ಬಿಎಸ್‍ವೈ ಮನೆಗೆ ಮತ್ತಷ್ಟು ಪೊಲೀಸರ ನಿಯೋಜನೆ

Public TV
2 Min Read

ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನೆ ಎದುರು ಪ್ರತಿಭಟನೆ ಮಾಡಿದ್ದ ಹಿನ್ನೆಲೆಯಲ್ಲಿ ಅವರ ಮನೆಗೆ ಮತ್ತಷ್ಟು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ಮನೆಗೆ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಆದರೆ ಮತ್ತೆ ಈಗ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಎರಡು ಕೆಎಸ್‍ಆರ್ ಪಿ ತುಕಡಿಯನ್ನ ನಿಯೋಜಿಸಲಾಗಿದೆ. ಅಷ್ಟೇ ಅಲ್ಲದೇ ಬಿಎಸ್‍ವೈ ಮನೆಗೆ ಸಂಪರ್ಕಿಸುವ ಮುಖ್ಯರಸ್ತೆಗೆ ಬ್ಯಾರಿಕೇಡ್ ಹಾಕಲಾಗಿದೆ.

ಗುರುವಾರ ಚನ್ನರಾಯಪಟ್ಟಣ ತಾಲೂಕಿನ ತೋಟಿ ಗ್ರಾಮದಲ್ಲಿ ಮಾತನಾಡಿದ ಸಿಎಂ, ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಜನಪರ ಸರ್ಕಾರವನ್ನು ಉರುಳಿಸಲು ಬಿಜೆಪಿಯವರು ಮುಂದಾಗಿದ್ದಾರೆ. ಇಂತವರ ವಿರುದ್ಧ ನಾಡಿನ ಜನ ದಂಗೆ ಏಳಬೇಕು. ಈ ನಾಡಿನ ಜನರಿಗೆ ಈ ಪುಣ್ಯ ಭೂಮಿಯಿಂದಲೇ ನಾನು ದಂಗೆಗೆ ಕರೆ ನೀಡುತ್ತೇನೆ. ಅಷ್ಟೇ ಅಲ್ಲದೇ ನನ್ನಿಂದಲೂ ಏನಾದರೂ ತಪ್ಪಾಗಿದ್ದರೆ ಅಥವಾ ನಾನೇದರೂ ನಿಮಗೆ ದ್ರೋಹವನ್ನು ಮಾಡಿದ್ದರೆ, ಈ ನಾಡಿನ ಜನತೆ ನನ್ನ ವಿರುದ್ಧವೂ ದಂಗೆ ಏಳಿ ಎಂದು ಹೇಳಿದ್ದರು.

ಜನರನ್ನ ದಂಗೆ ಏಳಿಸು ಪ್ರಚೋದನೆ ನೀಡಿದ ಕುಮಾರಸ್ವಾಮಿ ಹೇಳಿಕೆಯನ್ನ ರಾಜಕೀಯವಾಗಿ ಬಳಸಿಕೊಳ್ಳಲು ಬಿಜೆಪಿ ತಂತ್ರ ರೂಪಿಸಿದೆ. ಯಾವುದೇ ಕಾರಣಕ್ಕೂ ಈ ಹೇಳಿಕೆಯನ್ನ ಸಾಯಲು ಬಿಡಬಾರದು, ಜೀವಂತವಾಗಿ ಇಡಬೇಕು. ನಿರಂತರವಾಗಿ ದಂಗೆ ಹೇಳಿಕೆಯನ್ನ ರಾಜಕೀಯಕ್ಕಾಗಿ ಬಳಸಬೇಕು ಅಂತ ಶಾಸಕರಿಗೆ ಯಡಿಯೂರಪ್ಪ ಸೂಚನೆ ನೀಡಿದ್ದರು. ದಂಗೆ ಹೇಳಿಕೆ ಬಗ್ಗೆ ಪದೇ ಪದೇ ಮಾತನಾಡಬೇಕು, ಟ್ವೀಟ್ ಮಾಡಬೇಕು ಅನ್ನೋ ಫರ್ಮಾನು ಹೊರಡಿಸಿದ್ದರು. ಇದರಿಂದ ಕಾಂಗ್ರೆಸ್ ಕಾರ್ಯಕರ್ತರು ಬಿಎಸ್‍ವೈ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದರು.

ದಂಗೆ ಪದವನ್ನು ಬಳಸಿದ್ದಕ್ಕೆ ಭಾರೀ ಟೀಕೆ ಬರುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ಅದನ್ನು ಶಮನ ಮಾಡುವ ನಿಟ್ಟಿನಲ್ಲಿ ಅರ್ಥವನ್ನು ಕಟ್ಟಿ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಮಾಧ್ಯಮಗಳಿಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ದಂಗೆ ಅಂದರೆ ಜನ ಪ್ರತಿಭಟನೆ ಮಾಡುತ್ತಾರೆ ಅಂತ, ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿ ಉತ್ತರಿಸಿದ್ದಾರೆ.

ಯಡಿಯೂರಪ್ಪ ಈ ಹಿಂದೆ ಸರಕಾರ ವಿರುದ್ಧ ದೊಣ್ಣೆ, ಬಡಿಗೆ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದರು. ಇದಕ್ಕಿಂತ ಕೆಟ್ಟ ಪದವನ್ನು ನಾನು ಬಳಸಿದ್ದೇನಾ? ಬಿಜೆಪಿ ಮುಖಂಡರು ಭೂಗತ ವ್ಯಕ್ತಿಗಳ ಸಂಪರ್ಕ ಇಟ್ಟುಕೊಂಡವರ ಮೂಲಕ ಸರ್ಕಾರ ಕೆಡವಲು ಮುಂದಾದರೆ ನಾನು ಸುಮ್ಮನೆ ಕೂರಬೇಕಾ ಎಂದು ಗರಂ ಆಗಿಯೇ ಪ್ರಶ್ನಿಸಿ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *