ಬಿಜೆಪಿ ಶಾಸಕನಿಂದ ಗೂಂಡಾಗಿರಿ- ನಿಂದನೆಯಿಂದ ಬೇಸತ್ತು ಹುದ್ದೆಯೇ ಬೇಡ ಅಂತಿದ್ದಾರೆ ಅಧಿಕಾರಿ!

Public TV
2 Min Read

ರಾಯಚೂರು: ಜಿಲ್ಲೆಯ ದೇವದುರ್ಗದಲ್ಲಿ ಬಿಜೆಪಿ ಶಾಸಕರೊಬ್ಬರು ಗೂಂಡಾಗಿರಿ ಮೆರೆದ ಘಟನೆ ಬೆಳಕಿಗೆ ಬಂದಿದೆ. ರಾಯಚೂರಿನ ದೇವದುರ್ಗದ ಬಿಜೆಪಿ ಶಾಸಕ, ಶಿವನಗೌಡ ನಾಯಕ್ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಆರ್.ನಾಗರಾಜ್‍ಗೆ ಹಿಗ್ಗಾಮುಗ್ಗಾ ನಿಂದಿಸಿದ್ದಾರೆ.

ಅಂಗನವಾಡಿ ಮೊಟ್ಟೆ ಸರಬರಾಜು ಗುತ್ತಿಗೆ ತಮ್ಮವರಿಗೇ ನೀಡುವಂತೆ ಬಿಜೆಪಿ ಶಾಸಕ ಅಧಿಕಾರಿಗೆ ಧಮ್ಕಿ ಹಾಕಿದ್ದಾರೆ. ಸದ್ಯ ಶಾಸಕರ ನಿಂದನೆಯಿಂದ ಮನನೊಂದ ಅಧಿಕಾರಿ ತನಗೆ ಈ ಹುದ್ದೆಯೇ ಬೇಡ ಅಂತ ಹೇಳುತ್ತಿದ್ದಾರೆ.


ಶಾಸಕರ ವಿರುದ್ಧ ಆರೋಪವೇನು?
ಬಿಜೆಪಿ ಶಾಸಕರಿಂದ ಮನನೊಂದಿರುವ ಅಧಿಕಾರಿ ಆರ್.ನಾಗರಾಜ್ ಅವರು ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಶಿವನಗೌಡ ನಾಯಕ್ ಅವರು ಮೊಬೈಲ್ ಕರೆಯಲ್ಲಿ ಬೈದಿರುವ ಸಿಡಿಯನ್ನೂ ಜಿಲ್ಲಾ ಪಂಚಾಯ್ತಿ ಸಿಇಓ ಹಾಗೂ ಅಧ್ಯಕ್ಷರಿಗೆ ನೀಡಿದ್ದಾರೆ. ಅಲ್ಲದೇ ಇದರ ಜೊತೆಗೆ ತಮ್ಮ ಪ್ರಭಾರಿ ಉಪನಿರ್ದೇಶಕ ಹುದ್ದೆಯನ್ನ ಬೇರೆಯವರಿಗೆ ವಹಿಸಿಕೊಡುವಂತೆ ಮನವಿ ಮಾಡಿದ್ದಾರೆ.

ರಾಯಚೂರಲ್ಲಿ ಅಪೌಷ್ಟಿಕತೆ ಇದೆ. ಹೀಗಾಗಿ, ಅಂಗನವಾಡಿ ಮಕ್ಕಳಿಗೆ ಮೊಟ್ಟೆ ನೀಡಲಾಗ್ತಿದೆ. ಈ ಮೊಟ್ಟೆ ಸರಬರಾಜಿನ ಮೇಲೆ ಶಾಸಕ ಶಿವನಗೌಡ ನಾಯಕ್ ಅವರು ಕಣ್ಣು ಹಾಕಿದ್ದಾರೆ. ಗುತ್ತಿಗೆ ತಮ್ಮವರಿಗೇ ಕೊಡಬೇಕು. ಅಕೌಂಟಿಗೆ ನೇರವಾಗಿ ಹಣ ಹಾಕಿ. ಜೊತೆಗೆ, ಬೇರೆ ಆಹಾರ ಪದಾರ್ಥಗಳ ಟ್ರಾನ್ಸ್ ಪೋರ್ಟೆಷನ್ ಹೊಣೆ ತಮ್ಮವರಿಗೆ ಕೊಡಿ ಅಂತ ಧಮ್ಕಿ ಹಾಕಿದ್ದಾರೆ.

ಆದ್ರೆ, ಮೊಟ್ಟೆಗಳನ್ನ ಅಂಗನವಾಡಿ ಶಿಕ್ಷಕಿಯರೇ ನೇರವಾಗಿ ಖರೀದಿ ಮಾಡಬೇಕು. ಬಾಲ ವಿಕಾಸ ಸಮಿತಿ ಜಂಟಿ ಖಾತೆಗೆ ಹಣ ಹಾಕಬೇಕು ಅನ್ನೋದು ನಿಯಮ. ಪ್ರತಿ ತಿಂಗಳು ದೇವದುರ್ಗ ತಾಲೂಕೊಂದಕ್ಕೆ 25 ರಿಂದ 30 ಲಕ್ಷ ರೂಪಾಯಿ ಮೊಟ್ಟೆಗಾಗಿ, 70 ರಿಂದ 80 ಲಕ್ಷ ರೂಪಾಯಿ ಆಹಾರ ಪದಾರ್ಥಗಳಿಗಾಗಿ ಬರುತ್ತಿದೆ. ಈ ಸುಮಾರು 1 ಕೋಟಿ 10 ಲಕ್ಷ ರೂಪಾಯಿ ಹಣದ ಮೇಲೆ ಕಣ್ಣು ಹಾಕಿರುವ ಶಾಸಕ ಶಿವನಗೌಡ ನಾಯಕ್ ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಾರೆ ಅಂತ ಆರ್.ನಾಗರಾಜ್ ಆರೋಪಿಸಿದ್ದಾರೆ.

ಶಾಸಕರು ಹೇಳಿದ್ದೇನು?:
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಿಜೆಪಿ ಶಾಸಕ, ಕಳೆದ 6 ತಿಂಗಳಿಂದ ಇಲ್ಲಿ ಅಪೌಷ್ಠಿಕತೆ ಇಲ್ಲ ಅನ್ನೋ ಆಧಾರದ ಮೇಲೆ ಸರ್ಕಾರ ಹಣ ಕೊಡುತ್ತಾ ಇದೆ. ಹೀಗಾಗಿ ಮೊಟ್ಟೆ ಹಾಗೂ ಆಹಾರ ಯಾಕೆ ಸರಿಯಾಗಿ ಸರಬರಾಜು ಮಾಡುತ್ತಿಲ್ಲ ಅಂತ 6 ತಿಂಗಳಿನಿಂದ ಕೇಳುತ್ತಾ ಇದ್ದೇನೆ. ಒಬ್ಬ ಶಾಸಕರನ ಕರ್ತವ್ಯ ಅಂದ್ರೆ, ಇವರುಗಳು ಏನೆಲ್ಲಾ ಮಾಡಿದ್ದಾರೆ ಅನ್ನೋದನ್ನು ನೋಡಿಕೊಂಡು ಕೈ ಕಟ್ಟಿ ಕುಳಿತುಕೊಳ್ಳಬೇಕಾ ಅಂತ ಪ್ರಶ್ನಿಸುವ ಮೂಲಕ ಸಮಜಾಯಿಷಿ ನೀಡಿದ್ದಾರೆ.

ಆದ್ರೆ ಈ ಬಗ್ಗೆ ಮಾತನಾಡಿದ ಪ್ರಭಾರಿ ಉಪನಿರ್ದೇಶಕ, ಈ ಬಗ್ಗೆ ನಾನು ತಪ್ಪು ಮಾಡಿದ್ದಲ್ಲಿ ನನ್ನ ವಿರುದ್ಧ ಕ್ರಮ ಕೈಗೊಳ್ಳಲಿ. ಅದು ಬಿಟ್ಟು ಅವಾಚ್ಯವಾಗಿ ನಿಂದಿಸೋದು ಬೇಡ. ಅಲ್ಲದೇ ಎಲ್ಲಾ ಅಂಗನವಾಡಿಗಳಿಗೆ ಭೇಟಿ ನಿಡಿ ಒಂದು ಬಾರಿ ಪರಿಶೀಲನೆ ನಡೆಸಲಿ ಅಂತ ಹೇಳಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *