ಇಟಲಿಯ ಸೋನಿಯಾಗೆ ಪೌರತ್ವ ಸಿಕ್ಕಿರುವಾಗ ರಾಮ, ಕೃಷ್ಣರಿಗೆ ನೀಡಿದ್ರೆ ತಪ್ಪೇನು: ಕಟೀಲ್

Public TV
1 Min Read

ಕೋಲಾರ: ಇಟಲಿಯಿಂದ ಬಂದ ಸೋನಿಯಾ ಗಾಂಧಿಯವರಿಗೆ ಪೌರತ್ವ ಸಿಕ್ಕಿರುವಾಗ, ಬೇರೆ ಕಡೆಯಿಂದ ಬಂದ-ರಾಮ ಕೃಷ್ಣ ಅಂತಹವರಿಗೆ ಪೌರತ್ವ ಬೇಡವೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.

ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 3 ಕೋಟಿ ಜನರಿಗೆ ಪೌರತ್ವ ನೀಡಿ ಸವಲತ್ತು ಒದಗಿಸುವುದು ಕಾಯ್ದೆಯ ಉದ್ದೇಶವಾಗಿದೆ. ಆದರೆ ಕಾಂಗ್ರೆಸ್ ಸುಳ್ಳು ಸುದ್ದಿಯನ್ನ ಹಬ್ಬಿಸಿ ರಾಷ್ಟ್ರ ವಿರೋಧ ನೀತಿಯನ್ನು ಅನುಸರಿಸುತ್ತಿದೆ. ಅಲ್ಲದೆ ಕಾಂಗ್ರೆಸ್ ಕಾಯ್ದೆ ಕುರಿತು ಅಪಪ್ರಚಾರ ಮಾಡಿ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಹೀಗಾಗಿ ಬಿಜೆಪಿ ಪೌರತ್ವ ಇಲ್ಲದವರಿಗೆ ಪೌರತ್ವ ಕೊಟ್ಟು, ಜನ ಜಾಗೃತಿ ಮೂಡಿಸುವಂತಹ ಕೆಲಸ ಮಾಡುತ್ತಿದೆ ಎಂದರು.

ಬಾಂಗ್ಲಾ ಮತ್ತು ಅಫ್ಘಾನಿಸ್ತಾನ ಅಲ್ಪಸಂಖ್ಯಾತರಿಗೆ ಆಶ್ರಯ ಕೊಡುವುದು ಗಾಂಧೀಜಿ ಕನಸಾಗಿತ್ತು. ಅದರಂತೆ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿದೆ. ಪೌರತ್ವ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡಿ, ಜನರನ್ನು ಹಾದಿ ತಪ್ಪಿಸುವ ಹೀನ ಕೆಲಸಕ್ಕೆ ಕೈ ಹಾಕಿದ್ದು, ಬೆಂಕಿ ಹಾಕುವ ಕೆಲಸ ಮಾಡುತ್ತಿದೆ. .

ಬುದ್ಧಿ ಜೀವಿಗಳು, ವಿಚಾರವಾದಿಗಳು ವಿರೋಧ ಮಾಡುವ ಮೂಲಕ ಅರ್ಬನ್ ನಕ್ಸಲ್‍ರಂತಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಮಾಡಿದ ಕಾಯ್ದೆಯನ್ನೇ ನಾವು ಮಾಡುತ್ತಿರುವುದು. ಹಾಗಾದರೆ ಅವರೆಲ್ಲ ಸಂವಿಧಾನ ವಿರೋಧಿಗಳೇ ಎಂದು ಪ್ರಶ್ನಿಸಿದರು. ಯಾರು ಎಷ್ಟೇ ಕೂಗಾಡಿದರೂ ಮೋದಿ ವರ್ಚಸ್ಸು ಕುಗ್ಗಿಸಲು ಸಾಧ್ಯವಿಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *