ಕಲಬುರಗಿ: ಹೆತ್ತ ತಾಯಂದಿರೇ ಗಂಡು ಮಗುವಿಗಾಗಿ ಜಿದ್ದಿಗೆ ಬಿದ್ದು ಕರುಳ ಕುಡಿಗಳಿಗೆ ಎದೆಹಾಲು ಕೊಡ್ತಿಲ್ಲ.
ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ನಾಲ್ಕು ದಿನಗಳ ಹಿಂದೆ ಮಕ್ಕಳು ಅದಲು ಬದಲು ಪ್ರಕರಣ ನಡೆದಿತ್ತು. ಆ ಪ್ರಕರಣ ಇಂದಿಗೂ ಇತ್ಯರ್ಥವಾಗದ ಹಿನ್ನಲೆಯಲ್ಲಿ ಎರಡು ಕಂದಮ್ಮಗಳು ತಾಯಿಯ ಹಾಲಿಗಾಗಿ ಪರಿದಾಡುತ್ತಿವೆ. ಸಮಸ್ಯೆಗೆ ಪರಿಹರಿಸಬೇಕಾದ ವೈದ್ಯರು ಇದೀಗ ಪೊಲೀಸರತ್ತ ಬೊಟ್ಟು ಮಾಡಿದ್ದಾರೆ.
ಎದೆಹಾಲಿನಿಂದ ವಂಚಿತವಾಗಿ ಅಳುತ್ತಾ ಮಲಗಿರುವ ಕಂದಮ್ಮಗಳು, ಮತ್ತೊಂದೆಡೆ ಆಸ್ಪತ್ರೆ ಸಿಬ್ಬಂದಿಯ ಎಡವಟ್ಟಿನಿಂದ ಮಕ್ಕಳಿದ್ದರೂ ಸಹ ಮಕ್ಕಳನ್ನ ಕಳೆದುಕೊಂಡ ತಾಯಂದಿರು. ಈ ದೃಶ್ಯ ಕಂಡು ಬಂದಿದ್ದು ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ. ಡಿಸೆಂಬರ್ 14ರಂದು ರಾತ್ರಿ 10.20ಕ್ಕೆ ನಂದಮ್ಮ ಮತ್ತು 10.25ಕ್ಕೆ ನಾಜ್ಮಿನ್ ಎಂಬ ಇಬ್ಬರು ಮಹಿಳೆಯರ ಹೆರಿಗೆಯಾಗಿದೆ.
ನಂತರ ಪೊಷಕರಿಗೆ ಮಗು ತೋರಿಸುವಾಗ ಆಸ್ಪತ್ರೆಯ ಸಿಬ್ಬಂದಿ ಅದಲು ಬದಲು ಮಾಡಿ ಎರಡು ಕಡೆಯವರಿಗೆ ಇಕಟ್ಟಿಗೆ ಸಿಲುಕಿಸಿದ್ದಾರೆ. ಆದ್ರೆ ಗಂಡು ಮಗು ನಮ್ಮದು ಅಂತಾ ನಂದಮ್ಮ ಮತ್ತು ನಾಜ್ಮಿನ್ ಕುಟುಂಬದವರು ಪಟ್ಟು ಹಿಡಿದಿದ್ದು, ಇಬ್ಬರೂ ಸಹ ಕಂದಮ್ಮಗಳಿಗೆ ಕಳೆದ ಐದು ದಿನಗಳಿಂದ ಹಾಲುಣಿಸುತ್ತಿಲ್ಲ. ಹೀಗಾಗಿ ಈ ತಾಯಂದಿರ ಜಗಳದಲ್ಲಿ ಕಂದಮ್ಮಗಳು ಅನಾಥವಾಗಿವೆ.
ಈಗಾಗಲೇ ಎರಡು ಕಂದಮ್ಮಗಳ ರಕ್ತ ಪರೀಕ್ಷೆ ನಡೆಸಿ ಗಂಡು ಮಗು ನಾಜ್ಮಿನ್ಗೆ ಸೇರಿದ್ದು ಅಂತಾ ವೈದ್ಯರು ಹೇಳಿದ್ದಾರೆ. ಆದರೆ ನಂದಮ್ಮ ಕುಟುಂಬವದರು ಗಂಡು ಮಗು ನಮಗೆ ಸೇರಿದ್ದು ಅಂತಾ ಪಟ್ಟು ಹಿಡಿದಿದ್ದಾರೆ. ಇದು ವೈದ್ಯರಿಗೆ ತಲೆ ನೋವಾಗಿದ್ದು ಪ್ರಕರಣವನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಇನ್ನು ಈ ಕುರಿತು ಕಲಬುರಗಿ ಎಸ್ಪಿ ಎನ್.ಶಶಿಕುಮಾರ್ ಇನ್ನೊಮ್ಮೆ ಬೇರೆಡೆ ರಕ್ತ ಪರೀಕ್ಷೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದ್ದಾಗಿ ಹೇಳುತ್ತಿದ್ದಾರೆ.
ಆಸ್ಪತ್ರೆ ಸಿಬ್ಬಂದಿಯ ಮಹಾ ಎಡವಟ್ಟಿನಿಂದ ಇದೀಗ ಆ ಎರಡು ಮಕ್ಕಳು ತಾಯಿಯ ಎದೆಹಾಲಿನಿಂದ ವಂಚಿತವಾಗಿವೆ.