ಬೆಂಗಳೂರು: ಇದೊಂದು ಥರ ಲಜ್ಜೆಗೆಟ್ಟ ಸರ್ಕಾರ. ಸದನವನ್ನ ನಡೆಸೋಕೆ ಆಸಕ್ತಿಯಿಲ್ಲ. ಅತೃಪ್ತರು ಬರೋವರೆಗೂ ನಾವು ಸದನವನ್ನ ನಡೆಸಲ್ಲ ಎಂಬ ದೋಸ್ತಿಗಳ ಧೋರಣೆ ಸರಿಯಿಲ್ಲ ಎಂದು ಯಲಹಂಕ ಶಾಸಕ ಎಸ್. ಆರ್ ವಿಶ್ವನಾಥ್ ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ರಮಡ ರೆಸಾರ್ಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತರು ಬರೋ ಹಾಗಿದ್ದರೆ ಕರೆದುಕೊಂಡು ವಿಶ್ವಾಸ ಮತ ಯಾಚನೆ ಮಾಡಲಿ. ಆದರೆ ಕಾಲಹರಣ ಮಾಡೋದು ಸರಿ ಇಲ್ಲ. ಸಭಾಧ್ಯಕ್ಷರು ಸೋಮವಾರ ಮತಯಾಚನೆ ಮಾಡಿ ಎಂದು ಹೇಳಿದ್ದಾರೆ. ಅವರ ಮಾತಿನ ಮೇಲೆ ನಮಗೆ ವಿಶ್ವಾಸ ಇದೆ ಎಂದರು.
ಅತೃಪ್ತರನ್ನ ಮನವೊಲಿಸ್ತಾರೋ ಏನು ಮಾಡ್ತಾರೋ ನಮಗೆ ಗೊತ್ತಿಲ್ಲ. ಆದರೆ ವಿಶ್ವಾಸ ಮತ ಯಾಚನೆ ಮಾಡಿ. ಈ ಆಟಗಳನ್ನೆಲ್ಲ ಜನ ನೋಡುತ್ತಿದ್ದಾರೆ. ನೈತಿಕತೆ ಇದ್ರೆ ವಿಶ್ವಾಸ ಮತಯಾಚನೆ ಮಾಡಿ. ಸುಮ್ಮನೆ ಕಾಲ ಹರಣ ಮಾಡೋದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಗೋವಿಂದ ಕಾರಜೋಳ ಮಾತನಾಡಿ, ಕೆಲವರು ಸದನದ ಬೆಂಬಲ ಇಲ್ಲ ಎಂದು ಸಂಶಯ ವ್ಯಕ್ತಪಡಿಸುತ್ತಿದ್ದಾರೆಂದು ಸಿಎಂ ಹೇಳಿದ್ರು. ಸಿಎಂ ವಿಶ್ವಾಸಮತ ಯಾಚನೆಗೆ ನಾವು ಒಪ್ಪಿಕೊಂಡೆವು. 9, 10, 12, 13 ನೇ ವಿಧಾನಸಭೆಯಲ್ಲೂ ಒಂದೇ ದಿನಕ್ಕೆ ವಿಶ್ವಾಸಮತ ಪ್ರಕ್ರಿಯೆ ನಡೆದಿದೆ ಎಂದರು.
ಅಧಿಕಾರಿಗಳ ವರ್ಗಾವಣೆ ನಡೆಯುತ್ತಿದೆ. ಸಂಖ್ಯಾಬಲ ಇಲ್ಲದಿದ್ದ ಮೇಲೆ ಇದೆಲ್ಲ ಮಾಡೋದಕ್ಕೆ ಯಾವ ನೈತಿಕತೆ ಇದೆ. ವಿಧಾನಸಭೆಯಲ್ಲಿ ಹರಿಕಥೆ ಹೇಳಿ ಕುಳಿತುಕೊಳ್ಳುತ್ತಿದ್ದಾರೆ. ಈ ರಾಜ್ಯದ ಬಗ್ಗೆ ಕಳಕಳಿ ಇದ್ದರೆ ವಿಶ್ವಾಸಮತ ಕೇಳಿ ಬೆಂಬಲ ಇದ್ದರೆ ನೀವೇ ಅಧಿಕಾರ ನಡೆಸಿ. ರಾಜ್ಯಪಾಲರು ಇದೇ ಮೊದಲ ಬಾರಿ ಸದನ ನಡೆಯುವ ಸಮಯದಲ್ಲಿ ಮಧ್ಯಪ್ರವೇಶಿಸಿದ್ದಾರೆ ಎಂದು ಅವರು ಮೈತ್ರಿ ನಾಯಕರ ವಿರುದ್ಧ ಕಿಡಿಕಾರಿದರು.