ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್‍ಗೆ ಜಾಮೀನು ಮಂಜೂರು

Public TV
2 Min Read

ಮುಂಬೈ: ಐಷಾರಾಮಿ ಡ್ರಗ್ಸ್ ಕೇಸ್ ಸಂಬಂಧಿಸಿದಂತೆ ಎನ್‍ಸಿಬಿಯಿಂದ ಬಂಧನಕ್ಕೆ ಒಳಗಾಗಿದ್ದ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್‍ಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಮುಂಬೈನ ಸೆಷನ್ಸ್ ಕೋರ್ಟ್ ಆರ್ಯನ್ ಖಾನ್‍ಗೆ ಜಾಮೀನು ನಿರಾಕರಿಸಿತ್ತು. ಆರ್ಯನ್ ಖಾನ್ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ನಲ್ಲಿ ಹಿರಿಯ ವಕೀಲ ಮುಕುಲ್ ರೊಹ್ಟಗಿ ಆರ್ಯನ್ ಪರ ವಾದ ಮಂಡಿಸಿದ್ದರು. ಇದನ್ನೂ ಓದಿ: ರಾಗಿಣಿ ಕೇಸ್ ಉಲ್ಲೇಖ, ಆರ್ಯನ್‍ಗೆ ಜಾಮೀನು ನೀಡಿ – ಮುಕುಲ್ ರೊಹ್ಟಗಿ ವಾದ

ಅರ್ಜಿ ವಿಚಾರಣೆ ವೇಳೆ ಮುಕುಲ್ ರೊಹ್ಟಗಿ ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿರುವ ಹೈಕೋರ್ಟ್ ಇಂದು ಜಾಮೀನು ನೀಡಿದೆ. ಇದರೊಂದಿಗೆ ಆರ್ಯನ್ ಖಾನ್ 22 ದಿನಗಳ ಜೈಲು ವಾಸದ ಬಳಿಕ ಬಿಡುಗಡೆಗೊಂಡಿದ್ದಾರೆ. ಆರ್ಯನ್ ಖಾನ್ ಜೊತೆಗೆ  ಅರ್ಬಾಜ್ ಮರ್ಚೆಂಟ್ ಮತ್ತು  ಮುನ್ಮುಮ್ ಧಮೇಚಾಗೂ ಜಾಮೀನು ಮಂಜೂರಾಗಿದೆ.

ಆರ್ಯನ್ ಖಾನ್ ಪರ ವಕೀಲರ ವಾದ ಏನಿತ್ತು?
ಎನ್‍ಸಿಬಿ ವಿಚಾರಣೆ ವೇಳೆ ಆರ್ಯನ್ ಖಾನ್ ನಿಂದ ವಶಪಡಿಸಿಕೊಂಡಿರುವ ವಾಟ್ಸಪ್ ಚಾಟ್‍ಗೂ ಇಡೀ ಇಡೀ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಮತ್ತು ಎನ್‍ಸಿಬಿ ತನಿಖಾಧಿಕಾರಿ ಸಮೀರ್ ವಾಂಖೆಡೆ, ಎನ್‍ಸಿಪಿಯ ನವಾಬ್ ಮಲಿಕ್ ಮತ್ತು ಪ್ರಕರಣದ ಸಾಕ್ಷಿ ಪ್ರಭಾಕರ್ ಸೈಲ್ ಅವರ ವಿರುದ್ಧದ ಆರೋಪಕ್ಕೂ ಆರ್ಯನ್ ಖಾನ್‍ಗೂ ಯಾವುದೇ ಸಂಬಂಧವಿಲ್ಲ ಎಂದು ರೊಹ್ಟಗಿ ಹೇಳಿದ್ದರು.

ಆದರೆ ಆರ್ಯನ್ ಖಾನ್ ಪ್ರಭಾವಿ ವ್ಯಕ್ತಿಯಾಗಿದ್ದು, ವಿಚಾರಣೆ ಹಂತದಲ್ಲಿ ಜಾಮೀನು ನೀಡುವುದು ಸೂಕ್ತವಲ್ಲ, ಅವರಿಗೆ ಜಾಮೀನು ನೀಡಿದರೆ ಸಾಕ್ಷಿಗಳ ಪ್ರಭಾವ ಬೀರಬಹುದು ಈ ಹಿನ್ನಲೆ ಜಾಮೀನು ನೀಡದಂತೆ ಎನ್‍ಸಿಬಿ ಪರ ವಕೀಲರು ವಾದ ಮಂಡಿಸಿದ್ದರು. ಇದನ್ನೂ ಓದಿ: ಸಿಗದ ಜಾಮೀನು – ಜೈಲಿನಲ್ಲಿ ರಾಮನ ಮೊರೆ ಹೋದ ಆರ್ಯನ್ ಖಾನ್

ಇದಕ್ಕೆ ಆಕ್ಷೇಪಿಸಿದ ಮುಕುಲ್ ರೊಹ್ಟಗಿ, ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಸಚಿವಾಲಯ ತರಲು ಹೊರಟಿರುವ ತಿದ್ದುಪಡಿಯ ಬಗ್ಗೆ ಮಾಹಿತಿ ನೀಡಿದರು. ಕೇಂದ್ರ ಸರ್ಕಾರವೇ ಮಾದಕ ವಸ್ತುಗಳ ಸೇವನೆಯನ್ನು ಅಧರಿಸಿ ಜೈಲು ಶಿಕ್ಷೆ ನೀಡುವುದು ವ್ಯವಸ್ಥೆ ಬದಲಿಸಲು ಹೊರಟಿದ್ದು ಆರ್ಯನ್ ಖಾನ್ ಜಾಮೀನು ನಿರಾಕರಿಸುವಂತಿಲ್ಲ ಎಂದಿದ್ದರು.

ನಿನ್ನೆ ಎನ್.ಡಬ್ಲ್ಯೂ ಸಾಂಬ್ರೆ, ಆರ್ಯನ್ ಖಾನ್ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಪರ ವಕೀಲರ ವಾದವನ್ನು ಆಲಿಸಿದರು. ಅರ್ಬಾಜ್ ಮರ್ಚೆಂಟ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಮಿತ್ ದೇಸಾಯಿ ಎನ್‍ಸಿಬಿ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಇದನ್ನೂ ಓದಿ: ಮೊದಲ ಬಾರಿಗೆ ಮಗನನ್ನು ಭೇಟಿಯಾದ ಶಾರೂಖ್

ವಿಚಾರಣೆ ವೇಳೆ ಎನ್‍ಸಿಬಿ ಅಧಿಕಾರಿಗಳು ವಾಟ್ಸಪ್ ಚಾಟ್‍ಗಳನ್ನು ಉದ್ದೇಶಪೂರ್ವಕವಾಗಿ ಮಾಧ್ಯಮಗಳಿಗೆ ನೀಡಲಾಗಿದೆ ಎಂದು ಅವರು ಆರೋಪಿಸಿದ್ದರು. ವಾಟ್ಸಪ್ ಚಾಟ್‍ಗಳು ನ್ಯಾಯಲಯಕ್ಕೆ ದಾಖಲಿಸುವ ಮುನ್ನ ಮಾಧ್ಯಮಗಳಿಗೆ ಹಂಚಿಕೆಯಾಗಿದೆ. ಇದು ಪ್ರಕರಣದಲ್ಲಿ ಸಿಕ್ಕಿಹಾಕಿಸುವ ಪ್ರಯತ್ನ ಎಂದು ಅಮಿತ್ ದೇಸಾಯಿ ಹೇಳಿದ್ದರು.

ಅರ್ಬಾಜ್ ಮರ್ಚೆಂಟ್ ವಿರುದ್ಧ ಆರಂಭದಲ್ಲಿ ಡ್ರಗ್ ಸೇವನೆ ಪ್ರಕರಣ ಮಾತ್ರ ದಾಖಲಿಸಲಾಗಿತ್ತು ಬಳಿಕ ಡ್ರಗ್ ಜಾಲದ ಪಿತೂರಿಯನ್ನು ಸೇರಿಸಲಾಗಿದೆ, ಆದರೆ ಪಿತೂರಿ ನಡೆಸಿರುವುದಕ್ಕೆ ಯಾವುದೇ ವಾಟ್ಸಪ್ ಚಾಟ್ ಸಾಕ್ಷ್ಯಗಳು ಬೆಂಬಲಿಸುತ್ತಿಲ್ಲ ಹೀಗಾಗಿ ಜಾಮೀನು ನೀಡಬಹುದಾದ ಪ್ರಕರಣ ಇದಾಗಿದೆ ಎಂದಿದ್ದರು.

Share This Article
Leave a Comment

Leave a Reply

Your email address will not be published. Required fields are marked *