40 ವಿದ್ಯಾರ್ಥಿಗಳಿದ್ದ ದೋಣಿ ಮಗುಚಿಬಿದ್ದು ನಾಲ್ವರ ದುರ್ಮರಣ

Public TV
1 Min Read

ಮುಂಬೈ: ಸುಮಾರು 40 ಮಂದಿ ವಿದ್ಯಾರ್ಥಿಗಳಿದ್ದ ದೋಣಿಯೊಂದು ಮಗುಚಿಬಿದ್ದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಈ ಘಟನೆ ಮುಂಬೈಯಿಂದ ಸುಮಾರು 135 ಕಿಮೀ ದೂರದಲ್ಲಿರೋ ಮಹಾರಾಷ್ಟ್ರದ ದಹನ್ ಸಮೀಪದ ಪರ್ನಾಕ ಬೀಚ್ ನಲ್ಲಿ ಇಂದು ಬೆಳಗ್ಗೆ ಸುಮಾರು 11.30ರ ವೇಳೆಗೆ ನಡೆದಿದೆ. ನೀರಿನಲ್ಲಿ ಮುಳುಗಿದ ನಾಲ್ವರು ವಿದ್ಯಾರ್ಥಿಗಳ ಗುರುತು ಪತ್ತೆಯಾಗಿಲ್ಲ.

ದೋಣಿ ಮಗುಚಿದ ಮಾಹಿತಿ ಪಡೆದು ಸ್ಥಳಕ್ಕೆ ರಕ್ಷಣಾ ಪಡೆ ಧಾವಿಸಿದ್ದು 32 ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ, ಉಳಿದವರು ನಾಪತ್ತೆಯಾಗಿದ್ದಾರೆ. ಅವರುಗಳಿಗಾಗಿ ತೀವ್ರ ಶೋಧ ನಡೆಯುತ್ತಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ದೋಣಿ ಪರ್ನಾಕ ಬೀಚ್ ತೀರದಿಂದ ಎರಡು ನಾಟಿಕಲ್ ಮೈಲು ದೂರ ಚಲಿಸುವಾಗಲೇ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸದ್ಯ ನೀರಿನಲ್ಲಿ ಮುಳುಗಿರುವ ಮಕ್ಕಳಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ದೋಣಿಯಲ್ಲಿ ಅದರ ಸಾಮರ್ಥ್ಯಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿದ್ದ ಪರಿಣಾಮ ಈ ದುರಂತ ಸಂಭವಿಸಿದೆ ಎಂಬುದಾಗಿ ವರದಿಯಾಗಿದೆ.

ಭಾರತೀಯ ಕೋಸ್ಟ್ ಗಾರ್ಡ್, ಪೊಲೀಸರು, ಕಡಲ ಅಧಿಕಾರಿಗಳು, ಮೂರು ಹಡಗು ಮತ್ತು ಹೆಲಿಕಾಪ್ಟರ್ ಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಶೋಧ ಕಾರ್ಯ ಮುಂದುವರೆದಿದೆ. ಸದ್ಯ ಕಾರ್ಯಾಚರಣೆ ಪ್ರಗತಿಯಲ್ಲಿರುವುದರಿಂದ ಯಾವುದೇ ಸಮಸ್ಯೆ ಎದುರಾಗದಂತೆ ಈ ಮಾರ್ಗವಾಗಿ ಬರುತ್ತಿದ್ದ ದೋಣಿಗಳ ದಿಕ್ಕುಗಳನ್ನು ಬದಲಿಸಿ, ಬೇರೆ ಕಡೆಯಿಂದ ಚಲಿಸುವಂತೆ ಸೂಚಿಸಿರುವುದಾಗಿ ಕಡಲ ಅಧಿಕಾರಿಗಳು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *