ನಾವು ಶ್ರೀರಾಮನ ವಂಶಸ್ಥರು ಎಂದ ಬಿಜೆಪಿ ಸಂಸದೆ

Public TV
1 Min Read

ಜೈಪುರ: ಸುಪ್ರೀಂ ಕೋರ್ಟ್ ಶುಕ್ರವಾರ ಅಯೋಧ್ಯೆ ಕುರಿತು ವಿಚಾರಣೆ ನಡೆಸುತ್ತಿದ್ದ ವೇಳೆ “ಶ್ರೀರಾಮನ (ರಘುವಂಶಸ್ಥರು) ಎಲ್ಲಿದ್ದಾರೆ?” ಎಂದು ಪ್ರಶ್ನಿಸಿತ್ತು. ಇದೇ ಬೆನ್ನಲ್ಲಿ ರಾಜಸ್ಥಾನದ ಬಿಜೆಪಿ ಸಂಸದೆ ದಿಯಾ ಕುಮಾರಿ ಅವರು ನಮ್ಮದು ಶ್ರೀರಾಮಚಂದ್ರನ ವಂಶ ಎಂದು ಟ್ವೀಟ್ ಮಾಡಿದ್ದಾರೆ.

ಸಂಸದೆಯ ಈ ಪ್ರತಿಪಾದನೆಗೆ ಕಾರಣ, ಸುಪ್ರೀಂ ಕೋರ್ಟಿನ ಶುಕ್ರವಾರದ ವಿಚಾರಣೆ ವೇಳೆ “ಶ್ರೀರಾಮನ (ರಘುವಂಶಸ್ಥರು) ಎಲ್ಲಿದ್ದಾರೆ? ಅಯೋಧ್ಯೆಯಲ್ಲಿ ಆತನ ಸಂಬಂಧಿಕರು ಯಾರಾದರೂ ಈಗ ಇದ್ದಾರಾ?” ಎಂದು ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಪೀಠ ಪ್ರಶ್ನಿಸಿತ್ತು. ಇದಕ್ಕೆ ದಿಯಾ ಅವರು ಪ್ರತಿಕ್ರಿಯಿಸಿ, “ಶ್ರೀರಾಮ ವಿಶ್ವರೂಪಿ. ಜಗತ್ತಿನ ಎಲ್ಲಾ ಕಡೆ ಆತನ ವಂಶಸ್ಥರು ಇದ್ದಾರೆ. ನನ್ನದು ರಘುವಂಶ ಕುಟುಂಬ. ಶ್ರೀರಾಮನ ಪುತ್ರ ಕುಶ ನಮ್ಮ ಪೂರ್ವಜ” ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ರಾಜ ವಂಶಸ್ಥರ ಕುರಿತು ಇರುವ ಮನುಸ್ಮೃತಿ, ವಂಶವೃಕ್ಷ ಹಾಗೂ ವಂಶಾವಾಹಿ ದಾಖಲೆಗಳನ್ನು ಆಧಾರವಾಗಿ ಇಟ್ಟುಕೊಂಡೇ ತಾವು ಈ ಪ್ರತಿಪಾದನೆ ಮಾಡುತ್ತಿರುವುದಾಗಿ ದಿಯಾ ಅವರು ಹೇಳಿಕೊಂಡಿದ್ದಾರೆ. ರಾಮ ನಮ್ಮೆಲ್ಲರ ನಂಬಿಕೆಯ ದೈವ. ಹೀಗಾಗಿ ಆತನ ಜನ್ಮಭೂಮಿಗೆ ಸಂಬಂಧಿಸಿದ ಪ್ರಕರಣ ಕುರಿತು ಕೋರ್ಟ್ ತ್ವರಿತ ವಿಚಾರಣೆ ನಡೆಸಿ ತೀರ್ಪು ನೀಡಬೇಕು ಎಂದು ದಿಯಾ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದ್ದಾರೆ.

ಅಲ್ಲದೆ ನಮ್ಮ ಕುಟುಂಬ ಕುಶನ ವಂಶವೃಕ್ಷ ಹೊಂದಿದೆ ಎನ್ನುವುದಕ್ಕೆ ದಾಖಲೆಗಳು ಬೇಕಾದರೆ ನಾವು ನೀಡುತ್ತೇವೆ. ಆದರೆ ಅಯೋಧ್ಯೆ ಪ್ರಕರಣದ ಮಧ್ಯೆ ಬಂದು ಮುನ್ನಡೆಯನ್ನು ಪಡೆಯಲು ನಾವು ಇಚ್ಛಿಸುವುದಿಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *