ಧರ್ಮೇಂದ್ರ, ಅಮಿತಾಭ್, ಅಂಬಾನಿ ಮನೆಯಲ್ಲಿ ಬಾಂಬ್: ಪೊಲೀಸರಿಂದ ಶೋಧ

Public TV
1 Min Read

ಬಾಲಿವುಡ್ ಖ್ಯಾತ ನಟರಾದ ಅಮಿತಾಭ್ ಬಚ್ಚನ್, ಧರ್ಮೇಂದ್ರ ಮತ್ತು ಉದ್ಯಮಿ ಮುಖೇಶ್ ಅಂಬಾನಿ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿಗಳು ನಾಗ್ ಪುರ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಕರೆ ಸ್ವೀಕರಿಸಿದ ಪೊಲೀಸರು ಕೂಡಲೇ ಮುಂಬೈ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ನಾಗ್ಪುರ ಪೊಲೀಸರ ಮಾಹಿತಿಯನ್ನು ಆಧರಿಸಿ ಮುಂಬೈ ಪೊಲೀಸರು ಮೂವರು ಗಣ್ಯ ವ್ಯಕ್ತಿಗಳ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

ಮಾಹಿತಿ ಸಿಗುತ್ತಿದ್ದಂತೆಯೇ ಅಮಿತಾಭ್, ಧರ್ಮೇಂದ್ರ ಹಾಗೂ ಅಂಬಾನಿ ಮನೆಗೆ ಧಾವಿಸಿದ ಪೊಲೀಸ್ ತಂಡ, ಮನೆಯಲ್ಲಿ ಶೋಧ ಕಾರ್ಯ ನಡೆಸಿದರು. ಆದರೆ, ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಹಾಗಾಗಿ ಇದೊಂದು ಹುಸಿಕರೆ ಎಂದು ಮಾಹಿತಿ ನೀಡಿದ್ದಾರೆ. ಈ ರೀತಿಯ ಕರೆ ಮಾಡಿದ ಕಿಡಿಗೇಡಿಗಳ ಪತ್ತೆ ಪೊಲೀಸರು ಬಲೆ ಬೀಸಿದ್ದಾರೆ. ಕೂಡಲೇ ಅವರನ್ನು ಪತ್ತೆ ಮಾಡಿ, ಬುದ್ದಿ ಕಲಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ರೆಡ್ ಗೌನ್ ಧರಿಸಿ ಪಡ್ಡೆಗಳ ನಿದ್ದೆಗೆಡಿಸಿದ ನವವಧು ಕಿಯಾರಾ

ಪೊಲೀಸ್ ಠಾಣೆಗೆ ಕರೆ ಮಾಡಿದ್ದ ಕಿಡಿಗೇಡಿಗಳು ಆಘಾತಕಾರಿ ಅಂಶವನ್ನು ಹಂಚಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ದಾದರ್ ನಲ್ಲಿ ಶಸ್ತ್ರ ಸಜ್ಜಿತವಾದ 25 ಜನ ಭಯೋತ್ಪಾದಕರು ದಾಳಿಗೆ ಸಜ್ಜಾಗಿದ್ದಾರೆ ಎಂದು ಹೇಳಿದ್ದಾರೆ. ಭಯೋತ್ಪಾದಕರು ಎಂದು ಹೇಳುತ್ತಿದ್ದಂತೆಯೇ ಪೊಲೀಸ್ ಅಲರ್ಟ್ ಆಗಿ ಕೂಡಲೇ ಮುಂಬೈ ಪೊಲೀಸರನ್ನು ಸಂಪರ್ಕಿಸಿದ್ದಾರೆ.

ಗಣ್ಯರ ಮನೆಗೆ ಬಾಂಬ್ ಇಟ್ಟಿದ್ದೇವೆ ಎಂದು ಹುಸಿಕರೆ ಮಾಡಿದ ಘಟನೆ ಹೊಸದೇನೂ ಅಲ್ಲ. ಸಲ್ಮಾನ್ ಖಾನ್ ಸೇರಿದಂತೆ ಹಲವರಿಗೆ ಜೀವ ಬೆದರಿಕೆಯನ್ನೂ ಈ ಹಿಂದೆ ಹಾಕಲಾಗಿದೆ. ಅನೇಕ ಗಣ್ಯರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಅನೇಕ ಬಾರಿ ಹುಸಿಕರೆಗಳು ಬಂದಿದ್ದೂ ಇದೆ. ಅದಕ್ಕೆ ಇದು ಹೊಸ ಸೇರ್ಪಡೆ ಅಷ್ಟೆ.

Share This Article
Leave a Comment

Leave a Reply

Your email address will not be published. Required fields are marked *