ಮಣ್ಣಲ್ಲಿ ಮಣ್ಣಾದ ಕಾವೇರಿ – ಮಧ್ಯರಾತ್ರಿ ಅಂತ್ಯಸಂಸ್ಕಾರ

Public TV
1 Min Read

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಮೃತ್ಯುಕೂಪ ಕೊಳವೆಬಾವಿಗೆ ಬಿದ್ದಿದ್ದ 6 ವರ್ಷದ ಕಾವೇರಿ ಕೊನೆಗೂ ಬದುಕಲೇ ಇಲ್ಲ.

ಅಥಣಿಯ ಕೊಕಟನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾವೇರಿಯ ಮರಣೋತ್ತರ ಪರೀಕ್ಷೆ ನಡೆಸಲಾಯ್ತು. ಈ ವೇಳೆ ಅಥಣಿ ತಹಸೀಲ್ದಾರ್ ಉಮಾದೇವಿ ಹಾಜರಿದ್ದರು. ಇನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಕ್ಕೆ ಶವ ಹಸ್ತಾಂತರಿಸಲಾಯ್ತು. ಈ ವೇಳೆ ಹೆತ್ತವ್ವ ಸವಿತಾ ಮತ್ತು ತಂದೆ ಅಜಿತ್ ಗೋಳಾಟ ಎಂಥವರ ಕರಳು ಕಿವುಚುವಂತಿತ್ತು. ಸಂಬಂಧಿಕರಂತೂ ಎದೆ ಎದೆ ಹೊಡೆದುಕೊಂಡ್ರು. ಗ್ರಾಮಸ್ಥರೆಲ್ಲರೂ ಗೋಳಾಡಿದರು. ಬಳಿಕ ಝುಂಜರವಾಡ ಗ್ರಾಮದಲ್ಲಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ಮಾಡಲಾಯ್ತು.

ಏಪ್ರಿಲ್ 22ರಂದು ಅಮ್ಮನ ಜೊತೆ ಕಟ್ಟಿಗೆ ಆರಿಸಲು ಹೋಗಿದ್ದ ಕಾವೇರಿ ಸಂಜೆ 5 ಗಂಟೆ ಸುಮಾರಿಗೆ ಶಂಕರಪ್ಪ ಹಿಪ್ಪರಗಿ ಅವ್ರ ತೋಟದ ಕೊಳವೆ ಬಾವಿಯಲ್ಲಿ ಬಿದ್ದಿದ್ದಳು. ಸುದ್ದಿ ತಿಳಿದು ರಾತ್ರಿ 8 ಗಂಟೆ ಸುಮಾರಿಗೆ ಕಾರ್ಯಾಚರಣೆ ಆರಂಭಿಸಿದ್ದ ರಕ್ಷಣಾ ಪಡೆಗಳು ಸತತ 54 ಗಂಟೆ ಕಾರ್ಯಾಚರಣೆ ಬಳಿಕ ಸೋಮವಾರ ರಾತ್ರಿ 11.33ರ ಸುಮಾರಿಗೆ ಕಾವೇರಿಯ ಮೃತದೇಹವನ್ನ ಹೊರ ತೆಗೆದರು.

28 ಅಡಿಯಲ್ಲಿ ಸಿಲುಕಿದ್ದ ಕಾವೇರಿಯನ್ನ ಸುರಂಗ ಕೊರೆದು ನಿನ್ನೆ ರಾತ್ರಿ ರಕ್ಷಣಾ ಸಿಬ್ಬಂದಿ ಹೊರ ತೆಗೆದ್ರು. ಆದಾಗಲೇ ಸಾವನ್ನಪ್ಪಿದ್ದ ಕಾವೇರಿ ಬಾಯಲ್ಲಿ ರಕ್ತ ಬಂದಿತ್ತು. ಲವಲವಿಕೆಯಿಂದ ಚೂಟಿಯಾಗಿದ್ದ ಮಗಳನ್ನ ಶವವಾಗಿ ಕಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು.

Share This Article
Leave a Comment

Leave a Reply

Your email address will not be published. Required fields are marked *