ಭೀಮಾನದಿಯಲ್ಲಿ ಅಪರಿಚಿತ ಶವ ಪತ್ತೆ: ಪ್ರಕರಣ ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಕಿತ್ತಾಡಿದ ವಿಜಯಪುರ-ಕಲಬುರಗಿ ಪೊಲೀಸರು

Public TV
1 Min Read

ವಿಜಯಪುರ: ಭೀಮಾ ನದಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದ್ದು, ಶವ ಬಿದ್ದಿರುವ ಜಾಗದ ಗಡಿ ವಿಷಯವಾಗಿ ವಿಜಯಪುರ ಮತ್ತು ಕಲಬುರಗಿ ಜಿಲ್ಲೆಯ ಪೊಲೀಸರ ನಡುವೆ ಇಂದು ಕಿತ್ತಾಟ ನಡೆದಿದೆ.

ಇಂದು ಬೆಳಗ್ಗೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಿಕ್ಕಮಣೂರ ಮತ್ತು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹಿರೇ ಮಣೂರ ಗ್ರಾಮಗಳ ಮಧ್ಯೆಯಿರುವ ಸೇತುವೆ ಬಳಿ ಶವ ಪತ್ತೆಯಾಗಿತ್ತು. ಶವವನ್ನು ಕಂಡ ಎರಡು ಗ್ರಾಮಗಳ ಜನರು ಪೊಲೀಸರಿಗೆ ವಿಷಯ ತಿಳಿಸಿದ್ದರು.

ಸ್ಥಳಕ್ಕೆ ಬಂದ ಇಂಡಿ ಮತ್ತು ಅಫಜಲಪುರ ಠಾಣೆಯ ಪೋಲಿಸರು ಶವ ಪತ್ತೆಯಾಗಿರುವ ಜಾಗ ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಸ್ಥಳದಿಂದ ಹಿಂದಿರುಗಿದ್ದರು. ಬೇಸಿಗೆ ದಿನದಲ್ಲಿ ಕುಡಿಯುವ ನೀರಿನ ಕೊರತೆ ಎದುರಿಸುತ್ತಿರುವ ನದಿ ತೀರದ ಜನ ಶವ ಹೊರತೆಗೆಯದಿದ್ರೆ ಇರುವ ಸ್ವಲ್ಪ ನೀರೂ ಮಲೀನವಾಗುತ್ತದೆ ಎಂದು ಪೊಲಿಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೊನೆಗೆ ಇಂಡಿ ಠಾಣೆಯ ಸಿಪಿಐ ಚಂದ್ರಕಾಂತ ನಂದರೆಡ್ಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಶವವನ್ನು ನದಿಯಿಂದ ಹೊರ ತೆಗಯಲಾಗಿದೆ. ಈ ಸಂಬಂಧ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *