ಮುಸ್ಲಿಂ ರಾಷ್ಟ್ರಗಳ ಮೇಲೆ ಬಾಂಬ್‌ ದಾಳಿ ನಡೆಸಿದವರು ರಕ್ಷಣೆ ಬಗ್ಗೆ ಮಾತಾಡೋದು ಹಾಸ್ಯಾಸ್ಪದ – ನಿರ್ಮಲಾ ಸೀತಾರಾಮನ್‌

Public TV
3 Min Read

– ಬರಾಕ್‌ ಒಬಾಮಗೆ ತಿರುಗೇಟು ಕೊಟ್ಟ ವಿತ್ತ ಸಚಿವೆ

ನವದೆಹಲಿ: 6 ಬಹುಸಂಖ್ಯಾತ ಮುಸ್ಲಿಂ ರಾಷ್ಟ್ರಗಳ (Muslim Nations) ಮೇಲೆ 26,000 ಬಾಂಬ್‌ಗಳ ದಾಳಿ (Bomb Attack) ನಡೆಸಿದವರು ಈಗ ಭಾರತದಲ್ಲಿ ಅಲ್ಪ ಸಂಖ್ಯಾತರ ರಕ್ಷಣೆ ಬಗ್ಗೆ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman), ಯುಎಸ್‌ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತದಲ್ಲಿ ಅಲ್ಪಸಂಖ್ಯಾತರ ರಕ್ಷಣೆ ಬಗ್ಗೆ ಮೋದಿಯನ್ನು (Narendra Modi) ಕೇಳಬೇಕಿತ್ತು ಎಂಬ ಯುಎಸ್‌ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ (Barack Obama) ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಒಬಾಮ ಅವರು ಅಧಿಕಾರದಲ್ಲಿದ್ದಾಗಲೇ 6 ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಮೇಲೆ ಬಾಂಬ್ ದಾಳಿ ನಡೆದಿತ್ತು. ಆದ್ರೆ ನಮ್ಮ ಸರ್ಕಾರ ʻಸಬ್ಕಾ ಸಾಥ್‌, ಸಬ್ಕಾ ವಿಕಾಸ್‌ʼ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ. ಅದಕ್ಕೆ ಯುಎಸ್‌ನಲ್ಲಿ ನಡೆದ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಅಲ್ಪಸಂಖ್ಯಾತರ ರಕ್ಷಣೆ ಬಗ್ಗೆ ಮೋದಿಯನ್ನ ಕೇಳಬೇಕಿತ್ತು – ಬರಾಕ್ ಒಬಾಮಾ

ನಾವು ಯುಎಸ್‌ನೊಂದಿಗೆ ಸ್ನೇಹ ಬಯಸುತ್ತೇವೆ. ಆದ್ರೆ ಅಲ್ಲಿಯೂ ಭಾರತದ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಟೀಕೆಗಳು ಕೇಳಿಬಂದಿವೆ. ಅಮೆರಿಕದ ಮಾಜಿ ಅಧ್ಯಕ್ಷರ ಅವಧಿಯಲ್ಲೇ 6 ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಮೇಲೆ 26,000ಕ್ಕೂ ಹೆಚ್ಚು ಬಾಂಬ್‌ ದಾಳಿ ನಡೆದಿತ್ತು. ಅಂಥವರು ಮೋದಿ ಬಗ್ಗೆ ಅಲ್ಪ ಸಂಖ್ಯಾತರ ರಕ್ಷಣೆ ಬಗ್ಗೆ ಆರೋಪ ಮಾಡಿದರೆ ಯಾರು ನಂಬುತ್ತಾರೆ? ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾದ 13 ಗೌರವ ಪ್ರಶಸ್ತಿಗಳಲ್ಲಿ 6 ಪ್ರಶಸ್ತಿಗಳು ಮುಸ್ಲಿಂ ಬಹುಸಂಖ್ಯಾತ ದೇಶಗಳಿಂದ ನೀಡದವುಗಳೇ ಆಗಿವೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಪ್ರತಿಪಕ್ಷಗಳ ಟೀಕೆಗೆ ಕಿಡಿ ಕಾರಿದ ನಿರ್ಮಲಾ ಸೀತಾರಾಮನ್‌, ದತ್ತಾಂಶವಿಲ್ಲದೇ ಆರೋಪ ಮಾಡುತ್ತಿರುವುದು ಕೇವಲ ಪ್ರಚಾರಕ್ಕಾಗಿ. ಚುನಾವಣಾ ಕ್ಷೇತ್ರದಲ್ಲಿ ಮೋದಿ ಅವರನ್ನಾಗಲಿ ಅಥವಾ ಬಿಜೆಪಿ ಪಕ್ಷವನ್ನಾಗಲಿ ಎದುರಿಸಲು ಸಾಧ್ಯವಿಲ್ಲ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ಪ್ರಧಾನಿಯಾಗಿ ಬಂದಾಗ ಭಾರತ 10ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು, ಈಗ 5ನೇ ಸ್ಥಾನಕ್ಕೆ ಜಿಗಿದಿದೆ : ಅಮೆರಿಕದಲ್ಲಿ ಮೋದಿ

ಒಬಾಮ ಹೇಳಿದ್ದೇನು..?
ಇತ್ತೀಚೆಗಷ್ಟೇ ಯುಎಸ್‌ ಅಧ್ಯಕ್ಷ ಜೋ ಬೈಡನ್‌ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಯುಎಸ್‌ ಮಾಜಿ ಅಧ್ಯಕ್ಷ ಜೋ ಬೈಡನ್, ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸುವ ಸಂದರ್ಭದಲ್ಲಿ ಭಾರತದಲ್ಲಿ ಅಲ್ಪಸಂಖ್ಯಾತರ ರಕ್ಷಣೆ ವಿಷಯವನ್ನ ಪ್ರಸ್ತಾಪಿಸಬೇಕಿತ್ತು ಎಂದಿದ್ದರಲ್ಲದೇ, ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸದಿದ್ದರೆ ಏನಾಗುತ್ತದೆ? ಎಂಬುದನ್ನು ಕೇಳುವಂತೆ ಒಬಾಮ ಒತ್ತಾಯಿಸಿದ್ದರು.

ಮೋದಿ ಅವರು ನನಗೆ ಚೆನ್ನಾಗಿ ಗೊತ್ತು. ಒಂದು ವೇಳೆ ನಾನು ಸಂವಾದ ನಡೆಸಿದ್ದರೆ ಕೇಳುತ್ತಿದೆ. ನೀವು ಭಾರತದಲ್ಲಿ ಜನಾಂಗೀಯ ಅಲ್ಪಸಂಖ್ಯಾತರ ಹಕ್ಕುಗಳನ್ನ ರಕ್ಷಿಸದಿದ್ದರೆ, ಭಾರತವು ಒಂದು ಹಂತದಲ್ಲಿ ಬೇರ್ಪಡುವ ಬಲವಾದ ಸಾಧ್ಯತೆಯಿದೆ. ಅದು ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾಗಿರುತ್ತದೆ ಎಂಬುದನ್ನ ಹೇಳುತ್ತಿದೆ. ಏಕೆಂದರೆ ಬಹುಸಂಖ್ಯಾತ ಹಿಂದೂಗಳಿರುವ ರಾಷ್ಟ್ರ ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ರಕ್ಷಣೆಯು ಉಲ್ಲೇಖಿಸಬೇಕಾದ ಸಂಗತಿಯಾಗಿದೆ ಎಂದು ಒತ್ತಿ ಹೇಳಿದ್ದರು.

Share This Article