ಪ್ರತೀ ಮಂಡಲ, ಜಿಲ್ಲೆಗಳಲ್ಲಿನ ರಾಮಭಕ್ತರನ್ನು ಅಯೋಧ್ಯೆಗೆ ಕಳುಹಿಸಲು ನಿರ್ಧಾರ: ಅಶ್ವಥ್‌ ನಾರಾಯಣ್‌

By
1 Min Read

ಬೆಂಗಳೂರು: ಪ್ರತೀ ಮಂಡಲ, ಜಿಲ್ಲೆಗಳಲ್ಲಿರುವ ರಾಮಭಕ್ತರನ್ನು ಅಯೋಧ್ಯೆಗೆ ಕಳುಹಿಸಿಕೊಡಲು ನಿಶ್ಚಯಿಸಲಾಗಿದೆ ಎಂದು ಮಾಜಿ ಡಿಸಿಎಂ ಅಶ್ವಥ್‌ ನಾರಾಯಣ್‌ ತಿಳಿಸಿದ್ದಾರೆ.

ಬಿಜೆಪಿ ಕಾರ್ಯಕಾರಿಣಿ ಸಭೆ ಬಳಿಕ ಮಾತನಾಡಿದ ಅವರು, ಅಯೋಧ್ಯೆಗೆ ರಾಮಭಕ್ತರನ್ನು ಕಳಿಸಿಕೊಡಲು ಈಗಾಗಲೇ ನಿಶ್ಚಯಿಸಲಾಗಿದೆ. ಪ್ರತೀ ಮಂಡಲ, ಜಿಲ್ಲೆಗಳಲ್ಲಿ ರಾಮಭಕ್ತರನ್ನು ಅಯೋಧ್ಯೆಗೆ ಕಳಿಸಿಕೊಡಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.

ಫೆ.3, 4, 5 ರಂದು ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಭೆ ಮಾಡಲು ನಿಶ್ಚಯಿಸಲಾಗಿದೆ. ಕೇಂದ್ರ ಸರ್ಕಾರದಿಂದ ಬಂದಿರುವ, ಕೇಂದ್ರದ ಯೋಜನೆಗಳ ಫಲಾನುಭವಿಗಳಾಗಿರುವ ಮಹಿಳಾ ಸಂಘಗಳು, ಸ್ವಸಹಾಯ ಸಂಘಗಳ ನಾರಿ ವಂದನ ಹೆಸರಲ್ಲಿ ಸಮಾವೇಶ ಮಾಡಲು ತೀರ್ಮಾನಿಸಲಾಗಿದೆ. ಮತ್ತೊಮ್ಮೆ ಮೋದಿ ಎಂದು ಬೂತ್‌ಗಳಲ್ಲಿ ಗೋಡೆ ಬರಹ ಬರೆಯಲು ನಿರ್ಧರಿಸಲಾಗಿದೆ. ಜ.30 ರಂದು ಜಿಲ್ಲಾ, ಮಂಡಲ, ಬೂತ್ ಪದಾಧಿಕಾರಿಗಳು ಆಂದೋಲನದ ಮಾದರಿಯಲ್ಲಿ ಪ್ರತೀ ಬೂತ್‌ಗಳಲ್ಲೂ ಗೋಡೆ ಬರಹ ಆಂದೋಲನ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಗ್ರಾಮ್ ಚಲೋ‌ ಕಾರ್ಯಕ್ರಮವೂ ನಿಶ್ಚಯ ಆಗಿದೆ. ಎಲ್ಲ ಗ್ರಾಮಗಳಿಗೆ ತೆರಳಿ ಕಾಂಗ್ರೆಸ್ ವೈಫಲ್ಯಗಳು, ಕೇಂದ್ರದ ಸಾಧನೆಗಳ ಪ್ರಚಾರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರೇ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಇದಲ್ಲದೇ ಬೂತ್ ಕಮಿಟಿ ಸಭೆ, ಪೇಜ್ ಪ್ರಮುಖ್ ಸಭೆಗಳನ್ನು ನಡೆಸುತ್ತೇವೆ. ಬೂತ್‌ಗಳ ಬಲವರ್ಧನೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಲೋಕಸಭೆ ಕ್ಷೇತ್ರವಾರು ಹಂಚಿಕೆ ಮಾಡಿರುವ 8 ಕ್ಲಸ್ಟರ್‌ಗಳಿಗೆ ಅಮಿತ್ ಶಾ, ಜೆ.ಪಿ.ನಡ್ಡಾ, ರಾಜನಾಥ್ ಸಿಂಗ್ ಭೇಟಿ ಕೊಡಲಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಈ ಮೂವರು ಹೈಕಮಾಂಡ್ ನಾಯಕರು ಲೋಕಸಭೆ ಕ್ಷೇತ್ರಗಳ ಕ್ಲಸ್ಟರ್‌ಗಳಿಗೆ ಭೇಟಿ ಕೊಡಲಿದ್ದಾರೆ ಎಂದು ತಿಳಿಸಿದ್ದಾರೆ.

Share This Article