ಗೆಳೆಯನ ಅಂತ್ಯಕ್ರಿಯೆಗೆ ಬಂದು ಕಣ್ಣೀರಿಟ್ಟ ಬಸವ- ಮೂಕಪ್ರಾಣಿಯ ಪ್ರೀತಿಗೆ ಮಮ್ಮಲ ಮರುಗಿದ ಜನ

Public TV
1 Min Read

ಮಂಡ್ಯ: ಅನಾರೋಗ್ಯದಿಂದ ಸಾವನ್ನಪ್ಪಿದ ಬಸವನ ಅಂತ್ಯಕ್ರಿಯೆಗೆ ಬಂದ ಮತ್ತೊಂದು ಬಸವ ತನ್ನ ಗೆಳೆಯನನ್ನು ಬಿಟ್ಟು ಹೋಗಲಾಗದೆ ಮೂಕವೇದನೆ ಅನುಭವಿಸಿದ ದೃಶ್ಯ ಕಂಡು ಸಾವಿರಾರು ಜನರು ಕಣ್ಣೀರಿಟ್ಟ ಮನಕಲಕುವ ಘಟನೆ ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿ ನಡೆದಿದೆ.

ಗುತ್ತಲು ಬಡಾವಣೆಯ ಮಾರುತಿ ನಗರದ ಮುತ್ತುರಾಯ ದೇವಸ್ಥಾನದ ಬಸವ ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು ಬುಧವಾರ ಮೃತಪಟ್ಟಿದೆ. ತಮ್ಮ ಪ್ರೀತಿಯ ಬಸವ ಸಾವನ್ನಪ್ಪಿದ್ದರಿಂದ ಬಸವನನ್ನು ಮೆರವಣಿಗೆಯ ಮೂಲಕ ತಂದು ಗುತ್ತಲು ಯುವಕರು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು. ಈ ವೇಳೆ ಮೃತ ಬಸವನನ್ನು ಹಿಂಬಾಲಿಸುತ್ತ ಮತ್ತೊಂದು ಬಸವ ಬಂದಿದೆ. ಬಳಿಕ ಅಂತ್ಯ ಸಂಸ್ಕಾರದ ಜಾಗದಲ್ಲಿ ಬಸವನ ಬಳಿ ನಿಂತು ಮೂಕವೇದನೆ ಅನುಭವಿಸಿದೆ.

ಇದನ್ನು ಕಂಡ ಜನ ಕಣ್ಣೀರಿಡುತ್ತಿದ್ದ ಬಸವನನ್ನು ಸ್ಥಳದಿಂದ ಓಡಿಸಲು ಯತ್ನಿಸಿದ್ದಾರೆ. ಆದರೆ ತನ್ನ ಗೆಳೆಯನನ್ನು ಬಿಟ್ಟು ಹೋಗಲು ಒಪ್ಪದ ಬಸವ, ಮೃತ ಬಸವನ ಸುತ್ತ ಮೂಕರೋದನೆಯಿಂದ ಸುತ್ತಾಡಿದೆ. ಇದನ್ನು ನೋಡಿದ ಸಾವಿರಾರು ಜನ ಮೂಕ ಪ್ರಾಣಿಯ ಪ್ರೀತಿಗೆ ಕಣ್ಣೀರಿಟ್ಟಿದ್ದಾರೆ.

ಈ ದೃಶ್ಯವನ್ನು ಮೊಬೈಲ್‍ನಲ್ಲಿ ಚಿತ್ರಿಸಿರುವ ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಪ್ರಾಣಿಗಳ ಮೂಕ ಪ್ರೀತಿಗೆ ಜನ ಮಮ್ಮಲ ಮರುಗಿದ್ದಾರೆ. ದೃಶ್ಯವನ್ನು ನೋಡಿದ ಜನ ಮನುಷ್ಯರು ಪ್ರಾಣಿಗಳಿಂದ ಕಲಿಯಬೇಕಾದ್ದು ಬೇಕಾದಷ್ಟಿದೆ ಎಂದು ಕಮೆಂಟ್ ಮಾಡುತ್ತಾ ಸಂತಾಪ ಸೂಚಿಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *