ಸೈಕಲ್ ರಿಪೇರಿ ತಡವಾಗಿದೆ ಎಂದು ಪತ್ರ ಬರೆದ ಮಕ್ಕಳು – ಸಹಾಯಕ್ಕೆ ಬಂದ ಪೊಲೀಸ್

Public TV
2 Min Read

ತಿರುವನಂತಪುರಂ: ಸೈಕಲ್ ರಿಪೇರಿ ಮಾಡಿಕೊಡಲು ತಡಮಾಡುತ್ತಿದ್ದಾರೆ ಎಂದು ಪುಟ್ಟ ಸಹೋದರರು ಬರೆದ ಪತ್ರಕ್ಕೆ ಸ್ಪಂದಿಸಿದ ಕೇರಳ ಪೊಲೀಸರಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತದೆ.

ಕೇರಳದ ಕೋಜಿಕೋಡ್‍ನ ಐದನೇ ತರಗತಿ ಓದುತ್ತಿರುವ ಅಬಿನ್ ಪೊಲೀಸರಿಗೆ ಪತ್ರ ಬರೆದಿದ್ದು, ಈ ಪತ್ರದಲ್ಲಿ ನಾನು ಮತ್ತು ನನ್ನ ಸಹೋದರನ ಸೈಕಲ್ ಅನ್ನು ಎರಡು ತಿಂಗಳ ಹಿಂದೆ ರಿಪೇರಿಗೆ ಕೊಟ್ಟಿದ್ದೆವು. ಆದರೆ ಅವರು ನಮಗೆ ಸೈಕಲ್ ವಾಪಸ್ ಮಾಡುತ್ತಿಲ್ಲ ನಮಗೆ ಸಹಾಯ ಮಾಡಿ ಎಂದು ಪೊಲೀಸರಿಗೆ ಪತ್ರ ಬರೆದಿದ್ದಾನೆ.

https://www.facebook.com/keralapolice/photos/a.135262556569242/2504084799686994/?type=3

ಇದೇ ತಿಂಗಳ 25 ರಂದು ಮಲಯಾಳಂ ಭಾಷೆಯಲ್ಲಿ ಬರೆದಿರುವ ಪತ್ರದಲ್ಲಿ, ನಾನು ಮತ್ತು ನನ್ನ ಸಹೋದರನ ಸೈಕಲ್ ಅನ್ನು ರಿಪೇರಿ ಮಾಡಿಸಲು ಶಾಪ್‍ಗೆ ನೀಡಿದ್ದೇವೆ. ಆದರೆ ನಾವು ಶಾಪ್ ಬಳಿ ಹೋಗಿ ಅನೇಕ ಬಾರಿ ಸೈಕಲ್ ಕೇಳಿದರೆ ಮಾಲೀಕರು ನೀಡುತ್ತಿಲ್ಲ. ಇನ್ನೂ ನಿಮ್ಮ ಸೈಕಲ್ ಸರಿಯಾಗಿಲ್ಲ ಎನ್ನುತ್ತಿದ್ದಾರೆ. ಈ ವಿಚಾರವಾಗಿ ನಮ್ಮ ಮನೆಯವರು ನಮಗೆ ಸಹಾಯ ಮಾಡುತ್ತಿಲ್ಲ ಎಂದು ಪತ್ರ ಬರೆದಿದ್ದಾರೆ.

ಪತ್ರ ಬಂದು ತಲುಪಿದ ನಂತರ ಈ ಪತ್ರವನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಶೇರ್ ಮಾಡಿರುವ ಕೇರಳ ಪೊಲೀಸರು, ನಾವು ದೂರನ್ನು ದಾಖಲಿಸಿಕೊಂಡಿದ್ದೇವೆ. ನಮ್ಮ ಪೊಲೀಸ್ ಅಧಿಕಾರಿ ರಾಧಿಕಾ ಎನ್‍ಪಿ ಸೈಕಲ್ ಶಾಪ್‍ಗೆ ಹೋಗಿ ವಿಚಾರಣೆ ಮಾಡಿದ್ದಾರೆ. ಮಾಲೀಕರು ಅನಾರೋಗ್ಯ ಮತ್ತು ಅವರ ಮಗನ ಮದುವೆಯಲ್ಲಿ ಬ್ಯುಸಿ ಇದ್ದ ಕಾರಣ ರಿಪೇರಿ ಮಾಡಲು ಆಗಿಲ್ಲ. ಆದರೆ ಅದಷ್ಟೂ ಬೇಗ ಸೈಕಲ್ ಗಳನ್ನು ರೆಡಿ ಮಾಡಿಕೊಡುವುದಾಗಿ ಹೇಳಿದ್ದಾರೆ ಎಂದು ಬರೆದುಕೊಂಡಿದ್ದಾರೆ.

https://www.facebook.com/keralapolice/photos/p.2504086796353461/2504086796353461/?type=3

ಇದಾದ ನಂತರ ಇನ್ನೊಂದು ಫೇಸ್ ಬುಕ್ ಪೋಸ್ಟ್ ಹಾಕಿರುವ ಕೇರಳ ಪೊಲೀಸರು, ಈ ಇಬ್ಬರು ಪುಟ್ಟ ಸಹೋದರರ ಸೈಕಲ್ಸ್ ವಾಪಸ್ ಬಂದಿವೆ ಎಂದು ಬರೆದುಕೊಂಡು, ಅಬಿನ್ ಮತ್ತು ಆತನ ಸಹೋದರ ಸೈಕಲ್ ಬಳಿ ನಿಂತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.

ಪೊಲೀಸರ ಈ ಸಹಾಯಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದು, ಈ ಪೋಸ್ಟ್ ಅನ್ನು 70 ಸಾವಿರ ಜನ ಲೈಕ್ ಮಾಡಿದ್ದರೆ ಮತ್ತು 4 ಸಾವಿರ ಜನ ಶೇರ್ ಮಾಡಿದ್ದಾರೆ. ಪೊಲೀಸರು ಈ ಕೆಲಸವನ್ನು ಶ್ಲಾಘಿಸಿ ಸಾವಿರಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿದ್ದು, ಪುಟ್ಟು ಸಹೋದರರಿಗೆ ಸಹಾಯ ಮಾಡಿದ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *