ವೈನ್ ಶಾಪ್ ಇರೋದ್ರಿಂದ ಗ್ರಾಮದಲ್ಲಿ ಮದ್ವೆನೇ ಆಗ್ತಿಲ್ಲ!

Public TV
1 Min Read

ಚಾಮರಾಜನಗರ: ವೈನ್‍ಶಾಪ್‍ನಿಂದ ಕುಡುಕರು ಮಾತ್ರವಲ್ಲದೇ ಸ್ಥಳೀಯರು ಕೂಡ ನೆಮ್ಮದಿ ಕಳೆದುಕೊಳ್ಳುತ್ತಾರೆ. ಆದರೆ ಈ ಗ್ರಾಮದಲ್ಲಿ ವೈನ್‍ಶಾಪ್ ಇರೋದ್ರಿಂದ ಮದುವೇನೇ ಆಗ್ತಿಲ್ಲವಂತೆ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಕಳೆದ 25 ವರ್ಷಗಳಿಂದ ಇರೋ ಲಕ್ಷ್ಮೀ ವೆಂಕಟೇಶ್ವರ ವೈನ್‍ಶಾಪ್ ಇದೆ. ಈ ವೈನ್‍ಶಾಪ್‍ನಿಂದಾಗಿ ಗ್ರಾಮಕ್ಕೆ ಕುಡುಕ ಬೊಮ್ಮಲಾಪುರ ಎಂಬ ನಾಮಧೇಯ ಕೂಡ ಬಂದಿದೆಯಂತೆ.

ವೈನ್ ಶಾಪ್‍ನಿಂದಾಗಿ ಗ್ರಾಮದ ವಧುಗಳನ್ನ ಮದುವೆಯಾಗುವುದಕ್ಕೂ ಯಾರೂ ಮುಂದೆ ಬರುತ್ತಿಲ್ಲ. ಜೊತೆಗೆ ವರನಿಗೆ ವಧು ಕೊಡಲು ಅಕ್ಕ ಪಕ್ಕದ ಊರಿನ ಗ್ರಾಮಗಳಿಂದ ಯಾರು ಮುಂದೆ ಬರುತ್ತಿಲ್ಲ. ಹೀಗಾಗಿ ನೂರಾರು ವಯಸ್ಕ ಹೆಣ್ಣು ಮತ್ತು ಗಂಡು ಮಕ್ಕಳು ಮದುವೆಯಾಗದೇ ಹಾಗೆಯೇ ಮನೆಯಲ್ಲಿದ್ದಾರೆ ಎಂದು ಗ್ರಾಮಸ್ಥೆ ಶೋಭಾ ಹೇಳುತ್ತಾರೆ.

ಬೊಮ್ಮಲಾಪುರ, ಕೊಡಸೋಗೆ, ಶೀಲವಂತಪುರ, ಸೋಮಪುರ ಸೇರಿದಂತೆ 10 ಹಳ್ಳಿಗಳಿಗೆ ಇದೊಂದೆ ವೈನ್ ಶಾಪ್. ಪ್ರತಿನಿತ್ಯ ಸಾವಿರಾರು ಮಂದಿ ವೈನ್ ಶಾಪ್‍ಗೆ ಬಂದು ಕುಡಿದು ಹೋಗುತ್ತಿದ್ದಾರೆ. ಅಲ್ಲದೇ ಕಳೆದ 6 ತಿಂಗಳಲ್ಲಿ 2 ಕೊಲೆಗಳಾಗಿವೆ. ವೈನ್‍ಶಾಪ್ ಪಕ್ಕದಲ್ಲಿಯೇ ಅಂಗನವಾಡಿ ಕೇಂದ್ರ, ಗ್ರಾಮಪಂಚಾಯ್ತಿ ಕಾರ್ಯಾಲಯ ಇದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಇತ್ತ ವೈನ್‍ಶಾಪ್ ಇರೋದ್ರಿಂದ 10, 12 ವರ್ಷದ ಮಕ್ಕಳು ಕುಡಿದು ಹಾಳಾಗುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.

ಕುಡಿದ ಮತ್ತಿನಲ್ಲಿ ಒಬ್ಬರ ಮೇಲೊಬ್ಬರು ಗ್ರಾಮದಲ್ಲಿ ಗಲಾಟೆ ಮಾಡುವುದು. ಕೆಲವು ವೇಳೆ ಅಮಾಯಕರು ಏಟು ತಿಂದಿರುವ ಪರಿಸ್ಥಿತಿ ಕೂಡ ಇದೆಯಂತೆ. ಒಟ್ಟಿನಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದ್ರೂ ವೈನ್‍ಶಾಪ್ ಮುಚ್ಚಬೇಕಾದ ತಹಶೀಲ್ದಾರ್, ಅಬಕಾರಿ ಇಲಾಖೆ ಅಧಿಕಾರಿಗಳಾಗಲಿ ಇತ್ತ ಸುಳಿಯದಿರೋದು ದುರಂತ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *