ಟಿಪ್ಪು ಬಗ್ಗೆ ಮಾತಾಡೋದು ಬಿಟ್ಟು, ಉಗ್ರರನ್ನ ಮಟ್ಟಹಾಕಿ: ಇಮ್ರಾನ್ ಖಾನ್‍ಗೆ ಓವೈಸಿ ಟಾಂಗ್

Public TV
2 Min Read

ಹೈದರಾಬಾದ್: ಮೈಸೂರು ದೊರೆ ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ.

ಹೈದರಾಬಾದ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಓವೈಸಿ, ಇಮ್ರಾನ್ ಖಾನ್ ಮೈಸೂರಿನ ಸುಲ್ತಾನ್ ಬಗ್ಗೆ ಮಾತನಾಡುವುದನ್ನು ಬಿಟ್ಟು, ತಮ್ಮ ದೇಶದಲ್ಲಿ ನೆಲೆ ಕಂಡುಕೊಂಡಿರುವ ಉಗ್ರ ಸಂಘಟನೆಗಳನ್ನು ನಿಯಂತ್ರಿಸಬೇಕು ಎಂದು ಸಲಹೆ ನೀಡಿದ್ದಾರೆ.

ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಸಂಸತ್‍ನಲ್ಲಿ ಮುಸ್ಲಿಂ ದೊರೆಗಳಾದ ಟಿಪ್ಪು ಸುಲ್ತಾನ್ ಹಾಗೂ ಬಹದ್ದೂರ್ ಷಾ ಜಾಫರ್ ಬಗ್ಗೆ ಮಾತನಾಡಿದ್ದಾರೆ. ಟಿಪ್ಪು ಸುಲ್ತಾನ್ ಬಗ್ಗೆ ಹಾಡಿ ಹೊಗಳಿದ್ದಾರೆ. ಆದರೆ ಟಿಪ್ಪು ಹಿಂದೂ ವಿರೋಧಿಯಲ್ಲ, ತನ್ನ ಎದುರಾಳಿಗಳಿಗೆ ದುಸ್ವಪ್ನವಾಗಿದ್ದ ಎಂಬುದನ್ನು ಖಾನ್ ತಿಳಿದುಕೊಳ್ಳಬೇಕು. ಪಾಕ್ ಪ್ರಧಾನಿ ಆಟಮ್ ಬಾಂಬ್‍ಗಳ ಬಗ್ಗೆ ಮಾತನಾಡುತ್ತಾರೆ. ಭಾರತೀಯರ ಬಳಿ ಬಾಂಬ್‍ಗಳು ಇಲ್ಲವೆಂದು ಇಮ್ರಾನ್ ಖಾನ್ ತಿಳಿದಿದ್ದಾರೆ ಎಂದು ಕಿಡಿಕಾರಿದರು.

ಉಗ್ರ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಇ-ಮೊಹಮದ್ ಸಂಘಟನೆಗಳು ರಾಕ್ಷಸ ಸಂಘಟನೆಗಳು. ತನ್ನ ನೆಲದಲ್ಲಿರುವ ಉಗ್ರ ಸಂಘಟನೆಯ ಸೈತಾನ್‍ಗಳನ್ನು ಪಾಕಿಸ್ತಾನ ಸರ್ಕಾರ ಮಟ್ಟಹಾಕಬೇಕು ಎಂದು ಟಾಂಗ್ ಕೊಟ್ಟರು.

ಇಮ್ರಾನ್ ಖಾನ್ ಹೇಳಿದ್ದೇನು?:
ಪಾಕಿಸ್ತಾನದ ಸಂಸತ್‍ನಲ್ಲಿ ಫೆಬ್ರವರಿ 28ರಂದು ಮಾತನಾಡಿದ್ದ ಇಮ್ರಾನ್ ಖಾನ್, ನಾನು ಒಂದಿಷ್ಟು ಹಿಂದೆ ಹೋಗಿ ಇತಿಹಾಸವನ್ನು ನೆನಪಿಸಿಕೊಳ್ಳುತ್ತಿರುವೆ. ಮುಸ್ಲಿಂ ದೊರೆಗಳಲ್ಲಿ ಬಹದ್ದೂರ್ ಷಾ ಜಾಫರ್ ಹಾಗೂ ಟಿಪ್ಪು ಸುಲ್ತಾನ್ ಹೆಸರುವಾಸಿಯಾದವರು. ಬಹದ್ದೂರ್ ಜಾಫರ್ ಬ್ರಿಟಿಷರ ಜೊತೆಗೆ ಹೋರಾಡಲು ಆಗದೆ ಅವರ ಗುಲಾಮನಾದ. ಆದರೆ ಟಿಪ್ಪು ಸುಲ್ತಾನ್ ಗುಲಾಮನಾಗಲು ಒಪ್ಪಲಿಲ್ಲ. ಬ್ರಿಟಿಷರೊಂದಿಗೆ ಹೋರಾಡಿ ಮಡಿದ. ಹೀಗಾಗಿ ಟಿಪ್ಪು ಸುಲ್ತಾನ್ ನಿಜವಾದ ಹೀರೋ ಎಂದು ಹೇಳಿದ್ದರು. ಈ ವೇಳೆ ಕಲಾಪದಲ್ಲಿದ್ದ ಎಲ್ಲ ಸಂಸದರು ಮೇಜು ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಮತ್ತೆ ಮಾತು ಆರಂಭಿಸಿದ ಇಮ್ರಾನ್ ಖಾನ್ ಅವರು, ಟಿಪ್ಪು ಸುಲ್ತಾನ್‍ನನ್ನು ಒಂದು ಕೋಮು ವಿರೋಧಿಸುತ್ತಿದೆ ಎಂದು ಕಿಡಿಕಾರಿದರು. ಪಾಕಿಸ್ತಾನದ ನೆಲೆಗಳ ಮೇಲೆ ಭಾರತೀಯ ವಾಯು ಪಡೆ ದಾಳಿ ಮಾಡಿದೆ. ಇದನ್ನು ನಾವು ಹಿಮ್ಮೆಟ್ಟಿ ನಿಲ್ಲಬೇಕು. ಟಿಪ್ಪುವಿನಂತೆ ಹೋರಾಡಬೇಕಿದೆ ಎಂದು ಹೇಳಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *