ಸಂಡೂರು ಉಪಚುನಾವಣೆ: ಬಂಗಾರು ಹನುಮಂತು ನಾಮಪತ್ರ ಸಲ್ಲಿಕೆ

Public TV
2 Min Read

– ವಾಲ್ಮೀಕಿ ನಿಗಮದ ಹಣ ಬಳಸಿ ಬಳ್ಳಾರಿಯಲ್ಲಿ ಕಾಂಗ್ರೆಸ್‌ ಗೆದ್ದಿದೆ
– ಶ್ರೀರಾಮುಲುರನ್ನ ಕುತಂತ್ರದಿಂದ ಸೋಲಿಸಲಾಗಿದೆ
– ಕಾಂಗ್ರೆಸ್‌ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ

ಬಳ್ಳಾರಿ: ಸಂಡೂರು (Sandur By Election) ಬಿಜೆಪಿ ಅಭ್ಯರ್ಥಿಯಾಗಿ ಬಂಗಾರು ಹನುಮಂತು (Bangauru Hanumanthu) ಇಂದು ನಾಮಪತ್ರ (Nomination) ಸಲ್ಲಿಕೆ ಮಾಡಿದ್ದಾರೆ.

ಸಂಡೂರು ತಾಲೂಕು ಕಛೇರಿಗೆ ಬಿಜೆಪಿ ನಾಯಕರು ಜೊತೆ ಆಗಮಿಸಿದ ಬಂಗಾರು ಹನುಮಂತು ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಜನಾರ್ದನ ರೆಡ್ಡಿ, ಭಗವಂತ ಖೂಬಾ, ಪತ್ನಿ ರೂಪಾಶ್ರೀ ಜೊತೆ ಸೇರಿ ನಾಮಪತ್ರ ಸಲ್ಲಿಕೆ ಮಾಡಿದರು.

ನಾಮಪತ್ರ ಸಲ್ಲಿಕೆಯ ಮುನ್ನ ಬಿಜೆಪಿ ನಾಯಕರು ತೆರೆದ ವಾಹನದಲ್ಲಿ ರೋಡ್‌ ಶೋ ನಡೆಸಿದರು. ಈ ವೇಳೆ ಮಾತನಾಡಿದ ವಿಜಯೇಂದ್ರ, ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೂ ಬಂಗಾರು ಹನುಮಂತ ಗೆಲವು ಅಷ್ಟೇ ಸತ್ಯ. 20 ವರ್ಷದಿಂದ ಸಂಡೂರಿನಲ್ಲಿ (Sanduru) ಕಾಂಗ್ರೆಸ್ ಇದೆ. ಒಂದು ಬಸ್ ನಿಲ್ದಾಣ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ ಎಂದು ಆಕ್ರೋಶ ಹೊರಹಾಕಿದರು.

ರಾಮುಲು ಅವರನ್ನ ಬಳ್ಳಾರಿ, ವಿಜಯನಗರ ಜಿಲ್ಲೆ ಜನ ಸೋಲಿಸಿಲ್ಲ. ಕಾಂಗ್ರೆಸ್‌ನವರು ಕುತಂತ್ರದಿಂದ ಸೋಲಿಸಿದ್ದಾರೆ. ವಾಲ್ಮೀಕಿ ನಿಗಮದ ಹಣ ಹಂಚಿ ರಾಮುಲು ಅವರನ್ನ ಸೋಲಿಸಿದ್ದಾರೆ. ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಎಸ್‌ಟಿ ನಿಗಮದ ಹಣ ಕಾಂಗ್ರೆಸ್ ದುರ್ಬಳಕೆ ಮಾಡಿದೆ. ಈ ಚುನಾವಣೆಯಲ್ಲಿ ನಮಗೆ ನ್ಯಾಯ ಸಿಗುವ ನಂಬಿಕೆ ಇದೆ. ರಾಜ್ಯದಲ್ಲಿ ಮೂರು ಕ್ಷೇತ್ರದ ಉಪ ಚುನಾವಣೆಗಳಲ್ಲೂ ಬಿಜೆಪಿ ಗೆಲವು ಖಚಿತ ಎಂದು ಹೇಳಿದರು.

ಶ್ರೀರಾಮುಲು ಮಾತನಾಡಿ, ವಾಲ್ಮೀಕಿ ನಿಗಮದ ಹಣದಿಂದ ತುಕಾರಾಂ ಸಂಸದರಾಗಿದ್ದಾರೆ. ಬಿಜೆಪಿ ಕುತಂತ್ರ ಮಾಡಿ ಜೈಲಿಗೆ ಹಾಕಿದ್ದಾರೆ ಎಂದು ನಾಗೇಂದ್ರ ಹೇಳುತ್ತಾರೆ. 187 ಕೋಟಿ ಹಣ ನಾಗೇಂದ್ರ ಆದಿಯಾಗಿ ಕಾಂಗ್ರೆಸ್ ನುಂಗಿದೆ. ಬಳ್ಳಾರಿ ಲೋಕಸಭಾ ಚುನಾವಣೆಗೆ 21.19 ಕೋಟಿ ರೂ. ವಾಲ್ಮೀಕಿ ನಿಗಮದ ಹಣ ಬಳಕೆಯಾಗಿದೆ. ಹೀಗಾಗಿ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸೋಲಿಸಿ ಎಂದುಕ ರೆ ನೀಡಿದರು. ಇದನ್ನೂ ಓದಿ: ಸಂಡೂರು ಉಪಚುನಾವಣೆ| ಬಿಜೆಪಿ ಟೆಕೆಟ್‌ ಪಡೆದ ಬಂಗಾರು ಹನುಮಂತು ಯಾರು?

ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ಬಡವರಲ್ಲಿ ದೇವರನ್ನ ಕಾಣುವ ವ್ಯಕ್ತಿ ಶ್ರೀರಾಮುಲು. ಕಾಂಗ್ರೆಸ್ ಚುನಾವಣೆಗೆ ವಾಲ್ಮೀಕಿ ನಿಗಮದ ಹಣ ಬಳಸಿ ಶ್ರೀರಾಮುಲು ಅವರನ್ನು ಸೋಲಿಸಿದೆ. ಬಡ ಜನರ ಅಭಿವೃದ್ಧಿ ಹಣವನ್ನು ಕಾಂಗ್ರೆಸ್ ಲೂಟಿ ಮಾಡಿದೆ. ಭ್ರಷ್ಟ ಕಾಂಗ್ರೆಸ್‌ಗೆ ವೋಟ್ ಹಾಕಬೇಡಿ ಎಂದು ಮನವಿ ಮಾಡಿದರು.

 

Share This Article