ಭಾರತ-ಪಾಕ್‌ ನಡುವಿನ ಉದ್ವಿಗ್ನತೆಯಿಂದ ಯುದ್ಧದ ಭೀತಿ – ಗಡಿಯಲ್ಲಿ ಬಂಕರ್‌ ಶುಚಿಗೊಳಿಸುವ ಕಾರ್ಯ ಚುರುಕು

Public TV
3 Min Read

ಶ್ರೀನಗರ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ (Pehalgam Terrorist Attack) ಬಳಿಕ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಉದ್ವಿಗ್ನತೆ ಹೆಚ್ಚುತ್ತಲೇ ಇದೆ. ಈ ನಡುವೆ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (LOC) ಬಳಿಯಿರುವ ಗ್ರಾಮಗಳ ಜನರು ಸ್ವಯಂ ಜಾಗರೂಕರಾಗ್ತಿದ್ದಾರೆ. ಒಂದು ವೇಳೆ ಭಾರತ-ಪಾಕ್‌ ನಡುವೆ ಯುದ್ಧ ಸಂಭವಿಸಿದ್ರೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಂಕರ್‌ಗಳನ್ನ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಮತ್ತೊಂದೆಡೆ ಬೆಳೆಯನ್ನು ಅವಧಿಗೆ ಮುಂಚಿತವಾಗಿಯೇ ಕೊಯ್ಲು ಮಾಡ್ತಿದ್ದಾರೆ.

ಬಂಕರ್‌ಗಳನ್ನ ಶುಚಿಗೊಳಿಸುವ ಕೆಲಸ ಶುರು:
ಭಾರತ ಸರ್ಕಾರದ ಒಂದೊಂದು ಕಠಿಣ ನಿರ್ಧಾರಗಳು ಶತ್ರುರಾಷ್ಟ್ರ ಪಾಕಿಸ್ತಾನವನ್ನು ತತ್ತರಿಸುವಂತೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಗಡಿ ಭಾಗದ ಜನ ಯಾವುದೇ ಕ್ಷಣದಲ್ಲೂ ಯುದ್ಧ ಸಂಭವಿಸಬಹುದು ಎನ್ನುವ ಆತಂಕದಲ್ಲಿದ್ದಾರೆ. ಒಂದು ವೇಳೆ ಯುದ್ಧ ಸಂಭವಿಸಿದ್ರೆ ತಮ್ಮನ್ನು ರಕ್ಷಣೆ ಮಾಡಿಕೊಳ್ಳೋದಕ್ಕೆ ಬಂಕರ್‌ಗಳನ್ನು ಶುಚಿಗೊಳಿಸುವ ಕೆಲಸ ಶುರು ಮಾಡಿದ್ದಾರೆ. ಸರ್ಕಾರ ಈ ಹಿಂದೆಯೇ ಸಾವಿರಾರು ವೈಯಕ್ತಿಕ ಮತ್ತು ಸಮುದಾಯ ಬಂಕರ್‌ಗಳನ್ನು (Community Bunkers) ನಿರ್ಮಿಸಿತ್ತು, ಈಗ ಅವುಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಆರ್‌ಎಸ್ ಪುರ ವಲಯದ ಟ್ರೆವಾ ಗ್ರಾಮದ ಮಾಜಿ ಸರಪಂಚ್ ಬಲ್ಬೀರ್ ಕೌರ್, ಮುಂದೆ ಏನಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಗಡಿಯಾಚೆಯಿಂದ ಶೆಲ್ ದಾಳಿ ಅಥವಾ ಗುಂಡಿನ ದಾಳಿ ನಡೆದರೆ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಭೂಗತ ಬಂಕರ್‌ಗಳನ್ನು ಸಿದ್ಧಪಡಿಸಲು ನಾವು ನಿರ್ಧರಿಸಿದ್ದೇವೆ. ಮಾಜಿ ಸರಪಂಚ್‌ಗಳು ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಿದ್ದು, ಸೇನೆಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ ಎಂದು ತಿಳಿಸಿದ್ದಾರೆ.

4,000ಕ್ಕೂ ಹೆಚ್ಚು ಬಂಕರ್‌ಗಳಿಗೆ ಅನುಮೋದನೆ
ಪಾಕಿಸ್ತಾನದ ಶೆಲ್ ದಾಳಿಯಿಂದ ಗಡಿಯಲ್ಲಿ ವಾಸಿಸುವ ಜನರನ್ನು ರಕ್ಷಿಸಲು, ಕೇಂದ್ರ ಸರ್ಕಾರವು ಡಿಸೆಂಬರ್ 2017 ರಲ್ಲಿ ಜಮ್ಮು, ಕಥುವಾ ಮತ್ತು ಸಾಂಬಾದ ಐದು ಜಿಲ್ಲೆಗಳಲ್ಲಿ 14,460 ವೈಯಕ್ತಿಕ ಮತ್ತು ಸಮುದಾಯ ಬಂಕರ್‌ಗಳ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಈ ಬಂಕರ್‌ಗಳು ಅಂತಾರಾಷ್ಟ್ರೀಯ ಗಡಿಯಲ್ಲಿರುವ ಹಳ್ಳಿಗಳು ಮತ್ತು ನಿಯಂತ್ರಣ ರೇಖೆಯಲ್ಲಿರುವ ಪೂಂಚ್ ಮತ್ತು ರಾಜೌರಿ ಹಳ್ಳಿಗಳನ್ನು ಒಳಗೊಂಡಿವೆ. ನಂತರ, ಸರ್ಕಾರವು ದುರ್ಬಲ ಜನಸಂಖ್ಯೆಗಾಗಿ 4,000ಕ್ಕೂ ಹೆಚ್ಚು ಬಂಕರ್‌ಗಳನ್ನು ಅನುಮೋದಿಸಿತು.

3,323 ಕಿಮೀ ಉದ್ದದ ಗಡಿ ಹಂಚಿಕೆ
ಭಾರತವು ಪಾಕಿಸ್ತಾನದೊಂದಿಗೆ 3,323 ಕಿ.ಮೀ ಉದ್ದದ ಗಡಿಯನ್ನು ಹಂಚಿಕೊಂಡಿದೆ. ಅದರಲ್ಲಿ 221 ಕಿ.ಮೀ ಅಂತಾರಾಷ್ಟ್ರೀಯ ಗಡಿಯಾಗಿದ್ದು, 744 ಕಿಮೀ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯಾಗಿದೆ. 2021 ರಿಂದ ಕದನ ವಿರಾಮ ಉಲ್ಲಂಘನೆಗಳು ಕಡಿಮೆಯಾಗಿದ್ದರೂ, ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ನಂತರ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದು, ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

2020ರಲ್ಲಿ 5,000ಕ್ಕೂ ಹೆಚ್ಚು ಉಲ್ಲಂಘನೆಗಳು
ಭಾರತ ಮತ್ತು ಪಾಕಿಸ್ತಾನ ಆರಂಭದಲ್ಲಿ 2003 ರಲ್ಲಿ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದವು, ಆದರೆ ಪಾಕಿಸ್ತಾನ ಪದೇ ಪದೇ ಒಪ್ಪಂದ ಉಲ್ಲಂಘಿಸುತ್ತಾ ಬಂದಿದೆ. 2020 ರಲ್ಲಿ 5,000ಕ್ಕೂ ಹೆಚ್ಚು ಬಾರಿ ಒಪ್ಪಂದ ಉಲ್ಲಂಘನೆ ಮಾಡಿರುವುದಾಗಿ ವರದಿಗಳು ತಿಳಿಸಿವೆ.

Share This Article