ಸಿನಿಮಾಗಾಗಿ ಕನ್ನಡ ಕಲಿತು ಒಂದೇ ಟೇಕ್‍ನಲ್ಲಿ ಅಭಿನಯಿಸುತ್ತಿದ್ದ ಶ್ರೀದೇವಿ ನೋಡಿ ಅಚ್ಚರಿಯಾಗ್ತಿತ್ತು- ನಟ ಶ್ರೀನಾಥ್

Public TV
1 Min Read

ಬೆಂಗಳೂರು: 80ರ ದಶಕದಲ್ಲಿ ತೆರೆ ಮೇಲೆ ಮಿಂಚಿದ್ದ ಬಹುಭಾಷಾ ನಟಿ ಶ್ರೀದೇವಿ ಈಗ ಬರಿ ನೆನಪು ಮಾತ್ರ. ತಮ್ಮ 52ನೇ ವಯಸ್ಸಿನಲ್ಲೇ ಹೃದಯಾಘಾತದಿಂದ ಮೃತರಾಗಿದ್ದಾರೆ. ಶ್ರೀದೇವಿ ನಿಧನಕ್ಕೆ ಕನ್ನಡದ ಹಿರಿಯ ನಟ ಶ್ರೀನಾಥ್ ಕಂಬನಿ ಮಿಡಿದಿದ್ದಾರೆ.

ಹಿರಿಯ ನಟ ಶ್ರೀನಾಥ್‍ರೊಂದಿಗೆ ಶ್ರೀದೇವಿ ತಮ್ಮ 13ನೇ ವಯಸ್ಸಿನಲ್ಲಿ “ಹೆಣ್ಣು ಸಂಸಾರದ ಕಣ್ಣು” ಸಿನಿಮಾದಲ್ಲಿ ಅವರ ತಂಗಿ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾವನ್ನು ಶ್ರೀನಾಥ್ ನೆನೆದು, ಅಂದು ಹೇಗೆ ನನಗೆ ಶ್ರೀದೇವಿ ಗೌರವದಿಂದ ಮಾತನಾಡಿಸುತ್ತಿದ್ದರೋ ಹಾಗೆ ಇಂದು ಸಹ ಮಾತನಾಡಿಸುತ್ತಿದ್ದರು. ಶ್ರೀದೇವಿ ಒಳ್ಳೆಯ ಮನಸ್ಸಿನ ಹುಡುಗಿ ಎಂದು ಅವರನ್ನು ನೆನೆಪಿಸಿಕೊಂಡರು.

1975ರಲ್ಲಿ ನನ್ನ ಜೊತೆ ಶ್ರೀದೇವಿ ತಮ್ಮ 13ನೇ ವಯಸ್ಸಿನಲ್ಲಿ “ಹೆಣ್ಣು ಸಂಸಾರದ ಕಣ್ಣು” ಸಿನಿಮಾಗಾಗಿ ಕನ್ನಡ ಕಲಿತು ಒಂದೇ ಟೇಕ್‍ನಲ್ಲಿ ಅಭಿನಯಿಸುತ್ತಿದ್ದ ಮಗು ಶ್ರೀದೇವಿಯನ್ನು ನೋಡಿ ನನಗೆ ಅಚ್ಚರಿಯಾಗುತ್ತಿತ್ತು ಎಂದು ಶ್ರೀದೇವಿ ಅವರ ಸಾಮರ್ಥ್ಯವನ್ನು ಕೊಂಡಾಡಿದರು.

ಈ ಸಿನಿಮಾ ಮಾಡುವಾಗ ಅವರ ತಾಯಿ ರಾಜೇಶ್ವರಿಯವರು ಬಂದಿದ್ದರು. ರಾಜೇಶ್ವರಿಯವರು ನನ್ನ ಹೆಂಡತಿ ಗೀತಾಗೆ ಸ್ನೇಹಿತರಾಗಿದ್ದರು. ಇವರು ಏನೇ ಖರೀದಿಸಬೇಕಾದರೂ ಗೀತಾನೇ ಕರೆದುಕೊಂಡು ಹೋಗುತ್ತಿದ್ದಳು. ಅವರ ಅಮ್ಮ ಸಹ ನಮ್ಮೊಡನೆ ಬಂದರೆ ಯಾವುದೇ ಭಯವಿಲ್ಲದೇ ಕಳುಹಿಸಿಕೊಡುತ್ತಿದ್ದರೆಂದು ಸ್ಮರಿಸಿದರು.

ನಾನು ಶ್ರೀದೇವಿ ಭೇಟಿಯಾದಾಗಲೆಲ್ಲ ಹಳೆಯ ದಿನಗಳನ್ನು ನೆನೆದು ಖುಷಿಪಡುತ್ತಿದ್ದೆವು. ಅವರನ್ನು ಕಳೆದ ವರ್ಷ ಭೇಟಿ ಮಾಡಿದಾಗ ಸಹ ತುಂಬಾ ಆತ್ಮೀಯವಾಗಿ ಮಾತನಾಡಿಸಿದ್ದರು. ಅವರೆಂದೂ ನಾನು ದೊಡ್ಡ ನಟಿಯೆಂದು ತೋರಿಸಿಕೊಂಡಿಲ್ಲ. ಅದೇ ನನಗೆ ಅವರಲ್ಲಿ ಇಷ್ಟವಾದ ಗುಣವೆಂದು ಶ್ರೀದೇವಿಯವರ ಹೃದಯವಂತಿಕೆಯನ್ನು ಹೊಗಳಿದರು.

ಶ್ರೀದೇವಿ ನಟನೆಯಲ್ಲಿ ಹತ್ತಿದ ಶಿಖರ, ಅವರಿಗೆ ನಟನೆಯ ಮೇಲಿದ್ದ ಗೌರವ ಈಗಿನ ಕಾಲದ ನಾಯಕಿಯರಿಗೆ ಮಾದರಿಯಾಗಿದೆ. ಅವರು ಅಭಿನಯಿಸಿದ ಭಾಷೆಯಲ್ಲಿ ಪರಿಚಯವಾದ ಎಲ್ಲ ಸ್ನೇಹಿತರನ್ನು ಅವರು ಉಳಿಸಿಕೊಂಡಿದ್ದಾರೆ. ಇದೇ ಅವರ ಹೃದಯವಂತಿಕೆಗೆ ಉದಾಹರಣೆ ಎಂದು ಹೇಳಿದರು.

ಅನಾರೋಗ್ಯ ಇದ್ದರೆ ನಮಗೆ ತಿಳಿಯುತ್ತಿತ್ತು. ಆದರೆ ಶ್ರೀದೇವಿಗೆ ಆರೋಗ್ಯ ಚೆನ್ನಾಗಿ ಇದ್ದಾಗಲೇ ಮೃತಪಟ್ಟಿರುವುದು ನನಗೂ ಸಹ ಅಘಾತ ತಂದಿದೆ ಎಂದು ಹೇಳಿ ಭಾವುಕರಾದರು.

https://www.youtube.com/watch?v=l95rpcvpl_E

 

Share This Article
Leave a Comment

Leave a Reply

Your email address will not be published. Required fields are marked *