ಲಕ್ನೋ: ಮದುವೆಯಲ್ಲಿ ವಧು ತನ್ನ ವರನ ಮುಖವನ್ನು ನೋಡಿ ಜೋರಾಗಿ ಕಿರುಚಿ ಮದುವೆಯನ್ನು ನಿಲ್ಲಿಸಿದ ಘಟನೆ ಉತ್ತರ ಪ್ರದೇಶದ ಸರಹರಿಯ ಚಿಲ್ಲೂತಾಲ್ನಲ್ಲಿ ನಡೆದಿದೆ.
ಪುಷ್ಪಾ ವರನನ್ನು ನೋಡಿ ಮದುವೆ ನಿಲ್ಲಿಸಿದ ವಧು. ಚಿಲ್ಲೂತಾಲ್ ತಾಲೂಕಿನ ಭಗವಾನ್ಪುರ್ ನ ನಿವಾಸಿಯಾದ ರವೀಂದ್ರ ಚೌಹ್ವಾನ್ ಅವರ ಪುತ್ರ ಚೇತಾಯಿ ಚೌಹ್ವಾನ್ ಅವರ ವಿವಾಹ ಅದೇ ಗ್ರಾಮದ ನಿವಾಸಿಯಾದ ಪುಷ್ಪಾ ಜೊತೆ ಭಾನುವಾರ ಚೌಹ್ವಾನ್ ಸಮುದಾಯದಂತೆ ನಡೆಯಬೇಕಿತ್ತು.
ವರನ ಕುಟುಂಬದವರು ಹಾಗೂ ಸಂಬಂಧಿಕರು ವಧು ಪುಷ್ಪಾ ಮನೆಗೆ ಮೆರವಣಿಗೆ ಮೂಲಕ ಆಗಮಿಸಿದ್ದಾರೆ. ಆಗ ಪುಷ್ಪಾ ವರನ ಮುಖ ನೋಡುತ್ತಿದ್ದಂತೆ ಜೋರಾಗಿ ಕಿರುಚಿ ತನ್ನ ಮದುವೆ ನಿಲ್ಲಿಸಿದ್ದಾಳೆ. ಪುಷ್ಪಾ ಬಳಿ ಕಾರಣ ಕೇಳಿದ್ದಾಗ ಮದುವೆಗೆ ಬಂದಿದ್ದ ಮಂದಿ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ.
ವರ ಸಾಧಾರಣ ಬಣ್ಣ ಹೊಂದಿದ್ದಕ್ಕೆ ನಾನು ಆತನನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾಳೆ. ಪುಷ್ಪಾ ನಿರಾಕರಿಸಿದ್ದಕ್ಕೆ ಆಕೆಯ ಕುಟುಂಬದವರು ಹಾಗೂ ಸಂಬಂಧಿಕರು ಆಕೆಯ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಪುಷ್ಪಾ ಮದುವೆಯಾಗಲು ಒಪ್ಪಲೇ ಇಲ್ಲ. ಪುಷ್ಪಾ ಮದುವೆಗೆ ಒಪ್ಪದಿದ್ದಾಗ ಆಕೆಯ ಚಿಕ್ಕಪ್ಪ ಕೂಡ ಮದುವೆ ಬೇಡ ಎಂದು ಹೇಳಿದ್ದಾರೆ.
ವರನನ್ನು ಸ್ವಾಗತ ಮಾಡಿದ ಮೇಲೆ ಹೂಮಾಲೆಯ ಶಾಸ್ತ್ರ ಕೂಡ ಮುಗಿದಿತ್ತು. ಅದೇ ಸಮಯದಲ್ಲೇ ಪುಷ್ಪಾಳಿಗೆ ವರ ಇಷ್ಟವಾಗಲಿಲ್ಲ. ನಂತರ ಊಟ ಮಾಡಲು ಹೋಗುವಾಗ ವರನ ಕಡೆಯವರು ಹಾಗೂ ವಧುವಿನ ಕಡೆಯವರು ಹೊಡೆದಾಡಿಕೊಂಡಿದ್ದಾರೆ.
ತಕ್ಷಣ ಅಲ್ಲಿದ್ದ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಮೇಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಜಗಳ ನಿಲ್ಲಿಸಿದ್ದಾರೆ. ನಂತರ ಪೊಲೀಸ್ ಠಾಣೆಯಲ್ಲೇ ಪಂಚಾಯ್ತಿ ನಡೆಸಿ, ವರನ ಕುಟುಂಬದವರು ಹಾಗೂ ಸಂಬಂಧಿಕರನ್ನು ವಾಪಸ್ ಕಳುಹಿಸಿದರು.