನಾವಣೆಗೆ ಸ್ಪರ್ಧೆ ಮಾಡಲು ಆಗುತ್ತೋ ಇಲ್ಲವೋ ಎಂಬ ಆತಂಕ ಕಾಡತೊಡಗಿದೆ. ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೂ ತನ್ನ ಎಲ್ಲ ಬೆಂಬಲಿಗರು ಮತ್ತು ಆಪ್ತರಿಗೂ ರಮೇಶ್ ಕರೆ ಮಾಡಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಸುಪ್ರೀಂಕೋರ್ಟಿನಲ್ಲಿ ಆದೇಶ ಬರುವವರೆಗೂ ಎಲ್ಲರೂ ಸೈಲೆಂಟ್ ಆಗಿರಬೇಕು. ಎಲ್ಲಿಯೂ ಹೇಳಿಕೆ ನೀಡದಂತೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿವೇಕ್ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ಅನರ್ಹಗೊಂಡಿದ್ದೇ ಆದರೆ ಅಳಿಯ ಅಂಬಿರಾವ್ ಪಾಟೀಲ್ ಗೋಕಾಕ್‍ನಿಂದ ಸ್ಪರ್ಧೆ ಮಾಡುವುದು ಬಹುತೇಕ ಖಚಿತ ಎಂದು ಮೂಲಗಳು ಹೇಳುತ್ತಿವೆ. ಇತ್ತ ಕೆಲವು ಕಾಂಗ್ರೆಸ್ ಕಾರ್ಯಕರ್ತರಿಗೂ ರಮೇಶ್ ಕರೆ ಮಾಡಿ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಕೇಳಿಕೊಳ್ಳುತ್ತಿದ್ದಾರಂತೆ. ಕಾಂಗ್ರೆಸ್ ಕೂಡ ಗೋಕಾಕ್ ಉಪ ಚುನಾವಣೆಗೆ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದು, ಈಗಾಗಲೇ ಲಖನ್ ಜಾರಕಿಹೊಳಿ ನೇತೃತ್ವದಲ್ಲಿ ಪಕ್ಷವನ್ನ ಸಂಘಟಿಸಲಾಗುತ್ತಿದೆ.

ಕಾಂಗ್ರೆಸ್ ರಮೇಶ್ ಜಾರಕಿಹೊಳಿಯನ್ನು ಸಹೋದರನ ಮೂಲಕವೇ ಮಣಿಸುವ ತಯಾರಿಯಲ್ಲಿದ್ದರೆ, ಇತ್ತ ರಮೇಶ್ ಜಾರಕಿಹೊಳಿ ಅನರ್ಹಗೊಂಡರೂ ಬಗ್ಗದೆ ಅಳಿಯನನ್ನಾದರೂ ನಿಲ್ಲಿಸಿ ಗೆಲ್ಲಿಸುವ ಲೆಕ್ಕಾಚಾರದಲ್ಲಿದ್ದಾರೆ. ಸದ್ಯ ಗೋಕಾಕ್ ಕ್ಷೇತ್ರದ ಜನ ಯಾರಿಗೆ ಸಪೋರ್ಟ್ ಮಾಡಬೇಕೆಂಬ ಗೊಂದಲದಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *