418 ಕೋಟಿ ರೂ. ಹಗರಣದ ಆರೋಪ- ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಎಸ್‍ವೈ ದಾಖಲೆ ಬಿಡುಗಡೆ

Public TV
2 Min Read

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರ 418 ಕೋಟಿ ಹಣವನ್ನ ಲೂಟಿ ಮಾಡಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಗರಣದ ದಾಖಲಾತಿ ಬಿಡುಗಡೆ ಮಾಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಕೆಪಿಸಿಎಲ್ ಸಹಭಾಗಿತ್ವದಲ್ಲಿ 13-02-2003ರಲ್ಲಿ ಜಂಟಿ ಕಂಪನಿ ಸ್ಥಾಪನೆಯಾಗಿತ್ತು. ಕೆಪಿಸಿಎಲ್ ಜವಾಬ್ದಾರಿ ಕೇವಲ 24% ಮಾತ್ರ ಇತ್ತು. ಮನೋಹರ್ ಲಾಲ್ ಶರ್ಮ ಕೇಸ್‍ನಲ್ಲಿ ಹಲವು ಕಲ್ಲಿದ್ದಲು ಹಂಚಿಕೆಯನ್ನ ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. ಕೆಪಿಸಿಎಲ್ ಲೈಸೆನ್ಸ್ ಸಹ ರದ್ದುಪಡಿಸಿ ದಂಡವನ್ನು ಹಾಕಿತ್ತು. ಕಂಪನಿ ನೀಡಬೇಕಾದ ದಂಡದ ಹಣವನ್ನ ರಾಜ್ಯ ಸರ್ಕಾರವೇ ಭರಿಸಿದೆ. ಬಡ್ಡಿ ಸೇರಿ ಸುಮಾರು 447 ಕೋಟಿ ದಂಡದ ಹಣವನ್ನ ಸರ್ಕಾರವೇ ಕಂಪನಿಯ ಪರವಾಗಿ ಕಟ್ಟಿದೆ. ಈ ಹಗರಣದಲ್ಲಿ ಒಳ ಒಪ್ಪಂದವಾಗಿದೆ ಎಂದು ಆರೋಪ ಮಾಡಿದ್ದಾರೆ.

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇದರ ರೂವಾರಿಗಳು. ಒಂದೇ ದಿನದಲ್ಲಿ ನಿಮ್ಮ ಮಧ್ಯೆ ಯಾವ ಡೀಲ್ ಆಯ್ತು? ರಾಜ್ಯದ ಜನತೆಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಉತ್ತರ ಹೇಳಬೇಕು ಎಂದು ಬಿಎಸ್‍ವೈ ಹೇಳಿದ್ರು.

 

ಸುಪ್ರೀಂಕೋರ್ಟ್, ಹೈಕೋರ್ಟ್ ತೀರ್ಪಿಗೆ ವಿರುದ್ಧವಾಗಿ ರಾಜ್ಯ ಸರ್ಕಾರ ಹಣವನ್ನ ನೀಡಿದೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು. ಸಿದ್ದರಾಮಯ್ಯ ಹಗಲು ದರೋಡೆ ಮಾಡಿದ್ದಾರೆ. ಕಂಪನಿಯವರೊಂದಿಗೆ ಡೀಲ್ ಮಾಡಿಕೊಂಡು 100% ದಂಡದ ಮೊತ್ತವನ್ನ ಸರ್ಕಾರವೇ ಕಟ್ಟಿದೆ. ಇದು ಸಿದ್ದರಾಮಯ್ಯ ಸರ್ಕಾರದ ದೊಡ್ಡ ಹಗರಣ. ಸುಪ್ರೀಂಕೋರ್ಟ್ ನಲ್ಲಿ ಹಾಗೂ ಹೈಕೋರ್ಟ್ ಗಳಲ್ಲಿ ಪ್ರಕರಣ ನಡೆಯುತ್ತಿದೆ. ಹೀಗಿದ್ರೂ ಸರ್ಕಾರದ ಬೊಕ್ಕಸದಿಂದ ಯಾಕೆ ಹಣ ನೀಡಿದ್ದೀರಾ? ಎಂದು ಪ್ರಶ್ನಿಸಿದ್ರು.

ಕಾಂಗ್ರೆಸ್ ಅಧ್ಯಕ್ಷರು, ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ, ಲೋಕಸಭೆ ಕಾಂಗ್ರೆಸ್ ನಾಯಕರು ಎಲ್ಲರಿಗೂ ಈ ದಾಖಲೆಗಳನ್ನ ತಲುಪಿಸುತ್ತೇವೆ. ಕೊಲ್ಕತ್ತಾ ಕಂಪನಿ ಪರವಾಗಿ ಏಜೆಂಟ್ ರೀತಿ ಸರ್ಕಾರ ಹಣವನ್ನ ಕಟ್ಟಿದೆ ಎಂದು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ರು.

ಈ ಸುದ್ಧಿಗೋಷ್ಠಿಯಲ್ಲಿ ಮಾಜಿ ಸಚಿವ ಅರವಿಂದ್ ಲಿಂಬಾವಳಿ, ಮುರುಗೇಶ್ ನಿರಾಣಿ, ಬಿಜೆ ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹಾಗೂ ಬಿಜೆಪಿಯ ಹಲವು ಮುಖಂಡರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *