ಎರಡೂ ಕಾಲು ಕಟ್ ಮಾಡಿದ್ರೂ ಬಾಲಕ ಸಾವು: ವೈದ್ಯರ ವಿರುದ್ಧ ಪೋಷಕರ ಆಕ್ರೋಶ

Public TV
1 Min Read

ಮೈಸೂರು: ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಕ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ. ಆದ್ರೆ ಬಾಲಕನ ಸಾವಿಗೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಪೋಷಕರು ಪ್ರತಿಭಟಿಸಿದ್ದಾರೆ.

ಮೈಸೂರು ತಾಲೂಕು ಸಿದ್ದರಾಮನಹುಂಡಿ ಗ್ರಾಮದ 14 ವರ್ಷದ ಶಿವಕುಮಾರ್ ಕಳೆದ ಶುಕ್ರವಾರ ಅಪಘಾತದಲ್ಲಿ ಗಾಯಗೊಂಡು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದನು. ಸೋಮವಾರ ಒಂದು ಕಾಲು ತೆಗೆದ ವೈದ್ಯರು ನಿನ್ನೆ ಮತ್ತೊಂದು ಕಾಲನ್ನು ತೆಗೆದಿದ್ದಾರೆ. ಪ್ರಾಣಕ್ಕೆ ಯಾವುದೇ ಅಪಾಯವಿಲ್ಲವೆಂದು ವೈದ್ಯರು ಹೇಳಿ ಕಾಲು ತೆಗೆದಿದ್ದರು. ಆದ್ರೆ ಇಂದು ಬೆಳಗ್ಗೆ ಶಿವಕುಮಾರ್ ಮೃತಪಟ್ಟಿದ್ದಾನೆ. ಇದರಿಂದ ಆಸ್ಪತ್ರೆಯ ಮುಂದೆ ಮೃತ ಬಾಲಕನ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ವೈದ್ಯರ ನಿರ್ಲಕ್ಷ್ಯದಿಂದ ಈ ಸಾವು ಉಂಟಾಗಿದೆ ಎಂದು ಪೋಷಕರು ಆರೋಪಿಸಿ ಆಸ್ಪತ್ರೆಯ ಮುಂಭಾಗ ಶವವಿಟ್ಟುಕೊಂಡು ಪ್ರತಿಭಟಿಸಿದರು. ಈಗಾಗಲೇ ಮೂರು ಲಕ್ಷ ರೂಪಾಯಿ ಕಟ್ಟಿಸಿಕೊಂಡ ಆಸ್ಪತ್ರೆ ಸಿಬ್ಬಂದಿ ಇನ್ನೂ ಎರಡು ಲಕ್ಷ ಹಣ ಕಟ್ಟಬೇಕೆಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಬಾಲಕನ ಮೃತದೇಹ ನೀಡುವಾಗ ಕೂಡ ಪೋಷಕರು ಮತ್ತು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಮಾತಿನ ಚಕಮಕಿ ನಡೆದಿದ್ದು, ಅಪೋಲೊ ಶವಗಾರದ ಮುಂದೆ ತಳ್ಳಾಟ ನೂಕಾಟ ಉಂಟಾಗಿತ್ತು. ಆಸ್ಪತ್ರೆ ಸಿಬ್ಬಂದಿವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಆಸ್ಪತ್ರೆ ಅಧಿಕಾರಿಗಳು 1 ಲಕ್ಷ ಹಣ ವಾಪಸ್ ಕೊಡುವುದಾಗಿ ಒಪ್ಪಿಕೊಂಡರು. ಬಾಕಿ 2 ಲಕ್ಷ ಹಣ ಕಟ್ಟಿಸಿಕೊಳ್ಳದೆ ಮೃತದೇಹ ಹಸ್ತಾಂತರ ಮಾಡಿದ್ದು, ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕೆ ಆರ್ ಆಸ್ಪತ್ರೆಗೆ ರವಾನಿಸಲಾಯಿತು. ಸಿಎಂ ಸಿದ್ದರಾಮಯ್ಯ ಮೈಸೂರು ಆಪ್ತ ಸಹಾಯಕ ಕುಮಾರ್ ಮಧ್ಯಸ್ಥಿಕೆಯಲ್ಲಿ ಪ್ರಕರಣ ಇತ್ಯರ್ಥವಾಯಿತು.

https://www.youtube.com/watch?v=QQqb7py3Zrs

 

 

Share This Article
Leave a Comment

Leave a Reply

Your email address will not be published. Required fields are marked *