ಉದ್ಯಮಿ ಹತ್ಯೆಗೆ ಮಾಜಿ ಪ್ರೇಯಸಿ ಸ್ಕೆಚ್- ಸೀಟ್ ಬೆಲ್ಟ್‌ನಿಂದ ಕತ್ತು ಬಿಗಿದು ಹತ್ಯೆಗೆ ಯತ್ನ

Public TV
2 Min Read

ಬೆಂಗಳೂರು: ಆಸ್ತಿಗಾಗಿ ಪ್ರೀತಿ ಮಾಡಿದ ವ್ಯಕ್ತಿಯನ್ನೇ ಯುವತಿ ಕೊಲ್ಲಲು ಪ್ರಯತ್ನ ಮಾಡಿರುವ ಘಟನೆ ಬೆಂಗಳೂರಿನ ನೈಸ್ ರಸ್ತೆಯಲ್ಲಿ ನಡೆದಿದೆ.

ಪವಿತ್ರ ಕೊಲೆ ಮಾಡಲು ಯತ್ನಿಸಿದ ಯುವತಿ. ಪವಿತ್ರ ಆರ್ಕೆಸ್ಟ್ರಾ ಸಿಂಗರ್ ಆಗಿದ್ದು, ಕಳೆದ ಕೆಲ ವರ್ಷಗಳಿಂದ 2015 ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಸ್ಫರ್ಧಿಸಿದ್ದ ಉದ್ಯಮಿ ಪ್ರಭಾಕರ್ ರೆಡ್ಡಿ ಜೊತೆ ಲಿವಿಂಗ್ ಟುಗೆದರ್ ನಲ್ಲಿದ್ದರು. ಸೆಪ್ಟಂಬರ್ 20ರಂದು ಪವಿತ್ರ ಇದ್ದಕ್ಕಿದ್ದಂತೆ ಪ್ರಭಾಕರ್ ರೆಡ್ಡಿಯನ್ನು ಆರ್ ಆರ್ ನಗರದಲ್ಲಿ ಭೇಟಿ ಮಾಡಿ ಕಾರಲ್ಲಿ ನೈಸ್ ರಸ್ತೆಗೆ ಕರೆದುಕೊಂಡು ಹೋಗಿದ್ದಳು.

ಕಾರಲ್ಲಿ ಹೋಗುತ್ತಿದ್ದ ವೇಳೆ ಪವಿತ್ರ ಆಸ್ತಿ ಬರೆದುಕೊಡುವಂತೆ ಒತ್ತಾಯಿಸಿ ಗಲಾಟೆ ಮಾಡಿದ್ದಾಳೆ. ಅಲ್ಲದೆ ಕಾರಿನ ಸೀಟ್‍ ಬೆಲ್ಟ್‌ನಿಂದ ಕತ್ತು ಬಿಗಿದು ಪ್ರಭಾಕರ್ ರನ್ನು ಕೊಲೆ ಮಾಡಲು ಯತ್ನಿಸಿದ್ದಾಳೆ. ಪ್ರಭಾಕರ್ ರೆಡ್ಡಿ ಈಗಾಗಲೇ ಪವಿತ್ರಗೆ 2 ಕೆಜಿ ಚಿನ್ನ, 5 ಕೋಟಿ ಮೌಲ್ಯದ ಕಟ್ಟಡವನ್ನು ನೀಡಿದ್ದಾರೆ. ಆದರೂ ಎಲ್ಲಾ ಆಸ್ತಿ ಬರೆದುಕೊಡುವಂತೆ ಪವಿತ್ರ, ಪ್ರಭಾಕರ್ ಗೆ ಧಮ್ಕಿ ಹಾಕಿ ಕೊಲೆಗೆ ಯತ್ನಿಸಿದ್ದಾಳೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಪ್ರಭಾಕರ್ ರೆಡ್ಡಿ ಅವರು, ಕುಟುಂಬದಲ್ಲಿ ಗಲಾಟೆ ಅಷ್ಟೇ. ನೈಸ್ ರೋಡಿನಲ್ಲಿ ಬರುತ್ತಿರುವಾಗ ನಮ್ಮಿಬ್ಬರ ನಡುವೆ ಜಗಳವಾಯಿತು. ಈ ವೇಳೆ ಪವಿತ್ರ ಸೀಟ್ ಬೆಲ್ಟಿನಿಂದ ಕೊಲೆ ಮಾಡಲು ಯತ್ನಿಸಿದ್ದಳು. ಅಲ್ಲದೆ ನೀರಿನ ಬಾಟಲಿಯಿಂದ ನನ್ನನ್ನು ಹಲ್ಲೆ ಮಾಡಿದ್ದಳು. ಹಲ್ಲೆಯಿಂದ ನನ್ನ ಕಿವಿಯಲ್ಲಿ ರಕ್ತ ಬರುತ್ತಿದ್ದ ಕಾರಣ ನಾನು ಆಸ್ಪತ್ರೆಗೆ ಹೋಗಿ ಪೊಲೀಸ್ ಠಾಣೆಗೆ ಹೋದೆ. ಪವಿತ್ರ ನನಗೆ ಒಂದೂವರೆ ವರ್ಷದಿಂದ ಪರಿಚಯ. ನಾವಿಬ್ಬರು ಜೊತೆಯಲ್ಲಿಯೇ ಇದ್ದೆವು. ಈ ನಡುವೆ ಕುಟುಂಬದಲ್ಲಿ ಜಗಳವಾಗಿದೆ. ಪವಿತ್ರ ನನ್ನನ್ನು ಇಷ್ಟಪಡುತ್ತಿದ್ದಳು ಎಂದು ತಿಳಿಯಿತು. ಆಗ ಇಬ್ಬರು ಲಿವಿಂಗ್ ರಿಲೇಶನ್‍ಶಿಪ್‍ನಲ್ಲಿ ಇದ್ದೆವು. ಆಕೆಗೆ ನಾನು ಮನೆ ಕೊಡಿಸಿದೆ. ನನಗೆ ಕಮಿಟ್ಸ್ ಮೆಂಟ್ ಇದೆ, ನನಗೆ ಏನಾದರೂ ಮಾಡಿಸು ಎಂದು ಬೇಡಿಕೆಯಿಟ್ಟಿದ್ದಳು ಎಂದು ಹೇಳಿದ್ದಾರೆ.

ಪವಿತ್ರಗೆ ಈಗಾಗಲೇ ಮದುವೆಯಾಗಿ ಡಿವೋರ್ಸ್ ಆಗಿದ್ದು, ಆಕೆಗೆ 5 ವರ್ಷದ ಮಗು ಕೂಡ ಇದೆ. ಮೂಲತಃ ಚನ್ನಪಟಣ್ಣದವಳಾಗಿರುವ ಪವಿತ್ರ ಈಗ ಬೆಂಗಳೂರಿನ ಆರ್‍ಆರ್ ನಗರದಲ್ಲಿ ಇದ್ದಾರೆ. ನಾನು ಪೊಲೀಸರಿಗೆ ಅರೆಸ್ಟ್ ಮಾಡಿ ಎಂದು ಒತ್ತಡ ಹಾಕಲಿಲ್ಲ. ಇದಾದ ಬಳಿಕ ನಾನು ಮಾತನಾಡಲು ಆಕೆಯನ್ನು ಕರೆದೆ. ಆದರೆ ಅವರು ಒಪ್ಪಲಿಲ್ಲ. ಫೈನಾನ್ಸ್ ನಲ್ಲಿ ತೊಂದರೆ ಆದಾಗ ಪವಿತ್ರ ನನಗೆ ಸಹಾಯ ಮಾಡಿದ್ದಳು. ಕಷ್ಟದ ಸಂದರ್ಭದಲ್ಲಿ ನನ್ನ ಪರವಾಗಿ ಯಾರು ಬರದಿದ್ದಾಗ ಆಕೆ ನನ್ನ ಸಹಾಯಕ್ಕೆ ಬಂದಿದ್ದಳು. ಸಹಾಯ ಮಾಡಿದ್ದಾಳೆ ಎಂದು ಮಾನವೀಯತೆ ದೃಷ್ಟಿಯಿಂದ ನಾನು ಅವರಿಗೆ ತುಂಬಾ ಗೌರವ ನೀಡುತ್ತಿದ್ದೆ. ದೌರ್ಜನ್ಯ ಮಾಡಿದ್ದಕ್ಕೆ ನಾನು ದೂರು ನೀಡಿದೆ ಹೊರತು ಬೇರೆ ವಿಷಯಕ್ಕೆ ಅಲ್ಲ ಎಂದು ಪ್ರಭಾಕರ್ ತಿಳಿಸಿದ್ದಾರೆ.

ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸದ್ಯ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *