ಊಟಕ್ಕೆ ರೊಟ್ಟಿ ಮಾಡಿಲ್ಲವೆಂದು ಸಹೋದರಿಗೇ ಗುಂಡಿಕ್ಕಿ ಕೊಂದ

Public TV
1 Min Read

ಲಕ್ನೋ: ಊಟಕ್ಕೆ ರೊಟ್ಟಿ ಮಾಡಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಯುವಕನೊಬ್ಬ ತನ್ನ ಸಹೋದರಿಯನ್ನು ಗುಂಡಿಕ್ಕಿ ಕೊಂದು ವಿಕೃತಿ ಮೆರೆದಿರುವ ಘಟನೆ ಉತ್ತರಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದಿದೆ.

ಲಖಿಂಪುರ್ ಖೇರಿಯ ಬರ್ಖೇಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬರ್ಖೇಡಾ ಗ್ರಾಮದ ನಿವಾಸಿ ಸೋನು ಸಿಂಗ್ ತನ್ನ ಸೋದರ ಸಂಬಂಧಿ ಸುಮನ್‍ನನ್ನು ಗುಂಡಿಕ್ಕಿ ಕೊಲೆಗೈದಿದ್ದಾನೆ. ಎರಡು ದಿನಗಳ ಹಿಂದೆ ಸುಮನ್ ತನ್ನ ಅತ್ತೆಯ ಮನೆಗೆ ಬಂದಿದ್ದಳು. ಈ ವೇಳೆ ಸೋನುಗೆ ಅಡುಗೆ ಮಾಡಿ ಊಟ ಬಡಿಸುತ್ತಿದ್ದಳು. ಕುಡಿದು ಮನೆಗೆ ಬಂದಿದ್ದ ಸೋನುಗೆ ಆ ಅಡುಗೆ ಇಷ್ಟವಿರಲಿಲ್ಲ. ಆಗ ಆತ ರೊಟ್ಟಿ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದ್ದನು. ಈ ಕಾರಣಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದು, ಮಾತಿಗೆ ಮಾತು ಬೆಳೆದು ಜಗಳವಾಗಿದೆ.

ಇಷ್ಟಕ್ಕೆ ಕೋಪಗೊಂಡ ಸೋನು ಮನೆಯಲಿದ್ದ ತನ್ನ ತಂದೆಯ ಲೈಸನ್ಸ್ ಇರುವ ಬಂದೂಕನ್ನು ತೆಗೆದುಕೊಂಡು ಸೋದರಿಯ ತಲೆಗೆ ಗುಂಡು ಹೊಡೆದಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾಳೆ. ಒಂದು ವರ್ಷದ ಹಿಂದೆಯಷ್ಟೇ ಸುಮನ್ ವಿವಾಹವಾಗಿದ್ದರು.

ಕೆಲವು ವರ್ಷಗಳ ಹಿಂದೆ ಸುಮನ್ ತಂದೆ ತೀರಿಹೋಗಿದ್ದರು. ಆ ಬಳಿಕ ಸುಮನ್‍ ತನ್ನ ಸೋದರ ಸಂಬಂಧಿ ಸೋನುವನ್ನೇ ತನ್ನ ನಿಜವಾದ ಸಹೋದರನಂತೆ ನೋಡಿಕೊಳ್ಳುತ್ತಿದ್ದರು. ಆದರೆ ಸೋನು ಸುಮನ್‍ರನ್ನು ಹತ್ಯೆ ಮಾಡುವಷ್ಟು ಕಟುಕನಾಗುತ್ತಾನೆ ಎಂದು ಯಾರೂ ಊಹೆ ಕೂಡ ಮಾಡಿರಲಿಲ್ಲ.

ಘಟನೆಯ ಬಳಿಕ ಆರೋಪಿ ಸೋನು ಪರಾರಿ ಆಗಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಸೋನು ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *