ಬಿಸಿ ಸಾಂಬಾರ್ ಪಾತ್ರೆಯಲ್ಲಿ ಬಿದ್ದು 6 ವರ್ಷದ ಬಾಲಕ ಸಾವು

Public TV
1 Min Read

ಹೈದರಾಬಾದ್: ಬಿಸಿ ಸಾಂಬಾರ್ ಪಾತ್ರೆಯಲ್ಲಿ ಬಿದ್ದು 6 ವರ್ಷದ ಬಾಲಕ ಮೃತಪಟ್ಟ ಘಟನೆ ಬುಧವಾರ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಪನ್ಯಂನಲ್ಲಿ ನಡೆದಿದೆ.

ಪುರುಷೋತ್ತಮ್ ರೆಡ್ಡಿ(6) ಮೃತಪಟ್ಟ ಬಾಲಕ. ಶ್ಯಾಮ್‍ಸುಂದರ್ ರೆಡ್ಡಿ ಹಾಗೂ ಕಲ್ಪನಾ ಮಗನಾಗಿರುವ ಪುರುಷೋತ್ತಮ್ ಪನ್ಯಂನ ಖಾಸಗಿ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದನು. ಕಲ್ಪನಾ 2 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹಾಗಾಗಿ ಶ್ಯಾಮ್‍ಸುಂದರ್ ತನ್ನ ಮಗನನ್ನು ವಿಜಯಾನಿಕೇತನ್ ವಸತಿ ಶಾಲೆಗೆ ಸೇರಿಸಿದ್ದರು.

ಪ್ರತಿ ದಿನದಂತೆ ಬುಧವಾರ ಮಧ್ಯಾಹ್ನ ವಿದ್ಯಾರ್ಥಿಗಳು ಊಟಕ್ಕಾಗಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಮಕ್ಕಳು ಜಾಗಕ್ಕಾಗಿ ತಮಾಷೆ ಮಾಡುತ್ತಿದ್ದರು. ಈ ರೀತಿ ಮಾಡುವಾಗ ಆಕಸ್ಮಿಕವಾಗಿ ಪುರುಷೋತ್ತಮ್‍ನನ್ನು ತಳ್ಳಿದ್ದಾರೆ. ಪರಿಣಾಮ ತನ್ನ ಮುಂದೆ ಇದ್ದ ಬಿಸಿ ಸಾಂಬಾರ್ ಪಾತ್ರೆಯಲ್ಲಿ ಪುರುಷೋತ್ತಮ್ ಬಿದ್ದಿದ್ದಾನೆ.

ಪುರುಷೋತ್ತಮ್ ಪಾತ್ರೆಗೆ ಬೀಳುವುದನ್ನು ನೋಡಿದ ಶಾಲಾ ಅಟೆಂಡರ್ ಪೀರಮ್ಮ ಆತನನ್ನು ಹೊರತೆಗೆದಿದ್ದಾರೆ. ಬಳಿಕ ಶಾಲಾ ಆಡಳಿತ ಮಂಡಳಿ ಪುರುಷೋತ್ತಮ್‍ಗೆ ಚಿಕಿತ್ಸೆ ಕೊಡಿಸಲು ಹತ್ತಿರ ಶಾಲೆಗೆ ಕರೆದುಕೊಂಡು ಹೋದರು. ಅಲ್ಲದೆ ಈ ವಿಷಯವನ್ನು ಆತನ ತಂದೆಗೂ ತಿಳಿಸಲಾಯಿತು.

ಈ ಘಟನೆಯಲ್ಲಿ ಪುರುಷೋತ್ತಮ್ ದೇಹ ಸಾಕಷ್ಟು ಸುಟ್ಟು ಹೋಗಿದ್ದು, ಚರ್ಮದ ಮೇಲೆ ಗುಳ್ಳೆಗಳು ಬಂದಿತ್ತು. ಹಾಗಾಗಿ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬಾಲಕನನ್ನು ಕರ್ನೂಲ್ ಆಸ್ಪತ್ರೆಗೆ ದಾಖಲಿಸುವಂತೆ ಹೇಳಿದರು. ಆದರೆ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಬಾಲಕ ಮೃತಪಟ್ಟಿದ್ದಾನೆ.

ಈ ಬಗ್ಗೆ ಪನ್ಯಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *