ಕ್ಷಮೆ ಕೇಳದಿದ್ದರೆ ಸಂಸತ್ತಿನಲ್ಲಿ ಮಾತನಾಡಲು ಬಿಡಲ್ಲ: ರಾಹುಲ್ ವಿರುದ್ದ ಬಿಜೆಪಿ ಪಟ್ಟು

Public TV
2 Min Read

ನವದೆಹಲಿ: ಲಂಡನ್‍ನಲ್ಲಿ ಭಾರತೀಯ ಪ್ರಜಾಪ್ರಭುತ್ವದ ಕುರಿತು ಮಾಡಿರುವ ಭಾಷಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಕ್ಷಮೆಯಾಚಿಸುವವರೆಗೂ ಸದನದಲ್ಲಿ ಮಾತನಾಡಲು ಬಿಡದೇ ಇರಲು ಬಿಜೆಪಿ ಪಟ್ಟುಹಿಡಿದಿದೆ.

ಶುಕ್ರವಾರವೂ ಸಂಸತ್ತಿನಲ್ಲಿ (Parliament) ಹೈಡ್ರಾಮಾ ನಡೆದಿದ್ದು, ಎರಡನೇ ದಿನಕ್ಕೆ ಉಭಯ ಸದನಗಳನ್ನು ಮುಂದೂಡಲಾಯಿತು. ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ನೀಡಿದ ಹೇಳಿಕೆಗೆ ಕಾಂಗ್ರೆಸ್ (Congress) ಸಂಸದ ರಾಹುಲ್ ಗಾಂಧಿ ಅವರು ಕ್ಷಮೆಯಾಚಿಸಬೇಕು ಎಂದು ಬಿಜೆಪಿ  (BJP) ಒತ್ತಾಯಿಸಿದರೆ, ವಿರೋಧ ಪಕ್ಷಗಳು ಅದಾನಿ- ಹಿಂಡೆನ್‍ಬರ್ಗ್ (Adani-Hindenberg) ವಿವಾದದ ಬಗ್ಗೆ ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒತ್ತಾಯಿಸಿದವು. ಭಾರೀ ಕೋಲಾಹಲ ನಡೆದ ಹಿನ್ನೆಲೆಯಲ್ಲಿ ಸದನವನ್ನು ಮುಂದೂಡಲಾಯಿತು.

ಸಂಸತ್ತಿನಲ್ಲಿ ಗೊಂದಲ ಹೆಚ್ಚಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕರ ಮೈಕ್‍ಗಳನ್ನು ಮ್ಯೂಟ್ ಮಾಡಲಾಗಿದೆ ಎಂಬ ರಾಹುಲ್ ಗಾಂಧಿ ಅವರ ಆರೋಪವನ್ನು ಪುನರಾವರ್ತಿಸಿದ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ವಾಗ್ದಾಳಿ ನಡೆಸಿತು. ಇತ್ತ ಬಿಜೆಪಿ ರಾಹುಲ್ ಗಾಂಧಿ ಅವರು ಕ್ಷಮೆ ಕೇಳಲೇ ಬೇಕು. ರಾಹುಲ್ ಗಾಂಧಿ ಅವರ ಭಾಷಣದ ಬಗ್ಗೆ ತನಿಖೆ ಮಾಡಲು ಸಂಸದೀಯ ಸಮಿತಿಯನ್ನು ರಚನೆ ಮಾಡಬೇಕು. ಒಂದು ವೇಳೆ ರಾಹುಲ್ ಗಾಂಧಿ ಸಂಸತ್‍ನಲ್ಲಿ ಕ್ಷಮೆ ಕೇಳದೇ ಇದ್ದರೆ, ಅವರ ಲೋಕಸಭೆ ಸದಸ್ಯತ್ವವನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದೆ. ಇದನ್ನೂ ಓದಿ: ನಟಿ ಸ್ವರಾ ಭಾಸ್ಕರ್ ಆರತಕ್ಷತೆಯಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ

ವಿವಾದದ ಬಳಿಕ ಗುರುವಾರ ಮೊದಲ ಬಾರಿ ಸಂಸತ್ತಿಗೆ ಆಗಮಿಸಿದ್ದ ರಾಹುಲ್ ಗಾಂಧಿ, ತನಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಶುಕ್ರವಾರ ಕೂಡ ಸಂಸತ್ತಿಗೆ ಆಗಮಿಸಿದ್ದರು. ಆದರೆ ಗದ್ದಲದ ನಡುವೆ ಅವರಿಗೆ ಮಾತನಾಡುವ ಅವಕಾಶ ಸಿಕ್ಕಿಲ್ಲ. ಭಾರೀ ಗದ್ದಲ ನಡೆದ ಹಿನ್ನೆಲೆಯಲ್ಲಿ ಸದನವನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಲಾಗಿದೆ. ಇದನ್ನೂ ಓದಿ: ಕೋಮು ಪ್ರಚೋದನೆ ಭಾಷಣ ಪ್ರಕರಣ – ಆಂದೋಲ ಸಿದ್ದಲಿಂಗ ಶ್ರೀ ದೋಷಿ

Share This Article
Leave a Comment

Leave a Reply

Your email address will not be published. Required fields are marked *