ಕೊನೇ ಹಂತ ತಲುಪಿದ ಕಾವೇರಿ ರಕ್ಷಣೆ- ಸುರಂಗ ಕೊರೆಯಲು ಒಂದೂವರೆ ಅಡಿ ಬಾಕಿ

Public TV
1 Min Read

ಬೆಳಗಾವಿ: ಝುಂಜರವಾಡದಲ್ಲಿ ಕೊಳವೆ ಬಾವಿಗೆ ಬಿದ್ದು 27 ಅಡಿಯಲ್ಲಿ ಸಿಲುಕಿರುವ ಕಾವೇರಿಯನ್ನು ಮೇಲೆತ್ತಲು ರಕ್ಷಣಾ ಪಡೆಗಳು ಈಗಾಗಲೇ 24 ಅಡಿ ಆಳ ತೆಗೆದಿದ್ದಾರೆ. 2 ಹಿಟಾಚಿ, 2 ಜೆಸಿಬಿ ಬಳಸಿ ಅಡ್ಡಲಾಗಿ ಸುರಂಗ ಕೊರೆಯಲು ಕಾರ್ಯಾಚರಣೆ ಆರಂಭಿಸಿದ್ದಾರೆ. 4 ಎನ್‍ಡಿಆರ್‍ಎಫ್, ರಾಯಚೂರಿನ 6 ಹಟ್ಟಿ ಚಿನ್ನದ ಗಣಿ ಟೀಂಗಳಿಂದ ಅಹೋರಾತ್ರಿ ಆಪರೇಷನ್ ನಡೆಯುತ್ತಿದೆ.

ಶನಿವಾರ ಸಂಜೆ ಕಾವೇರಿ ತನ್ನ ತಾಯಿಯ ಜೊತೆ ಕಟ್ಟಿಗೆ ಆರಿಸುವಾಗ ಕೊಳವೆ ಬಾವಿಯಲ್ಲಿ ಬಿದ್ದಿದ್ದಳು. 27 ಅಡಿ ಆಳದಲ್ಲಿ ಕಾವೇರಿಯ ಕೈಗಳು ಕ್ಯಾಮೆರಾಗೆ ಕಾಣಿಸಿದ್ದವು. ಹುಕ್ ಮೂಲಕ ಬಾಲಕಿಯನ್ನು ಐದಾರು ಬಾರಿ ಮೇಲೆತ್ತುವ ಪ್ರಯತ್ನ ಮಾಡಿದ್ರೂ ಯಶಸ್ವಿಯಾಗಲಿಲ್ಲ. ದೊಡ್ಡ ಗಾತ್ರದ ಬಂಡೆಗಳು ಸಿಕ್ಕಿರುವ ಕಾರಣ ಕಾರ್ಯಾಚರಣೆಗೆ ತೊಡಕಾಗಿದೆ. ಕೊಳವೆ ಬಾವಿ ಸುತ್ತ 20 ಬೋರ್‍ವೆಲ್ ಕೊರೆದು ಸಕ್ಕಿಂಗ್ ಮಷಿನ್ ಮೂಲಕ ಮಣ್ಣು ತೆಗೆಯುವ ಕಾರ್ಯ ನಡೆಯುತ್ತಿದೆ. ಆದರೆ ಈವರೆಗೂ ಇದ್ಯಾವುದೂ ಫಲ ನೀಡಿಲ್ಲ. ಸ್ಥಳದಲ್ಲಿ ಇಡೀ ಜಿಲ್ಲಾಡಳಿತ ಬೀಡುಬಿಟ್ಟು ರಕ್ಷಣಾ ಕಾರ್ಯದಲ್ಲಿ ತೊಡಗಿದೆ.

ಕಾವೇರಿಯ ಹೆತ್ತವರಾದ ಅಜಿತ್ ಮತ್ತು ಸವಿತಾ ಸ್ಥಿತಿ ಯಾರಿಗೂ ಬೇಡವಾಗಿದೆ. ಮಗಳು ಸಿಗೋವರೆಗೂ ಆಹಾರ ಸೇವಿಸುವುದಿಲ್ಲ ಎಂದು ಸವಿತಾ ಪಟ್ಟು ಹಿಡಿದಿದ್ದಾರೆ. ಇನ್ನು ಅವಘಡಕ್ಕೆ ಕಾರಣರಾದ ಜಮೀನು ಮಾಲೀಕ ಶಂಕರಪ್ಪ ಹಿಪ್ಪರಗಿ ನಾಪತ್ತೆಯಾಗಿದ್ದಾರೆ. ಸ್ಥಳೀಯ ಠಾಣೆಯಲ್ಲಿ ಜಮೀನು ಮಾಲೀಕ ಶಂಕರಪ್ಪ ವಿರುದ್ಧ ಐಪಿಸಿ ಸೆಕ್ಷನ್ 371ರಡಿ ನಿರ್ಲಕ್ಷ್ಯದ ಆರೋಪದ ಮೇಲೆ ದೂರು ದಾಖಲಿಸಲಾಗಿದೆ.

ಕಾವೇರಿ ರಕ್ಷಣೆಗೆ ಇನ್ನೂ 15 ಗಂಟೆ ಬೇಕು. ಬಾಲಕಿಯ ಕೈಕಾಲುಗಳ ಚಲನವಲನ ಆಗ್ತಿಲ್ಲ. ನಮ್ಮ ಪ್ರಯತ್ನ ನಡೆಯುತ್ತಿದೆ. ನಾವು ನಿರಂತರವಾಗಿ ರಕ್ಷಣಾ ಕಾರ್ಯ ನಡೆಸುತ್ತಿದ್ದೇವೆ ಅಂತಾ ರಕ್ಷಣಾ ಕಾರ್ಯಾಚರಣೆ ಅಧಿಕಾರಿಗಳು ಹೇಳಿದ್ದಾರೆ. ಈ ನಡುವೆ ಝಂಜರವಾಡದಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ಇರೋದ್ರಿಂದ ರಕ್ಷಣಾ ತಂಡದ ಸದಸ್ಯರು ಬಳಲಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *