ಪ್ರೇಮಿಗಳ ಮದ್ವೆ ಗಲಾಟೆ – ಹುಡ್ಗನ ತಂದೆ, ಪ್ರೇಯಸಿಯ ಸೋದರ ವಿಷ ಸೇವನೆ

Public TV
1 Min Read

ಹೈದರಾಬಾದ್: ಮದುವೆಯ ವಿಚಾರವಾಗಿ ಹುಡುಗಿಯ ಸಹೋದರ ಮತ್ತು ಹುಡುಗಿಯ ಪ್ರಿಯತಮನ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಝಹೀರಾಬಾದ್ ನಲ್ಲಿ ನಡೆದಿದೆ.

ಅಂಜಣ್ಣ ಮತ್ತು ಜಗದೀಶ್ವರ್ ಆತ್ಮಹತ್ಯೆಗೆ ಶರಣಾದವರು. ನಾಗಮಣಿ ಮತ್ತು ಮಹೇಶ್ ಇಬ್ಬರೂ ಕೆಲವು ವರ್ಷಗಳಿಂದ ಪರಸ್ಪರ ಒಬ್ಬೊಬ್ಬರನ್ನು ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹೇಶ್ ತಂದೆ ಅಂಜಣ್ಣ ಮತ್ತು ನಾಗಮಣಿ ಸಹೋದರ ಜಗದೀಶ್ವರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಏನಿದು ಪ್ರಕರಣ?
ನಾಗಮಣಿ ಮತ್ತು ಮಹೇಶ್ ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ ಎರಡು ತಿಂಗಳುಗಳ ಹಿಂದೆ ನಾಗಮಣಿಗೆ ಅವರ ಕುಟುಂಬದವರು ಗೋಟಿಗರಿಪಲ್ಲಿ ಮೂಲದ ಬೇರೊಬ್ಬ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿದ್ದಾರೆ. ಮಹೇಶ್ ಗೆ ನಿಶ್ಚಿತಾರ್ಥದ ಬಗ್ಗೆ ತಿಳಿದಿದೆ. ಕೂಡಲೇ ನಾಗಮಣಿ ಮನೆಗೆ ಹೋಗಿ ಗಲಾಟೆ ಮಾಡಿದ್ದಾನೆ.

ಈ ವೇಳೆ ಮಹೇಶ್ ಮತ್ತು ನಾಗಮಣಿಯ ಎರಡೂ ಕುಟುಂಬಗಳ ನಡುವೆ ಜಗಳವಾಗಿದೆ. ಈ ಗಲಾಟೆಯಿಂದ ಮನನೊಂದ ಮಹೇಶ್ ತಂದೆ ಅಂಜಣ್ಣಾ ಕೀಟನಾಶಕ ಔಷಧಿಯನ್ನು ಕುಡಿದಿದ್ದಾರೆ. ಇತ್ತ ಅಂಜಣ್ಣಾ ವಿಷ ಕುಡಿದ ತಕ್ಷಣ ನಾಗಮಣಿಯ ಸಹೋದರ ಜಗದೀಶ್ವರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಬ್ಬರು ವಿಷ ಕುಡಿದಿದ್ದನ್ನು ನೋಡಿದ ನಾಗಮಣಿ ಕೂಡ ಕೀಟನಾಶಕ ಔಷಧವನ್ನು ಕುಡಿದಿದ್ದಾಳೆ.

ಕುಟುಂಬದವರು ಮೂವರನ್ನು ಸಾಂಗರೆಡ್ಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಂಜಣ್ಣ ಮತ್ತು ಜಗದೀಶ್ವರ್ ಮೃತಪಟ್ಟಿದ್ದಾರೆ. ಸದ್ಯಕ್ಕೆ ನಾಗಮಣಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಪೊಲೀಸರು ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *