ಚುನಾಯಿತ ಪ್ರತಿನಿಧಿಗಳಿಗೆ ಸಾಮಾನ್ಯ ಜ್ಞಾನ ಇರಬೇಕು, ಅದಕ್ಕೆ ಕಾಮನ್ ಸೆನ್ಸ್ ಅಂತಾರೆ: ಶೋಭಾ ಕರಂದ್ಲಾಜೆ

Public TV
2 Min Read

ಬಾಗಲಕೋಟೆ: ಚುನಾಯಿತ ಪ್ರತಿನಿಧಿಗಳಿಗೆ ಸಾಮಾನ್ಯ ಜ್ಞಾನ ಇರಬೇಕು. ಅದಕ್ಕೆ ಕಾಮನ್ ಸೆನ್ಸ್ ಅಂತಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹ ಉಂಟಾಗಿ ಜನರು ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ,  ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ  ಕೆಲವು ನಾಯಕರು ಭಾರೀ ಭೋಜನ ಕೂಟದಲ್ಲಿ ಭಾಗಿಯಾಗಿದ್ದರು. ಅವರಿಗೆ ಜನರು ಸಂಕಷ್ಟದಲ್ಲಿ ಇರುವಾಗ ಭೋಜನ ಕೂಟದಲ್ಲಿ ಭಾಗವಹಿಸಲು ಹೇಗೆ ಮನಸ್ಸು ಬಂತೋ ನನಗೆ ಗೊತ್ತಿಲ್ಲ ಎಂದು ಟಾಂಗ್ ಕೊಟ್ಟರು.

ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಸಂದರ್ಭದಲ್ಲಿ ನಾವೆಲ್ಲ ಪಕ್ಷ ರಾಜಕಾರಣದಿಂದ ಮೇಲೆದ್ದು ನಿಲ್ಲಬೇಕು. ಸರ್ಕಾರ ಅವರದ್ದಿದೆ ಅವರೇ ಮಾಡಿಕೊಳ್ಳಲಿ ಎಂದು ಹೇಳುವುದು ಮಾನವೀಯತೆ ಅಲ್ಲ. ನಿಮ್ಮ ಸಲಹೆ, ಅನುಭವದ ಅವಶ್ಯಕತೆ ಇದೆ. ನಿಮ್ಮಿಂದ ಸಿಗುವ ಸಲಹೆ, ಸಹಕಾರವನ್ನು ನಾವು ಸ್ವೀಕರಿಸುತ್ತೇವೆ ಎಂದು ವಿಪಕ್ಷ ನಾಯಕರಿಗೆ ಮನವಿ ಮಾಡಿಕೊಂಡರು.

ರಾಜ್ಯದ ನದಿಗಳ ಪ್ರವಾಹಕ್ಕೆ 4 ಲಕ್ಷಕ್ಕಿಂತ ಹೆಚ್ಚಿನ ಜನರು ನಿರಾಶ್ರಿತರಾಗಿದ್ದಾರೆ. ಬಿಜೆಪಿ ನಾಯಕರು ವೈಮಾಣಿಕ ಸಮೀಕ್ಷೆಯನ್ನು ನಡೆಸಿದ್ದಾರೆ. ಎಷ್ಟು ನಷ್ಟವಾಗಿದೆ ಎಂದು ನದಿ ಇಳಿದ ಮೇಲೆ ಹೇಳಬಹುದು. ಹಾಗಾಗಿ ಸಮೀಕ್ಷೆಯನ್ನು ಸ್ವಲ್ಪ ದಿನ ತಡ ಮಾಡಿ ಮಾಡಬೇಕು. ಸದ್ಯಕ್ಕೆ ಸುಮಾರು 40 ರಿಂದ 50 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಸಂತ್ರಸ್ತರಿಗೆ ಆದಷ್ಟು ಬೇಗ ಪರಿಹಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಮಂತ್ರಿ ಮಂಡಲ ವಿಸ್ತರಣೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಶೋಭಾ ಕರಂದ್ಲಾಜೆ ಅವರು, ಈ ಕುರಿತು ಚರ್ಚೆ ಮಾಡಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಟೈಂ ಫಿಕ್ಸ್ ಮಾಡಿದ್ದರು. ಆದರೆ ಮಾಜಿ ಸಚಿವೆ ಸುಷ್ಮಾ ಸ್ವಾರಾಜ್ ನಿಧನರಾಗಿದ್ದರಿಂದ ಸಂಪುಟ ರಚನೆ ತಡವಾಗಿದೆ. ಆದರೂ ಸಹ ಸಿಎಂ ಯಡಿಯೂರಪ್ಪ ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ. ಬಿಜೆಪಿ ಹೈಕಮಾಂಡ್ ಹಾಗೂ ರಾಜ್ಯ ನಾಯಕರು ಚರ್ಚೆ ಮಾಡಿ ಸ್ಥಾನ ಹಂಚಿಕೆ ಮಾಡುತ್ತಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *