ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಬಹು ದೊಡ್ಡ ಜವಾಬ್ದಾರಿ ನೀಡಿದ್ದಾರೆ: ನಳಿನ್ ಕುಮಾರ್

Public TV
1 Min Read

ಬೆಂಗಳೂರು: ಸಾಮಾನ್ಯ ಕಾರ್ಯಕರ್ತ ಪ್ರಧಾನಿ ಆಗುವುದು, ರಾಜ್ಯಾಧ್ಯಕ್ಷ ಆಗೋದು ಸುಲಭದ ಮಾತಲ್ಲ. ಆದರೆ ರಾಷ್ಟ್ರೀಯ ಅಧ್ಯಕ್ಷರು ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಬಹು ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ ಎಂದು ನೂತನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿದರು

ಕೆಐಎಎಲ್‍ನಲ್ಲಿ ಮಾತನಾಡಿದ ನಳಿನ್ ಕುಮಾರ್, ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ರಾಷ್ಟ್ರೀಯ ಅಧ್ಯಕ್ಷರು ಬಹು ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ. ನಿಮ್ಮೆಲ್ಲರ ಸಹಕಾರದಿಂದ ನನ್ನ ಸ್ಥಾನವನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತೇವೆ ಎಂಬ ವಿಶ್ವಾಸವಿದೆ. ಇಡೀ ರಾಷ್ಟ್ರದಲ್ಲಿ ಗುರುತಿಸುವಂತಹ ಪ್ರಧಾನಿ ಮೋದಿಯವರ ನೇತೃತ್ವವಿದೆ. ರಾಜ್ಯದಲ್ಲಿ ರೈತರ ಪರವಾಗಿ ಹೋರಾಟ ಮಾಡುವ ಯಡಿಯೂರಪ್ಪ ಅವರ ನೇತೃತ್ವವಿದೆ. ಎಲ್ಲಾ ಹಿರಿಯರ ಮಾರ್ಗದರ್ಶನದಲ್ಲಿ ಕಿರಿಯರ ಜೊತೆಯಲ್ಲಿ ಪಕ್ಷವನ್ನು ಕಟ್ಟುವ ಕೆಲಸ ಮಾಡುತ್ತೇನೆ ಎಂದರು.

ಇಂದು ನನಗೆ ಬಹಳ ಖುಷಿಯಾಗಿದೆ. ಕರ್ನಾಟಕದ ಬೆಂಗಳೂರು ನಗರವನ್ನು ಸಂವೃದ್ಧಿ ಮಾಡಿರುವ ಕೆಂಪೇಗೌಡರ ಪುಣ್ಯ ಭೂಮಿಯಲ್ಲಿ ಅವರ ಆಶೀರ್ವಾದ ಪಡೆಯುವ ಮೂಲಕ ಈ ಜವಾಬ್ದಾರಿಯನ್ನು ನಿರ್ವಹಿಸಲು ಹೋಗುತ್ತಿದ್ದೇನೆ ಎಂದು ತಮಗೆ ಸ್ವಾಗತ ಕೋರಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

ಸಾಮಾನ್ಯ ಕಾರ್ಯಕರ್ತ ಪ್ರಧಾನಿ ಆಗುವುದು, ರಾಜ್ಯಾಧ್ಯಕ್ಷ ಆಗೋದು ಸುಲಭದ ಮಾತಲ್ಲ. ಇದು ಕೇವಲ ಭಾರತೀಯ ಜನತಾ ಪಾರ್ಟಿಯಲ್ಲಿ ಮಾತ್ರ ಸಾಧ್ಯ. ಶ್ರೇಷ್ಠವಾದ ಜವಾಬ್ದಾರಿ ನೀಡಿದ್ದಾರೆ. ಒಬ್ಬ ಕಾರ್ಯಕರ್ತನ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತೇನೆ. ಬಿಜೆಪಿ ಸರ್ವ ವ್ಯಾಪಿ, ಸರ್ವ ಸ್ಪರ್ಶಿಯಾಗಿ ರಾಜ್ಯದ ಮೂಲೆ ಮೂಲೆಗಳಲ್ಲಿ ಬೆಳೆದಿದೆ. ಇದನ್ನ ಇನ್ನಷ್ಟು ಗಟ್ಟಿ ಮಾಡುತ್ತೀನಿ. ಯಡಿಯೂರಪ್ಪ ಅವರ ಜೊತೆ ಸಹಕಾರಿಯಾಗಿ ನಿಂತು ಕೆಲಸ ನಿರ್ವಹಿಸುತ್ತೇನೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದರು.

ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರು ಅದ್ಧೂರಿ ಸ್ವಾಗತ ಕೋರಿದ್ದರು. ಸಂಸದರಾದ ಬಿ.ಎನ್ ಬಚ್ಚೇಗೌಡ, ಮುನಿಸ್ವಾಮಿ, ಪ್ರತಾಪ ಸಿಂಹ, ಶಾಸಕರಾದ ಅಂಗಾರ, ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ವಿಮಾನ ನಿಲ್ದಾಣಕ್ಕೆ ರಾಜ್ಯಾಧ್ಯಕ್ಷರನ್ನು ಬರಮಾಡಿಕೊಳ್ಳಲು ಆಗಮಿಸಿದ್ದರು. ವೀರಗಾಸೆ, ಡೊಳ್ಳು ಕುಣಿತದೊಂದಿಗೆ ನಳಿನ್ ಕುಮಾರ್ ಅವರನ್ನು ಸ್ವಾಗತಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *