– ಜನರ ಮನಸ್ಸು ಮೋದಿಯವ್ರ ಮೇಲಿದೆ
ಗದಗ: ಉಪಮುಖ್ಯಮಂತ್ರಿ ಸ್ಥಾನದ ಕುರಿತು ನಾನು ಮಾತನಾಡಲ್ಲ. ಬಿಜೆಪಿ ಪಕ್ಷ ಏನು ನಿರ್ಧಾರ ತೆಗೆದುಕೊಳ್ಳುತ್ತದೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ದೇವರು ಕರುಣಿಸಿದಾಗ ಡಿಸಿಎಂ ಸ್ಥಾನ ಸಿಕ್ಕೇ ಸಿಗುತ್ತದೆ. ಮುಂದೆ ಒಳ್ಳೆಯ ಅವಕಾಶ ಸಿಗಬಹುದು ಕಾದುನೋಡೋಣ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆಪರಿಹಾರ ಕುರಿತು ಕೇವಲ ಬಾಯಿಚಪಲಕ್ಕಾಗಿ ಮಾತನಾಡುವ ರಾಜಕಾರಣಿಗಳನ್ನು ನಾವು ಏನು ಮಾಡೋಕ್ಕಾಗಲ್ಲ. ಸರ್ಕಾರದ ಬಗ್ಗೆ ನೆಗೆಟಿವ್ ಮಾತನಾಡಬೇಕು, ಮಾತನಾಡ್ತಾರೆ, ಮಾತಾಡ್ಲಿ ಬಿಡಿ. ನೆರೆ ಸಂದರ್ಭದಲ್ಲಿ ಸರ್ಕಾರ ಯಾವ ರೀತಿ ಸ್ಪಂದಿಸಬೇಕು ಆ ರೀತಿಯಲ್ಲಿ ಸ್ಪಂದಿಸಿದೆ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಬಾಯಿ ಚಪಲಕ್ಕೆ ಮಾತನಾಡುತ್ತಾರೆ. ಮುಖ್ಯಮಂತ್ರಿ ಆಗಬೇಕೆಂಬ ಕನಸು ಸಿದ್ದರಾಮಯ್ಯ ಕಾಣುತ್ತಿದ್ದಾರೆ ಎಂದು ಮಾಜಿ ಸಿಎಂ ವಿರುದ್ಧ ಕಿಡಿಕಾರಿದರು.
ಇದೇ ವೇಳೆ ಉಪಚುನಾವಣೆ ಕುರಿತು ಪ್ರತಿಕ್ರಿಯಿಸಿದ ಸಚಿವರು, 15 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ. ಜನರ ಮನಸ್ಥಿತಿ ಮೋದಿಯವರ ಮೇಲಿದೆ. ಯಡಿಯೂರಪ್ಪನವರ ಮೇಲೂ ಗೌರವ ಹಾಗೂ ಅಭಿವೃದ್ಧಿ ಪರ ಮುಖ್ಯಮಂತ್ರಿ ಅನ್ನೋ ಮನವರಿಕೆಯಾಗಿದೆ. ಕಾಂಗ್ರೆಸ್-ಜೆಡಿಎಸ್ ಎಷ್ಟೇ ಪ್ರಯತ್ನ ಮಾಡಿದ್ರೂ 15 ಕ್ಕೆ 15 ಸ್ಥಾನವೂ ಬಿಜೆಪಿ ಗೆಲ್ಲುತ್ತದೆ. ಯಾರಿಗೆ ಎಲ್ಲಿ ಟಿಕೆಟ್ ಕೊಡಬೇಕು ಅಂತ ಪಾರ್ಟಿ ನಿರ್ಧಾರ ಮಾಡುತ್ತದೆ ಎಂದರು.
ಬೈ ಎಲೆಕ್ಷನ್ ನಂತರ ಸರ್ಕಾರ ಪಥನ ಅನ್ನೋ ವಿರೋಧ ಪಕ್ಷದವರ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ಭವಿಷ್ಯ ಹೇಳುವ ರಾಜಕಾರಣಿಗಳಿಗೆ ಏನು ಮಾಡೋಕೆ ಆಗಲ್ಲ. ವಿರೋಧ ಪಕ್ಷದವರು ಪಂಚಾಂಗ, ಗಿಳಿಶಾಸ್ತ್ರ, ಭವಿಷ್ಯ ಹೇಳುವ, ಮಂತ್ರ, ತಂತ್ರ ಮಾಡುವ ಕೆಲಸಕ್ಕೆ ಕೂತಿದ್ದಾರೆ. ದೇವರ ಇಚ್ಛೆ ಪ್ರಕಾರ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದರು.
ಅನರ್ಹರಿಗೆ ಟಿಕೆಟ್ ನಿಡುತ್ತಾರೋ ಇಲ್ಲವೋ ಅದು ನನಗೆ ಗೊತ್ತಿಲ್ಲ. ಬೇರೆ ಯಾರಿಗೆ ಟಿಕೆಟ್ ನೀಡಿದರೂ ಪಕ್ಷಕ್ಕಾಗಿ ಕೆಲಸ ಮಾಡಬೇಕು. ಪಾರ್ಟಿ ಸಲುವಾಗಿ ಎಲ್ಲರೂ ಅನಿವಾರ್ಯವಾಗಿ ತೃಪ್ತಿಪಟ್ಟುಕೊಳ್ಳಬೇಕು ಎಂದು ತಿಳಿಸಿದರು.