ಲಕ್ಕಿ ನಿವಾಸಕ್ಕೆ ಬಿಎಸ್‍ವೈ ಶಿಫ್ಟ್ – ಭರದಿಂದ ಸಾಗಿದೆ ಸುಣ್ಣ, ಬಣ್ಣ ಹೊಡೆಯುವ ಕೆಲಸ

Public TV
2 Min Read

ಶ್ರೀನಿವಾಸ್ ರಾವ್ ದಳವೆ
ಬೆಂಗಳೂರು: ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾದರೂ ತಮ್ಮ ಹಳೇಯ ಲಕ್ಕಿ ನಿವಾಸವನ್ನು ಬಿಎಸ್.ಯಡಿಯೂರಪ್ಪ ಬಿಡುತ್ತಿಲ್ಲ. ಇದೀಗ ಮರಳಿ ‘ರೇಸ್ ವ್ಯೂ ಕಾಟೇಜ್’ಗೆ ತೆರಳಲು ಸಿದ್ಧತೆ ನಡೆಸಿದ್ದು, ಸುಣ್ಣ, ಬಣ್ಣ ಬಳಿಯುವ ಕಾರ್ಯ ಭರದಿಂದ ಸಾಗುತ್ತಿದೆ.

ಬಿ.ಎಸ್.ಯಡಿಯೂರಪ್ಪನವರು, ಮುಖ್ಯಮಂತ್ರಿಯಾದರೂ ಗೃಹ ಕಚೇರಿ ಕೃಷ್ಣಾದಲ್ಲಿ ನೆಲೆಸದೆ, ತಮ್ಮ ಹಳೇ ರೇಸ್ ಕೋರ್ಸ್ ನಿವಾಸಕ್ಕೆ ಮರಳಲು ನಿರ್ಧರಿಸಿದ್ದಾರೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ‘ರೇಸ್ ವ್ಯೂ ಕಾಟೇಜ್’ ನಲ್ಲಿ ವಾಸ್ತವ್ಯ ಹೂಡಲು ಎಲ್ಲ ತಯಾರಿ ನಡೆಸಿದ್ದು, ಸುಣ್ಣ-ಬಣ್ಣ ಹೊಡೆಯುವ ಕೆಲಸ ಪ್ರಾರಂಭವಾಗಿದೆ.

ಈ ಹಿಂದೆಯೂ ಸಿಎಂ ಆಗಿದ್ದಾಗ ಯಡಿಯೂರಪ್ಪನವರು ಅದೇ ನಿವಾಸದಲ್ಲಿದ್ದರು. ಅಲ್ಲದೆ, 2004ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಇದೇ ನಿವಾಸದಲ್ಲಿ ವಾಸವಾಗಿದ್ದರು. ಇದೇ ಮನೆಯಲ್ಲಿಯೇ ಇದ್ದಾಗ ಬಿಎಸ್‍ವೈ ಉಪ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಗದ್ದುಗೆಯನ್ನು ಏರಿದ್ದರು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪರಿಗೆ `ರೇಸ್ ವ್ಯೂ ಕಾಟೇಜ್’ ಅದೃಷ್ಟ ಮನೆ ಎಂದು ಹೇಳಲಾಗುತ್ತಿದೆ.

ಸಮ್ಮಿಶ್ರ ಸರ್ಕಾರ ಬಂದ ಸಮಯದಲ್ಲಿ ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ನನಗೆ ಇದೇ ಮನೆ ಬೇಕು ಎಂದು ಸಿಎಂ ಕುಮಾರಸ್ವಾಮಿಗೆ ಮನವಿ ಮಾಡಿದ್ದರು. ಆದರೆ, ಯಡಿಯೂರಪ್ಪನವರ ಮನವಿಯನ್ನು ತಿರಸ್ಕರಿಸಿ ಶಿವಾನಂದ ಸರ್ಕಲ್ ಬಳಿಯ ನಿವಾಸವನ್ನು ಬಿಎಸ್‍ವೈ ನೀಡಿದ್ದರು. ಆದರೆ, ಯಡಿಯೂರಪ್ಪ ಮಾತ್ರ ಶಿವಾನಂದ ಸರ್ಕಲ್ ಬಳಿ ನಿವಾಸಕ್ಕೆ ಹೋಗಿರಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಸಾರಾ ಮಹೇಶ್ ನನಗೆ ರೇಸ್ ಕೋರ್ಸ್ ಮನೆಯೇ ಬೇಕು ಎಂದು ಹಠ ಹಿಡಿದು, ಅದೇ ಮನೆ ಪಡೆದಿದ್ದರು. ಬದಲಾದ ಕಾಲ ಘಟ್ಟದಲ್ಲಿ ಮತ್ತೆ ಯಡಿಯೂರಪ್ಪ ಸಿಎಂ ಆಗಿದ್ದು, ಮಾಜಿ ಸಚಿವರಾಗಿದ್ದ ಸಾರಾ ಮಹೇಶ್ ಮನೆ ಖಾಲಿ ಮಾಡಬೇಕಾಗಿದೆ.

ಲಕ್ಕಿ ಮನೆ ಯಾಕೆ?
ಒಂದು ರೀತಿಯಲ್ಲಿ ಬಿಎಸ್‍ವೈಗೆ ಇದು ಲಕ್ಕಿ ಮನೆ ಎಂದು ಹೇಳಲಾಗುತ್ತಿದ್ದು, ಇನ್ನು ಮನೆಯ ವಾತಾವರಣವೂ ಸಹ ಉತ್ತಮವಾಗಿದೆ. ಹೀಗಾಗಿ ಬಹುತೇಕ ನಾಯಕರು ಇದೇ ಮನೆ ಬೇಕು ಎನ್ನುತ್ತಾರೆ ಎಂದು ತಿಳಿದು ಬಂದಿದೆ. ಈ ಲಕ್ಕಿ ಮನೆಯಲ್ಲಿ ಉತ್ತಮವಾದ ಪರಿಸರ ವಾತಾವರಣ ಇದೆ. ಅಲ್ಲದೆ, ವಾಕಿಂಗ್ ಪಾಥ್, ಹುಲ್ಲು ಹಾಸು, ಬೃಹತ್ ಮರಗಳ ನೆರಳು ಈ ರೇಸ್ ಕೋರ್ಸ್ ನಿವಾಸದಲ್ಲಿ ಇದೆ. ಹೀಗಾಗಿ ಯಡಿಯೂರಪ್ಪ ಅವರಿಗೆ ಈ ಮನೆ ಇಷ್ಟ ಆಗಿದೆ. 2008ರಲ್ಲಿ ಸಿಎಂ ಆದಾಗ ಯಡಿಯೂರಪ್ಪ ಇದೇ ಮನೆಯಲ್ಲಿ ಇದ್ದರು. ಈ ಮನೆಗೆ ಬಂದ ಮೇಲೆ ಸಿಎಂ ಸ್ಥಾನ ಸಿಕ್ಕಿತು ಎಂಬ ನಂಬಿಕೆ ಯಡಿಯೂರಪ್ಪ ಅವರಿಗೆ ಇದೆ. ಹೀಗಾಗಿ ಮತ್ತೆ ತಮ್ಮ ಅದೃಷ್ಟದ ಮನೆಗೆ ಹೋಗುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *