ಬಿಜೆಪಿಯವ್ರು ಲಜ್ಜೆಗೆಟ್ಟು, ಮಾನ ಮರ್ಯಾದೆ ಬಿಟ್ಟು ಸರ್ಕಾರ ರಚನೆಗೆ ಪ್ರಯತ್ನಿಸ್ತಿದ್ದಾರೆ: ಸಿದ್ದರಾಮಯ್ಯ

Public TV
3 Min Read

ಬೆಂಗಳೂರು: ಬಿಜೆಪಿಯವರು ಲಜ್ಜೆಗೆಟ್ಟು ತಮ್ಮ ಮಾನ ಮರ್ಯಾದೆ ಬಿಟ್ಟು ಸರ್ಕಾರ ರಚನೆ ಮಾಡಬೇಕು ಅಂತ ಪ್ರಯತ್ನ ಪಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ವಿದೇಶ ಪ್ರವಾಸ ಮುಗಿಸಿ ಇದೇ ಮೊದಲ ಬಾರಿಗೆ ವಿಧಾನಸೌಧಕ್ಕೆ ಆಗಮಿಸಿದ ಸಿದ್ದರಾಮಯ್ಯನವರಿಗೆ ಸಚಿವ ದೇಶಪಾಂಡೆ ಶಾಸಕರಾದ ಐವಾನ್ ಡಿಸೋಜಾ ಹಾಗೂ ಎಂ.ಬಿ.ಪಾಟೀಲ್ ಸಾಥ್ ನೀಡಿದ್ದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರ ಮಾಡುವುದಕ್ಕೆ ಬಿಜೆಪಿಯವರು ಶತಾಯಗತಾಯ ಪ್ರಯತ್ನ ಮಾಡುತ್ತಿರುವುದು ಸತ್ಯ. ಈಗಾಗಲೇ ಅನೇಕ ಶಾಸಕರು ಈ ಬಗ್ಗೆ ನನಗೆ ಮಾಹಿತಿ ನೀಡಿದ್ದಾರೆ. ಬಿಜೆಪಿಯವರು ಲಜ್ಜೆಗೆಟ್ಟು ತಮ್ಮ ಮಾನ ಮರ್ಯಾದೆ ಬಿಟ್ಟು ಸರ್ಕಾರ ರಚನೆ ಮಾಡಲೇಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಯಾರೂ ಸಹ ಪಕ್ಷವನ್ನು ಬಿಟ್ಟು ಹೋಗಲ್ಲ ಎಂದರು.

ಕೇವಲ ಸಚಿವ ಸ್ಥಾನ ಹಾಗೂ ನಿಗಮ ಮಂಡಳಿಗಳ ಆಕಾಂಕ್ಷಿಗಳು ಇದ್ದಾರೆ ಅಷ್ಟೇ. ಆಗೆಂದ ಮಾತ್ರಕ್ಕೆ ಅವರ‍್ಯಾರು ಪಕ್ಷ ಬಿಡುವ ಪರಿಸ್ಥಿತಿಯಲ್ಲಿ ಇಲ್ಲ. ಹೈಕಮಾಂಡ್ ಯಾರನ್ನು ಕರೆದಿಲ್ಲ. ಜಾರಕಿಹೊಳಿ ಸಹೋದರರಿಗೆ ಕರೆ ಬಂದಿರುವುದು ನನಗೆ ಗೊತ್ತಿಲ್ಲ. ಸಚಿವ ಸಂಪುಟ ವಿಸ್ತರಣೆ ಹಾಗೂ ಪರಿಷತ್ ಸ್ಥಾನದ ಬಗ್ಗೆ ಚರ್ಚೆ ನಡೆಸಲು ದೆಹಲಿಗೆ ತೆರಳುತ್ತಿದ್ದೇವೆ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಮಸ್ಯೆಯೇ ಇಲ್ಲದ ಮೇಲೆ ತೀರ್ಮಾನ ಎಲ್ಲಿಂದ ತಗೋಬೇಕು. ಮಾಧ್ಯಮಗಳಲ್ಲಿ ಬರುತ್ತಿರುವುದರಲ್ಲಿ 1%ರಷ್ಟು ಸಹ ಸತ್ಯ ಇಲ್ಲ. ಸರ್ಕಾರಕ್ಕೆ ಧಕ್ಕೆ ತರುವ ಹಾಗೆ ಮಾಡುತ್ತಿದ್ದಾರೆ ಅಷ್ಟೆ. ಪಕ್ಷ ಬಿಡುತ್ತೇನೆ ಎಂದು ಯಾರು ಹೇಳಿಲ್ಲ. ಎಲ್ಲಾ ಹೇಳಿಕೆಗಳು ಆಧಾರ ರಹಿತವಾಗಿದೆ. ಮಾಧ್ಯಮಗಳು ಸುಳ್ಳು ಸುದ್ದಿ ಹರಡಿಸುತ್ತಿವೆ. ಕ್ಷೇತ್ರಗಳ ಸಮಸ್ಯೆ ಇದೆ ಅಂದ ಮಾತ್ರಕ್ಕೆ ಪಕ್ಷ ಬೀಡುತ್ತಾರೆ ಅನ್ನುವ ತೀರ್ಮಾನಕ್ಕೆ ಬರಬಾರದು. ಜಾರಕಿಹೊಳಿ ಸಹೋದರರು ಖಾಸಗಿ ಕಾರಲ್ಲಿ ಓಡಾಡಿದ್ರೆ ಏನು ತಪ್ಪು? ಖಾಸಗಿ ಕಾರಲ್ಲಿ ಓಡಾಡಿದ್ರೆ ತಪ್ಪಾ? ಮಾಧ್ಯಮಗಳಲ್ಲಿ ಬರುತ್ತಿರುವ ಎಲ್ಲಾ ಸುದ್ದಿಗಳು ಸುಳ್ಳು ಎಂದು ಆಕ್ರೋಶ ಹೊರಹಾಕಿದರು.

ಇಲ್ಲಿಯವರೆಗೂ ಜಾರಕಿಹೊಳಿ ಸಹೋದರರು ನನ್ನ ಮುಂದೆ ಯಾವುದೇ ಡಿಮ್ಯಾಂಡ್ ಇಟ್ಟಿಲ್ಲ. ಮಂತ್ರಿ ಸ್ಥಾನ ಕೇಳೋದು ತಪ್ಪಲ್ಲ. ಮಂತ್ರಿ ಸ್ಥಾನದ ಆಸೆ ಎಲ್ಲರಿಗೂ ಇರುತ್ತದೆ. ಎರಡು ಪಕ್ಷಗಳಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಇದ್ದಾರೆ. ಅರ್ಹತೆ ಇದ್ದವರು ಮಂತ್ರಿ ಸ್ಥಾನ ಕೇಳಿದರೆ ತಪ್ಪಾ? ಹೀಗಾಗಿ ಶಾಸಕರು ಸಭೆ ನಡೆಸುತ್ತಿದ್ದಾರೆ. ಅವರು ಸಭೆ ನಡೆಸಿದರೆ ತಪ್ಪೇ ಹೇಳಿ ಎಂದು ಪ್ರಶ್ನಿಸಿದರು.

ಅಗತ್ಯ ಬಿದ್ದರೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯುತ್ತೇನೆ. ನಮ್ಮ ಎಲ್ಲಾ ಶಾಸಕರು ಶಿಸ್ತಿನ ಸಿಪಾಯಿಗಳು. ಯಾರೂ ಸಹ ಪಕ್ಷ ಬಿಟ್ಟು ಹೋಗುವುದಿಲ್ಲ. ಆಪರೇಷನ್ ಕಮಲದ ಪಿತಾಮಹಗಳೇ ಬಿಜೆಪಿಯವರು. 2008 ರಲ್ಲಿ ಹೀಗೆ ಮಾಡಿ ಅಧಿಕಾರಕ್ಕೆ ಬಂದಿದ್ದರು. ಈಗಲೂ ಸಹ ಇದನ್ನೇ ಮಾಡಿ ಅಧಿಕಾರಕ್ಕೆ ಬರಲು ಹಗಲುಗನಸು ಕಾಣುತ್ತಿದ್ದಾರೆ. ಆದರೆ ಈಗ ಇದೆಲ್ಲಾ ಆಗಲ್ಲ, ಸಮ್ಮಿಶ್ರ ಸರ್ಕಾರ 5 ವರ್ಷ ಪೂರೈಸುತ್ತದೆ ಎಂದು ತಿಳಿಸಿದರು.

ಸಿಎಂ ಕುಮಾರಸ್ವಾಮಿಯರ ಕಿಂಗ್‍ಪಿನ್ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಬೆಳವಣಿಗೆಯ ಬಗ್ಗೆ ಸಿಎಂ ನನ್ನ ಜೊತೆ ಮಾತನಾಡಿಲ್ಲ. ನಾನೂ ಸಹ ಕೇಳಿಲ್ಲ. ಕಿಂಗ್‍ಪಿನ್ ವಿಚಾರ ಏನೇ ಇದ್ದರೂ ಅದನ್ನು ಅವರ ಬಳಿಯೇ ಕೇಳಿ. ನನಗೆ ಅದರ ಬಗ್ಗೆ ಏನೂ ಗೊತ್ತಿಲ್ಲ. ಬಿಜೆಪಿ ಆಪರೇಷನ್ ಕಮಲಕ್ಕೆ ಹೆದರಿ ಕಾಂಗ್ರೆಸ್ಸಿನವರು ರೆಸಾರ್ಟ್ ರಾಜಕಾರಣ ಮುಂದಾಗಿದ್ದಾರೆ ಎನ್ನುವ ಹೇಳಿಕೆಗಳು ಶುದ್ಧ ಸುಳ್ಳು. ಇದು ಸಹ ಮಾಧ್ಯಮಗಳ ಸೃಷ್ಟಿ. ಎಲ್ಲಾ ಶಾಸಕರು ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
1 Comment

Leave a Reply

Your email address will not be published. Required fields are marked *