ಎಚ್‍ಡಿಕೆ ಮಾತು ತಪ್ಪಿದ ಮಗ, ಡಿಕೆಶಿ ದಾರಿ ತಪ್ಪಿದ ಮಗ: ತೇಜಸ್ವಿನಿ ಗೌಡ ವಾಗ್ದಾಳಿ

Public TV
1 Min Read

-ರಾಮನಗರ ಇಂದು ರಾವಣನಗರ ಆಗಿದೆ

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತು ತಪ್ಪಿದ ಮಗ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ದಾರಿ ತಪ್ಪಿದ ಮಗ. ಇಬ್ಬರೂ ದುರ್ಯೋಧನ, ದುಶ್ಯಾಸನ ಇದ್ದ ಹಾಗೆ ಎಂದು ಬಿಜೆಪಿ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಪಾದಯಾತ್ರೆ ಅಂತ್ಯದ ನಂತರ ಫ್ರೀಡಂಪಾರ್ಕ್ ಸಮೀಪದ ರಸ್ತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ದುರ್ಯೋಧನ ಹಾಗೂ ದುಶ್ಯಾಸನ ಮಹಾ ಪರಾಕ್ರಮಿಗಳು. ಆದರೆ ಅವರಲ್ಲಿ ಧರ್ಮ ಇರಲಿಲ್ಲ, ಹೀಗಾಗಿ ಸೋತರು. ದಾರಿ ತಪ್ಪಿದ ಮಗ ಹಾಗೂ ಮಾತು ತಪ್ಪಿದ ಮಗ ಇಬ್ಬರು ಸೇರಿದ್ದಾರೆ ಏನಾಗುತ್ತದೆ ನೋಡಬೇಕು ಎಂದು ವ್ಯಂಗ್ಯವಾಡಿದರು.

ನೀವು ತೊಡೆ ತಟ್ಟಿದ್ದು ನನಗೂ ನೆನಪಿದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಕಾಂಗ್ರೆಸ್ ನಾಯಕರು ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದರು. ಆಗ ಬಿಜೆಪಿ ನಿಮಗೆ ನೀರು, ಭದ್ರತೆ ಸೇರಿದಂತೆ ಅನೇಕ ವ್ಯವಸ್ಥೆ ಮಾಡಿತ್ತು. ನೀವು ಕದ್ದು ಕದ್ದು ಪಾದಯಾತ್ರೆ ಮಾಡಿದ್ದು ನನಗೂ ಗೊತ್ತು ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ನೇರವಾಗಿಯೇ ವಾಗ್ದಾಳಿ ನಡೆಸಿದರು.

ನಿಮಗೆ ಪಾದಯಾತ್ರೆಯ ಬಗ್ಗೆ ಅರಿವು ಇಲ್ಲ, ಹೀಗಾಗಿ ಹಗುರವಾಗಿ ಮಾತನಾಡುತ್ತಿರುವಿರಿ. ಅನುಪಮ ಜೋಡಿಗಳಾದ ನೀವು 57 ಕಿ.ಮೀ. ಪಾದಯಾತ್ರೆ ಮಾಡಿ, ಕಾಲಿನಲ್ಲಿ ಹೇಗೆ ಬೊಬ್ಬೆ ಬರುತ್ತವೆ ಎನ್ನುವುದು ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಸವಾಲು ಹಾಕಿದರು.

ಕುಮಾರಸ್ವಾಮಿ ರಾಮನಗರ ಮತಕ್ಷೇತ್ರವನ್ನು ಕೈಬಿಟ್ಟಿದ್ದಾರೆ. ಇದರಿಂದ ಶಾಸಕರಿಲ್ಲದೇ ರಾಮನಗರ ಸದ್ಯ ರಾವಣನ ನಗರವಾಗಿದೆ. ಕಾಂಗ್ರೆಸ್ ಉದ್ಧಾರಕ್ಕಾಗಿ ಏನನ್ನು ಡಿ.ಕೆ.ಶಿವಕುಮಾರ್ ಮಾಡಲಿಲ್ಲ. ಸಚಿವ ಸ್ಥಾನಕ್ಕಾಗಿ ಕುಮಾರಸ್ವಾಮಿಗೆ ಎಲ್ಲವನ್ನು ಮಾಡಿದರು ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಶಲ್ಯ ಹಾಕಿದವರೆಲ್ಲರೂ ಕಾಂಗ್ರೆಸ್ಸಿಗರಾ, ರಾಮರಾಜ್ಯ ಆಗಬೇಕು ಎಂದು ಗಾಂಧೀಜಿ ಅವರು ಕಾಂಗ್ರೆಸ್ ಶಲ್ಯ ಹಾಕಿದ್ದರು. ಆದರೆ ನೀವು ಕೆರೆ, ಹೊಲ, ಮನೆ ಅತಿಕ್ರಮಣ ಮಾಡಿ ಗಾಂಧೀಜಿಯವರ ಉದ್ದೇಶವನ್ನು ಮರೆತು ಬಿಟ್ಟಿರುವಿರಿ ಎಂದು ಹಸಿರು ಶಲ್ಯ ಹಾಕಿದವರು ರೈತರಲ್ಲ ಎಂದಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟರು.

Share This Article
Leave a Comment

Leave a Reply

Your email address will not be published. Required fields are marked *