ಉಕ್ಕಿನ ಸೇತುವೆಗಾಗಿ 65 ಕೋಟಿ ರೂ. ಕಪ್ಪ – ಸಿಎಂ ವಿರುದ್ಧ ಬಿಎಸ್‍ವೈ ಹೊಸ ಬಾಂಬ್

Public TV
1 Min Read

– ಬಿಜೆಪಿಯವ್ರೂ ಕೊಟ್ಟಿದ್ರು ಎಂದ ಹೆಚ್‍ಡಿಕೆ

ಬೆಂಗಳೂರು: ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಸಿದ್ದರಾಮಯ್ಯ ಹೈಕಮಾಂಡ್‍ಗೆ 1 ಸಾವಿರ ಕೋಟಿ ರೂಪಾಯಿ ಕಪ್ಪ ನೀಡಿದ್ದಾರೆ ಎಂದು ಆರೋಪಿಸಿರುವ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

ವಿವಾದಿತ ಉಕ್ಕಿನ ಸೇತುವೆಗಾಗಿ ಸಿಎಂ ಸಿದ್ದರಾಮಯ್ಯಗೆ 65 ಕೋಟಿ ರೂಪಾಯಿ ಸಂದಾಯವಾಗಿದೆ ಎಂದು ಬಿಎಸ್‍ವೈ ಹೊಸ ಬಾಂಬ್ ಸಿಡಿಸಿದ್ದಾರೆ. ಉಕ್ಕಿನ ಸೇತುವೆ ಕಾಮಗಾರಿಯ ಆರಂಭಿಕ ಲೆಕ್ಕಾಚಾರ 1,350 ಕೋಟಿ ರೂಪಾಯಿ. ಆದ್ರೆ ನಂತರ 2,400 ಕೋಟಿ ರೂಪಾಯಿಗೆ ಏರಿಸಲಾಗಿತ್ತು. ಇದಕ್ಕಾಗಿ ಸಿಎಂ ಮತ್ತವರ ಶಿಷ್ಯರಿಗೆ 150 ಕೋಟಿ ರೂಪಾಯಿ ಕಮಿಷನ್ ಕೊಡುವುದಾಗಿ ಮಧ್ಯವರ್ತಿಗಳು ಮಾತುಕೊಟ್ಟಿದ್ದರು. ಅದರಲ್ಲಿ ಸಿಎಂಗೆ 65 ಕೋಟಿ ರೂಪಾಯಿ ಸಂದಾಯವಾಗಿದೆ ಎಂದು ಬೆಂಗಳೂರಲ್ಲಿ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

ಬಿಎಸ್‍ವೈ ಆರೋಪದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ದಾಖಲೆ ಬಿಡುಗಡೆ ಮಾಡುವಂತೆ ಸವಾಲು ಹಾಕಿದ್ದಾರೆ. ಕೋರ್ಟ್‍ನಲ್ಲಿ ದಾಖಲೆ ಕೇಳ್ತಾರೆಯೇ ಹೊರತು ಆಣೆ-ಪ್ರಮಾಣವನಲ್ಲ ಎಂದಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಮನೆಯಲ್ಲಿ 150 ಕೋಟಿ ರೂಪಾಯಿ ಮೊತ್ತದ ಅಕ್ರಮ ಆಸ್ತಿಪಾಸ್ತಿ ಸಿಕ್ಕಿದೆ ಅನ್ನೋದ್ರ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದ್ರೆ ಮುಖ್ಯ ಕಾರ್ಯದರ್ಶಿಗಳ ಮೂಲಕ ಬರೆದಿರುವ ಪತ್ರಕ್ಕೆ ತನಿಖೆ ಇನ್ನೂ ನಡೆಯುತ್ತಿದೆ ಅನ್ನೋ ಉತ್ತರವಷ್ಟೇ ಸಿಕ್ಕಿದೆ ಅಂತಾ ಸಿದ್ದರಾಮಯ್ಯ ಮೈಸೂರಲ್ಲಿ ತಿರುಗೇಟು ನೀಡಿದ್ದಾರೆ.

ಇತ್ತ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಮಾಜಿ ಸಿಎಂ ಹೆಚ್‍ಡಿಕೆ ಬಿಜೆಪಿ ವಿರುದ್ಧವೇ ಹೈಕಮಾಂಡ್‍ಗೆ ಕಪ್ಪ ನೀಡಿದ ಆರೋಪ ಮಾಡಿದ್ದಾರೆ. ಹೈಕಮಾಂಡಿಗೆ ಕಪ್ಪ ಕೊಡುವುದು ಬಿಜೆಪಿ ಸರಕಾರ ಇದ್ದಾಗಲೂ ನಡೆಯುತ್ತಿತ್ತು. ಯಾವುದೋ ಯೋಜನೆ ಹೆಸರಲ್ಲಿ ಗುತ್ತಿಗೆದಾರರಿಂದ ಹಣ ಪಡೆದು ಚೆಕ್ ಮೂಲಕ ದೆಹಲಿಯಲ್ಲಿರುವ ನಾಯಕರಿಗೆ ಹಣ ಪಾವತಿಯಾಗ್ತಿತ್ತು ಅಂತಾ ಮಂಗಳೂರಲ್ಲಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *