ಟಗರು ಗುದ್ದಿ ಕೊಟ್ಟಿಗೆಯಲ್ಲಿ ಲಾಕ್ ಆದ ಚಿರತೆ – ಕೆಆರ್‌ಎಸ್‌ನ ಬೃಂದಾವನದಲ್ಲಿ ಅಂತ್ಯವಾಗದ ಆತಂಕ

Public TV
2 Min Read

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಚಿರತೆ (Leopard) ಹಾವಳಿ ಮಿತಿಮೀರಿದೆ. ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಚಿರತೆ ಆತಂಕ ಸೃಷ್ಟಿಸುತ್ತಿದೆ. ಒಂದು ಕಡೆ ಕುರಿ-ಮೇಕೆ ಬೇಟೆಗಾಗಿ ಕೊಟ್ಟಿಗೆಗೆ ನುಗ್ಗಿದ ಚಿರತೆ ಅರಣ್ಯ ಇಲಾಖೆ ಅಧಿಕಾರಿಗಳ ಕೈಗೆ ಲಾಕ್ ಆದ್ರೆ, ಇತ್ತ ಕಳೆದ ಹದಿನೈದು ದಿನದಿಂದ ಕೆಆರ್‌ಎಸ್‌ (KRS) ಬೃಂದಾವನದಲ್ಲಿ ಕಣ್ಣಾಮುಚ್ಚಾಲೆ ಆಡಿಸುತ್ತಿರುವ ಚಿರತೆ ಪ್ರವಾಸಿಗರಿಗೆ ಆತಂಕ ಮೂಡಿಸಿದೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕುಂದನಗುಪ್ಪೆ ಗ್ರಾಮದ ಸುತ್ತಮುತ್ತ ಹಲವು ದಿನಗಳಿಂದ ಚಿರತೆ ಕಾಣಿಸಿಕೊಂಡು, ಜಾನುವಾರುಗಳ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿಸಿತ್ತು. ಗ್ರಾಮಸ್ಥರು ಹಲವು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಚಿರತೆ ಸೆರೆಹಿಡಿಯುವಂತೆ ಒತ್ತಾಯಿಸಿದ್ರು. ಆದ್ರೆ ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕುಂದನಗುಪ್ಪೆ ಗ್ರಾಮಕ್ಕೆ ಎಂಟ್ರಿ ಕೊಟ್ಟ ಚಿರತೆ ಕಷ್ಣಪ್ಪ ಎಂಬುವವರಿಗೆ ಸೇರಿದ ಕೊಟ್ಟಿಗೆಗೆ ನುಗ್ಗಿದೆ. ಕೊಟ್ಟಿಗೆಯಲ್ಲಿ 15ಕ್ಕೂ ಹೆಚ್ಚು ಕುರಿ-ಮೇಕೆ, ಒಂದು ಕರು, ಕೋಳಿ ಕೂಡ ಇತ್ತು. ಬೇಟೆಗೆ ನುಗ್ಗಿದ ಚಿರತೆಗೆ ಟಗರು ಗುದ್ದಿದ್ದು, ಚಿರತೆ ಗಾಬರಿಗೆ ಒಳಗಾಗಿದೆ. ಕುರಿ-ಮೇಕೆ ಚೀರಾಟ ಕೇಳಿ ಹೊರಬಂದ ಕೃಷ್ಣಪ್ಪ ಕುಟುಂಬ ಕೊಟ್ಟಿಗೆಯಲ್ಲಿ ಚಿರತೆ ಕಂಡು ದಿಗ್ಭ್ರಮೆಗೊಂಡಿದ್ದಾರೆ. ಚಿರತೆ ಬೇಟೆಗೆ ನುಗ್ಗಿ ಕೊಟ್ಟಿಗೆ ಸುತ್ತ ಹಾಕಿದ್ದ ಕಬ್ಬಿಣದ ಗೂಡಿನಿಂದ ಹೊರಬರಲಾಗದೆ ಕುರಿ ಮೇಕೆಯೊಂದಿಗೆ ಹಲವು ಗಂಟೆ ಕಳೆದಿದೆ. ನಂತರ ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಡಿಎಫ್‍ಓ ವೃತ್ತಾರನ್ ಹಾಗೂ ಹತ್ತಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳು ಚಿರತೆ ಸೆರೆ ಹಿಡಿಯಲು ಪ್ಲಾನ್ ರೂಪಿಸಿದ್ರು. ಪ್ಲಾನ್‍ನಂತೆ ಚಿರತೆ ಜನರನ್ನು ನೋಡಿ ಗಾಬರಿಯಾಗದಂತೆ ಕೊಟ್ಟಿಯನ್ನು ಟಾರ್ಪಾಲಿನಲ್ಲಿ ಮುಚ್ಚಿದ್ದು, ನಂತರ ಮೈಸೂರಿನಿಂದ ಅರವಳಿಕೆ ತಜ್ಞರನ್ನು ಕರೆಸಿ, ಚಿರತೆಗೆ ಅರವಳಿಕೆ ಮದ್ದು ನೀಡಿ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಚಿರತೆಯನ್ನು ಸೆರೆಹಿಡಿದ್ರು. ಇದನ್ನೂ ಓದಿ: ಬರೀ ಒಂದು ಕಾಲಲ್ಲ, ಆತನ ಮೈಯೆಲ್ಲ ಕೊಳೆತು ಹೋಗಬೇಕು – ಆ್ಯಸಿಡ್ ಸಂತ್ರಸ್ತೆ

ಚಿರತೆ ಸೆರೆಯಿಂದ ಕುಂದನಗುಪ್ಪೆ ಗ್ರಾಮಸ್ಥರೇನೋ ನಿಟ್ಟುಸಿರು ಬಿಟ್ಟಿದ್ದಾರೆ. ಆದ್ರೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ನಲ್ಲಿ ಚಿರತೆ ಆತಂಕ ಮುಂದುವರಿದಿದೆ. ಕಳೆದ ಹದಿನೈದು ದಿನದಿಂದಲು ಚಿರತೆ ಕಣ್ಣಾಮುಚ್ಚಾಲೆ ಆಟ ಆಡ್ತಿದ್ದು, ಪ್ರವಾಸಿಗರಲ್ಲಿ ಆತಂಕದ ಜೊತೆಗೆ ಬೇಸರ ಮೂಡಿಸಿದೆ. ಅಕ್ಟೋಬರ್ 22 ರಂದು ಕೆಆರ್‌ಎಸ್‌ ಡ್ಯಾಂ ಪಕ್ಕದಲ್ಲಿ ಚಿರತೆ ಸಿಬ್ಬಂದಿ ಕಣ್ಣಿಗೆ ಕಾಣಿಸಿತ್ತು. ಅಂದು ಬೋನ್ (Cage) ಇಟ್ಟು, ಒಂದು ದಿನ ಕಾರ್ಯಾಚರಣೆ ನಡೆಸಿ ಚಿರತೆ ಸಿಗದಿದ್ದಕ್ಕೆ ಸುಮ್ಮನಾಗಿದ್ರು. ಯಾವಾಗ ಮತ್ತೆ ಅ.28 ರಂದು ಬೃಂದಾವನದ ಉತ್ತರ ಬೃಂದಾವನದಲ್ಲಿ ಚಿರತೆ ಪ್ರತ್ಯಕ್ಷವಾಗಿ, ಸಿಸಿಟಿವಿಯಲ್ಲಿ (CCTV) ಚಿರತೆಯ ಚಲನವಲನ ಸೆರೆಯಾಯ್ತೋ ಅಂದಿನಿಂದ ಇಂದಿನವರೆಗೂ ಉತ್ತರ ಬೃಂದಾವನ ಬಂದ್ ಮಾಡಿ, ಬೋನ್ ಇಟ್ಟು ಜವಬ್ದಾರಿಯಿಂದ ಕೈತೊಳೆದುಕೊಂಡಿದೆ. ಆದ್ರೆ ಇದು ಪ್ರವಾಸಿಗರ ಬೇಸರಕ್ಕೆ ಕಾರಣವಾಗಿದೆ. ಇದನ್ನೂ ಓದಿ: ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬೃಂದಾವನದ ಪ್ರಮುಖ ಆಕರ್ಷಣೆ ಅಂದರೇ ಅದು ಉತ್ತರ ಬೃಂದಾವನದಲ್ಲಿರುವ ನೃತ್ಯ ಕಾರಂಜಿ. ಆ ಸೌಂದರ್ಯ ಸವಿಯಬೇಕೆಂದು ರಾಜ್ಯವಲ್ಲದೆ ಹೊರರಾಜ್ಯದಿಂದಲು ಬಹಳಷ್ಟು ಜನ ಬರ್ತಾರೆ. ಆದ್ರೆ ಉತ್ತರ ಬೃಂದಾವನ ಬಂದ್ ಆಗಿರುವುದು ಬೇಸರ ಆಗುತ್ತಿದೆ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ ಆರ್ಥಿಕ ಹೊಡೆತ ಉಂಟುಮಾಡಿದೆ. ಅಲ್ಲದೇ ಟಿಕೆಟ್ ದರವನ್ನು ಕಡಿಮೆ ಮಾಡದೇ, ಚಿರತೆ ಸೆರೆಹಿಡಿಯದೆ ನಿರ್ಲಕ್ಷ್ಯ ಮಾಡ್ತಿರುವ ಕಾವೇರಿ ನೀರಾವರಿ ನಿಗಮ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *